'ಫಿಲಂ ಚೇಂಬರ್' ಎದುರು ಆತ್ಮಹತ್ಯೆಗೆ ಯತ್ನಿಸಿದ ಯುವ ನಟ
ಫಿಲಂ ಚೇಂಬರ್ ಎದುರು ಪ್ರತಿಭಟನೆ ನಡೆಯುವುದು ಸಾಮಾನ್ಯ. ಆದ್ರೀಗ, ವಾಣಿಜ್ಯ ಮಂಡಳಿ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಹೈದರಾಬಾದ್ನಲ್ಲಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ತೆಲುಗು ಚಿತ್ರರಂಗದ ಯುವನಟನೊಬ್ಬ ಕೀಟನಾಶಕ ಮದ್ದು ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.
ತಮ್ಮ ಸಿನಿಮಾವನ್ನ ಕೆಲವರು ಉದ್ದೇಶಪೂರ್ವಕವಾಗಿ ಯೂಟ್ಯೂಬ್ನಲ್ಲಿ ಅಪ್ ಲೌಡ್ ಮಾಡುತ್ತಿದ್ದಾರೆ, ನನಗೆ ನ್ಯಾಯ ಕೊಡಿಸಿ ಎಂದು ವಾಣಿಜ್ಯ ಮಂಡಳಿಗೆ ಬಂದು ದೂರು ನೀಡಿದ್ದಾರೆ. ನನಗೆ ನ್ಯಾಯ ಕೊಡಿಸಿಲ್ಲ ಅಂದ್ರೆ ನಾನು ಸಾಯುತ್ತೇನೆ ಎಂದು ಎಚ್ಚರಿಕೆ ನೀಡಿ, ಬಳಿಕ ಹೊರಗೆ ಬಂದು ಕೀಟನಾಶಕ ಮದ್ದು ಕುಡಿದಿದ್ದಾರೆ.
ಅಲ್ಲೇ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಅಂದ್ಹಾಗೆ, ಆತ್ಮಹತ್ಯೆಗೆ ಯತ್ನ ಮಾಡಿರುವ ನಟನ ಹೆಸರು ದುರ್ಗಾ ಪ್ರಸಾದ್. ನಾನಿಗಾಡು ಎಂಬ ಚಿತ್ರದಲ್ಲಿ ನಟಿಸಿದ್ದರು. ಸುಮಾರು 40 ಲಕ್ಷ ಖರ್ಚು ಮಾಡಿ ಈ ಸಿನಿಮಾ ಮಾಡಿದ್ದರಂತೆ. ಸೆನ್ಸಾರ್ ಮಂಡಳಿಯಿಂದಲೂ ಪಾಸ್ ಆಗಿದ್ದ ಈ ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ಸಿಕ್ಕಿತ್ತಂತೆ.
ಬಿಡುಗಡೆಗಾಗಿ ಎಲ್ಲ ತಯಾರಿ ನಡೆಸುತ್ತಿರುವ ಸಮಯದಲ್ಲಿ ಯೂಟ್ಯೂಬ್ ನಲ್ಲಿ ತಮ್ಮ ಸಿನಿಮಾ ಹರಿದಾಡುತ್ತಿರುವುದನ್ನ ಗಮನಿಸಿದ ದುರ್ಗಾ ಪ್ರಸಾದ್ ತೀವ್ರ ಆಘಾತಕ್ಕೆ ಒಳಗಾಗಿ, ಇಂತಹ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.


Click it and Unblock the Notifications











