ಮತ್ತೆ ಆದಿಪುರುಷ್ ಲುಕ್: ರಾಮಲೀಲಾದಲ್ಲಿ ರಾವಣನ ಸಂಹಾರ ಮಾಡಿದ ನಟ ಪ್ರಭಾಸ್
ದೇಶದೆಲ್ಲೆಡೆ ನಿನ್ನೆ ದಸರಾ ಸಂಭ್ರಮ ಮನೆ ಮಾಡಿತ್ತು. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. ವಿಜಯ ದಶಮಿಯ ದಿನ ಉತ್ತರ ಭಾರತಲ್ಲಿ ದಶ-ಹರ ಎನ್ನುವ ಪದ್ಧತಿಯ ಮೂಲಕ ದಸರಾವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ವಿಜಯ ದಶಮಿಯ ದಿನ ರಾವಣನನ್ನು ಸಂಹಾರ ಮಾಡುವುದು ಅಲ್ಲಿನ ಪದ್ಧತಿಯಾಗಿದೆ.
ನಿನ್ನೆ ಅಕ್ಟೋಬರ್ 5 ರಂದು ಉತ್ತರ ಭಾರತದ ದೆಹಲಿ ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಸೇರಿದಂತೆ ಬಹುತೇಕ ರಾಜ್ಯದಲ್ಲಿ ವಿಜಯ ದಶಮಿಯ ದಿನ ದಶ-ಹರ ಆಚರಣೆ ನಡೆಸಲಾಯಿತು. ಕೆಟ್ಟ ವಿಚಾರವನ್ನು ನಿರ್ನಾಮ ಮಾಡಬೇಕು ಎನ್ನುವ ಉದ್ದೇಶದಿಂದ ಉತ್ತರ ಭಾರತದ ಜನರು ವಿಜಯ ದಶಮಿಯ ದಿನ ರಾವಣ ಸಂಹಾರ ನಡೆಸುತ್ತಾರೆ.
ದೆಹಲಿಯಲ್ಲಿ ಈ ಬಾರಿ ಬಹಳ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಯಿತು. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ದಸರಾ ಉತ್ಸವ ಹಾಗೂ ರಾವಣ ದಹನ ಕಾರ್ಯಕ್ರಮದಲ್ಲಿ ಟಾಲಿವುಡ್ ನಟ ಪ್ರಭಾಸ್ ಭಾಗಿಯಾಗಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಭಾಸ್ ದಸರಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಬಾಹುಬಲಿ ನಟನನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ರಾಮಲೀಲಾ ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಭಾಸ್ ಮೊದಲು ವಿಶೇಷ ಆರತಿಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಆಯೋಜಕರೊಂದಿಗೆ ಪ್ರಭಾಸ್ ಕೂಡ ವಿಶೇಷ ಆರತಿ ಬೆಳಗಿದ್ದಾರೆ. ಪೂಜೆ ಸಲ್ಲಿಸಿದ ಬಳಿಕ ವೇದಿಕೆಗೆ ತೆರಳಿದ ಪ್ರಭಾಸ್ ವೇದಿಕೆಗೆ ತೆರಳಿ ಅಭಿಮಾನಿಗಳತ್ತ ಕೈಬೀಸಿದರು. ಬಳಿಕ ದಸರಾ ಕಾರ್ಯಕ್ರಮದ ಪ್ರಮುಖ ಘಟ್ಟ ಲಂಕೇಶ್ವರನ ಸಂಹಾರದಲ್ಲಿ ಭಾಗಿಯಾದರು.
ರಾವಣ ದಹನ ಕಾರ್ಯಕ್ರಮದ ವೇದಿಕೆ ಮೇಲೆ ಲಕ್ಷಾಂತರ ಅಭಿಮಾನಿಗಳ ಮುಂದೆ ಪ್ರಭಾಸ್ ಸ್ವತಃ ತಾವೇ ಬಿಲ್ಲು-ಬಾಣ ಹಿಡಿದು, ರಾವಣನೆಡೆಗೆ ಗುರಿಯಿಟ್ಟು ಬಾಣವನ್ನು ಪ್ರಯೋಗಿಸಿದರು. ಬಳಿಕ ನಮಸ್ಕರಿಸಿದರು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪ್ರಭಾಸ್ ರಾಮನಂತೆ ಕಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನು ಇತ್ತೀಚಿಗೆ ಪ್ರಭಾಸ್ ಮುಂದಿನ ಚಿತ್ರ ಆದಿಪುರುಷ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ನಿಂದ ಪ್ರಭಾಸ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. 500 ಕೋಟಿ ಬಜೆಟ್ನಲ್ಲಿ ತಯರಾಗಿದೆ ಎನ್ನಲಾದ ಆದಿಪುರುಷ್ ಸಿನಿಮಾ ಕಳಪೆ ಗುಣಮಟ್ಟದ ಗ್ರಾಫಿಕ್ಸ್ನಿಂದ ಭಾರೀ ಟೀಕೆಗೊಳಗಾಗಿದೆ. ಅತಿಯಾದ ನಿರೀಕ್ಷೆ ಹುಟ್ಟುಹಾಕಿದ್ದ ಆದಿಪುರುಷ್ ಚಿತ್ರ ಇದೀಗ ಟೀಸರ್ ಮೂಲಕ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗಿದೆ.
ಆದಿಪುರಷ್ ಟೀಸರ್ನಲ್ಲಿ ಪ್ರಭಾಸ್ ಹುರಿ ಮೀಸೆಯ ರಾಮನಾಗಿ ಕಾಣಿಸಿಕೊಂಡಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ನೋವು ಉಂಟು ಮಾಡಿದೆ ಎಂದು ಹಲವು ಕಮೆಂಟ್ ಮಾಡಿದ್ದಾರೆ. ಟೀಸರ್ನಲ್ಲಿ ಜಾಂಬುವಂತನ ಲುಕ್ ಹಾಗೂ ರಾವಣ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೈಫ್ ಅಲಿ ಖಾನ್ ಲುಕ್ ನೋಡುಗರಿಗೆ ಅತಿಯಾದ ನಿರಾಸೆ ಉಂಟು ಮಾಡಿದೆ. ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ರಾವಣ ಅಥವಾ ಅಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸುತ್ತಾರಾ ಎಂದು ಅನೇಕರು ಪ್ರಶ್ನಿಸಿದ್ದಾರೆ. ಅಷ್ಟರಮಟ್ಟಿಗೆ ಆದಿಪುರುಷ್ ಟೀಸರ್ ಕಳಪೆಮಟ್ಟದಾಗಿದೆ ಎನ್ನುವುದು ಪ್ರೇಕ್ಷಕರ ಅನಿಸಿಕೆಯಾಗಿದೆ.


Click it and Unblock the Notifications











