ಜಿದ್ದಾಜಿದ್ದಿನ ಸ್ಪರ್ಧೆ: ಚುನಾವಣೆಗೆ ನಾಮಪತ್ರ ಸಲ್ಲಿಸಿದ ಪ್ರಕಾಶ್ ರೈ
ನಟ ಪ್ರಕಾಶ್ ರೈ ಮತ್ತೊಮ್ಮೆ ಚುನಾವಣೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು. ಆ ಚುನಾವಣೆಯಲ್ಲಿ 29,906 ಮತಗಳನ್ನು ಪ್ರಕಾಶ್ ರೈ ಗಳಿಸಿದ್ದರು.
2019ರ ಚುನಾವಣೆ ಸೋಲಿನ ಬಳಿಕ ಚುನಾವಣೆಯಿಂದ ದೂರ ಉಳಿದಿದ್ದ ಪ್ರಕಾಶ್ ರೈ ಇದೀಗ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ ಇದು ರಾಜಕೀಯ ಚುನಾವಣೆಯಲ್ಲಿ ಬದಲಿಗೆ ಸಂಘದ ಚುನಾವಣೆ.
ತೆಲುಗು ಚಿತ್ರರಂಗದ ಪ್ರತಿಷ್ಠಿತ ಸಂಘವಾದ 'ಮೂವಿ ಆರ್ಟಿಸ್ಟ್ ಅಸೋಸಿಯೇಷನ್' (ಮಾ) ಚುನಾವಣೆಗೆ ಪ್ರಕಾಶ್ ರೈ ಸ್ಪರ್ಧಿಸುತ್ತಿದ್ದಾರೆ. ಇದು ಸಿಂಡಿಕೇಟ್ ಮಾದರಿಯಲ್ಲಿ ನಡೆವ ಚುನಾವಣೆ ಆಗಿದ್ದು, ಪ್ರಕಾಶ್ ರೈ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಟ ಮಂಚು ವಿಷ್ಣು ಎದುರು ಸ್ಪರ್ಧೆ ನಡೆಸುತ್ತಿದ್ದಾರೆ.

ನಾಮಪತ್ರ ಸಲ್ಲಿಸಿದ ಪ್ರಕಾಶ್ ರೈ
ಮಾ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ನಟ ಪ್ರಕಾಶ್ ರೈ ಇಂದು ಚುನಾವಣೆ ಅಧಿಕಾರಿಗಳ ಮುಂದೆ ನಾಮಪತ್ರ ಸಲ್ಲಿಸಿದ್ದಾರೆ. ಪ್ರಕಾಶ್ ರೈ ಮಾತ್ರವೇ ಅಲ್ಲದೆ ಅವರ ಸಿಂಡಿಕೇಟ್ನಲ್ಲಿರುವ ಒಟ್ಟು 27 ಮಂದಿ ಸಿಂಡಿಕೇಟ್ ಸದಸ್ಯರು ಸಹ ಚುನಾವಣೆಗೆ ನಾಮಿನೇಷನ್ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 29ರ ವರೆಗೆ ಅಭ್ಯರ್ಥಿಗಳು ನಾಮಿನೇಷನ್ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 30 ರಂದು ಪರಿಶೀಲನೆ ನಡೆಸಲಿದ್ದು, 1 ಮತ್ತು ಎರಡನೇ ತಾರೀಖಿನಂದು ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆಯಬಹುದಾಗಿದೆ. ಅಕ್ಟೋಬರ್ 10 ರಂದು ಚುನಾವಣೆ ನಡೆಯಲಿದೆ.

ಪ್ರಕಾಶ್ ರೈ ಎದುರು ಮಂಚು ವಿಷ್ಣು ಸ್ಪರ್ಧೆ
ಪ್ರಕಾಶ್ ರೈ ಎದುರು ನಾಯಕ ನಟ ಮಂಚು ವಿಷ್ಣು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದಾರೆ. ಮಂಚು ವಿಷ್ಣು ಸಹ ಪ್ರಬಲ ಸ್ಪರ್ಧಿಯೇ ಆಗಿದ್ದು, ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಪುತ್ರ ಇವರು. ಆದರೆ ಪ್ರಕಾಶ್ ರೈಗೆ ನಟ ಚಿರಂಜೀವಿ ಹಾಗೂ ಮೆಗಾಸ್ಟಾರ್ ಕುಟುಂಬದ ನಟರ ಬೆಂಬಲ ಲಭ್ಯವಾಗಿದೆ. ಹಾಗಾಗಿ ನಟ ಪ್ರಕಾಶ್ ರೈ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ.

ಪ್ರಕಾಶ್ ರೈ ಸಿಂಡಿಕೇಟ್ನಲ್ಲಿ ಯಾರ್ಯಾರಿದ್ದಾರೆ?
ಪ್ರಕಾಶ್ ರೈ ಸಿಂಡಿಕೇಟ್ನಲ್ಲಿ ಹಲವು ಪರಿಚಿತ ನಟ-ನಟಿಯರು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನಕ್ಕೆ ಮೇಕಾ ಶ್ರೀಕಾಂತ್, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮತ್ತು ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಜೀವಿತಾ ರಾಜಶೇಖರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಉತ್ತೇಜ್, ಅನಿತಾ ಚೌಧರಿ, ಖಜಾಂಚಿ ಸ್ಥಾನಕ್ಕೆ ನಾಗಿನೇಡು ಸ್ಪರ್ಧಿಸುತ್ತಿದ್ದಾರೆ. ಸಮಿತಿ ಸದಸ್ಯರ ಸ್ಥಾನಕ್ಕೆ, ಅನುಸೂಯಾ, ಅಜಯ್, ಭೂಪಾಲ್, ಬ್ರಹ್ಮಾಜಿ, ಈಟಿವಿ ಪ್ರಭಾಕರ್, ಗೋವಿಂದ ರಾವ್, ಖಾಯುಮ್, ಕೌಶಿಕ್, ಪ್ರಗತಿ, ರಮಣ ರೆಡ್ಡಿ, ಶ್ರೀಧರ್ ರಾವ್, ಶಿವಾ ರೆಡ್ಡಿ, ಸುಡಿಗಾಲಿ ಸುಧೀರ್, ಡಿ ಸುಬ್ಬರಾಜು, ಸುರೇಶ್ ಕೊಂಡೇಟಿ, ತನಿಶ್ ಮತ್ತು ತರ್ಜಾನ್ ಅವರುಗಳು ಸ್ಪರ್ಧಿಸುತ್ತಿದ್ದಾರೆ.

ಮಂಚು ವಿಷ್ಣು ಬಣದಲ್ಲಿ ಯಾರ್ಯಾರಿದ್ದಾರೆ?
ಮಂಚು ವಿಷ್ಣು ಬಣದಲ್ಲಿಯೂ ಪರಿಚಿತ ಮುಖಗಳಿವೆ. ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣು, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಪೋಷಕರ, ಹಾಸ್ಯ ನಟ ರಘು ಬಾಬು, ಕಾರ್ಯನಿರ್ವಹಾಕ ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಬಾಬು ಮೋಹನ್, ಉಪಾಧ್ಯಕ್ಷ ಸ್ಥಾನಕ್ಕೆ ಪೃಥ್ವಿರಾಜ ಬಾಲಿ ರೆಡ್ಡಿ ಮತ್ತು ಮದ್ದಾಲ ರವಿ, ಖಜಾಂಚಿ ಸ್ಥಾನಕ್ಕೆ ನಾಯಕ ನಟ, ಪೋಷಕ ನಟ ಶಿವ ಬಾಲಾಜಿ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಕರಾಟೆ ಕಲ್ಯಾಣಿ ಮತ್ತು ನಟ ಗೌತಮ್ ರಾಜು ಸ್ಪರ್ಧಿಸುತ್ತಿದ್ದಾರೆ. ಕಾರ್ಯನಿರ್ವಾಹಕ ಸದಸ್ಯರ ಸ್ಥಾನಕ್ಕೆ ಕನ್ನಡದ 'ಆ ದಿನಗಳು', 'ಮೈತ್ರಿ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಅರ್ಚನಾ. ಸಟೈರಿಕಲ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿರುವ ಸಂಪೂರ್ಣೇಶ್ ಬಾಬು, ನಟರಾದ ಅಶೋಕ್ ಕುಮಾರ್, ಗೀತಾ ಸಿಂಗ್, ಹರಿನಾತ್ ಬಾಬು, ಜಯವಾಣಿ, ಮಲಕ್ಪೇಟ ಶೈಲಜಾ, ಮಾಣಿಕ್, ಪೂಜಿತಾ, ರಾಜೇಶ್ವರಿ ರೆಡ್ಡಿ, ರೇಖಾ, ಶಶಾಂಕ್, ಶಿವನಾರಾಯಣ, ಶ್ರೀಲಕ್ಷ್ಮಿ, ಶ್ರೀನಿವಾಸುಲು, ಸ್ವಪ್ನ ಮಧುರಿ, ವಿಷ್ಣು ಭೋಪಣ್ಣ, ಎಂಆರ್ಸಿ ವಡ್ಲಪಟ್ಲ ಸ್ಪರ್ಧೆ ಮಾಡುತ್ತಿದ್ದಾರೆ.

ಜೋರಾಗಿ ನಡೆಯುತ್ತಿವೆ ಪಾರ್ಟಿಗಳು
ಎರಡೂ ಬಣಗಳ ನಡುವೆ ತುರುಸಿನ ಸ್ಪರ್ಧೆ ಈಗಾಗಲೇ ಏರ್ಪಟ್ಟಿದೆ. ಎರಡೂ ಪಕ್ಷಗಳು ಪ್ರಚಾರವನ್ನು ಬಹಳ ಜೋರಾಗಿ ನಡೆಸುತ್ತಿದ್ದಾರೆ. ಲಂಚ್, ಡಿನ್ನರ್ ಪಾರ್ಟಿ ಜೊತೆಗೆ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಎಣ್ಣೆ ಪಾರ್ಟಿಗಳೂ ಸಹ ನಡೆಯುತ್ತಿವೆ. ಜೊತೆಗೆ ಸ್ಪರ್ಧಿಗಳು ಎದುರಾಳಿಗಳ ಮೇಲೆ ಆರೋಪ ಪ್ರತ್ಯಾರೋಪ ಮಾಡುವುದು ಸಹ ಜೋರಾಗಿದೆ. ಪ್ರಕಾಶ್ ರೈ ಸ್ಥಳೀಯರಲ್ಲ, ಅವರು ಕರ್ನಾಟಕದಿಂದ ಬಂದವರು ಎಂಬ ಮಾತುಗಳು ಆರಂಭದಲ್ಲಿ ಜೋರಾಗಿ ಕೇಳಿ ಬಂದಿದ್ದವು ಆ ನಂತರ ಅವು ತಣ್ಣಗಾದವು. ಈಗ ಪ್ರಕಾಶ್ ರೈ ಬಣದಲ್ಲಿರುವ ಜೀವಿತಾ ರಾಜಶೇಖರ್ ವಿರುದ್ಧ ಜೋರಾಗಿ ಟೀಕೆಗಳು ಕೇಳಿ ಬರುತ್ತಿವೆ. ಜೀವಿತಾ ರಾಜಶೇಖರ್ ಹಿಂದೊಮ್ಮೆ ಮೆಗಾಸ್ಟಾರ್ ಚಿರಂಜೀವಿ ವಿರುದ್ಧ ಟೀಕೆಗಳನ್ನು ಮಾಡಿದ್ದರು.


Click it and Unblock the Notifications











