ವಿದೇಶಿ ವಿವಿಯಲ್ಲಿ ಓದುವ, ಬಡ ಯುವತಿಯ ಕನಸು ನನಸು ಮಾಡಿದ ಪ್ರಕಾಶ್ ರೈ
ಕೊರೊನಾ ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರಿಗೆ ನೆರವು ನೀಡಿದ್ದ ನಟ ಪ್ರಕಾಶ್ ರೈ, ಈಗ ಪ್ರತಿಭಾನ್ವಿತ ಯುವತಿಯೊಬ್ಬರ ಉನ್ನತ ವ್ಯಾಸಾಂಗದ ಕನಸು ನನಸು ಮಾಡಲು ಆರ್ಥಿಕ ಸಹಾಯ ನೀಡಿದ್ದಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಪೆದ್ದೇವಾರಂ ಗ್ರಾಮದ ಸಿರಿ ಚಂದನ ಎಂಬ ವಿದ್ಯಾರ್ಥಿನಿ ಬಿಎಸ್ಸಿ ಮುಗಿಸಿದ್ದು, ಆಕೆಗೆ ವಿದೇಶದ ಪ್ರತಿಷ್ಠಿತ ವಿವಿಯಲ್ಲಿ ಉನ್ನತ ವ್ಯಾಸಾಂಗಕ್ಕೆ ಸೀಟು ದೊರೆತಿತ್ತು. ಆದರೆ ಹಣದ ಸಮಸ್ಯೆಯಿಂದ ಶಿಕ್ಷಣವನ್ನು ಮೊಟಕುಗೊಳಿಸಲು ಉದ್ದೇಶಿಸಿದ್ದ ಯುವತಿಗೆ ಆಸರೆಯಾಗಿದ್ದಾರೆ ನಟ ಪ್ರಕಾಶ್ ರೈ.
ಸಿರಿ ಚಂದನಾಗೆ, ಬ್ರಿಟನ್ನ ಮ್ಯಾಂಚೆಸ್ಟರ್ನಲ್ಲಿ ಯೂನಿವರ್ಸಿಟಿ ಆಫ್ ಸ್ಟ್ಯಾಲ್ಫರ್ಡ್ ನಲ್ಲಿ ಉನ್ನತ ವ್ಯಾಸಾಂಗಕ್ಕೆ ಸೀಟು ದೊರೆತಿದೆ. ಆದರೆ ಬಡ ಕುಟುಂಬದ ಸಿರಿ ಚಂದನಾ ಗೆ ವಿದೇಶಕ್ಕೆ ಹೋಗಿ ವ್ಯಾಸಾಂಗ ಮಾಡುವಷ್ಟು ಹಣ ವಿರಲಿಲ್ಲ.

ಸಿರಿ ಚಂದನ ಗುರುಗಳಿಂದ ಪೋಸ್ಟ್
ಸಿರಿ ಚಂದನ ಬಗ್ಗೆ ಅವರ ಗುರುಗಳಾದ ನರೇಶ್ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಸಿರಿ ಚಂದನ ಶಿಕ್ಷಣಕ್ಕೆ ನೆರವಾಗುವಂತೆ ಮನವಿ ಮಾಡಿದ್ದರು. ಈ ಪೋಸ್ಟ್ ಹೇಗೋ ಪ್ರಕಾಶ್ ರೈ ಕಣ್ಣಿಗೆ ಬಿದ್ದಿದೆ.

ಸಂಪೂರ್ಣ ವೆಚ್ಚ ಭರಿಸುತ್ತಿರುವ ಪ್ರಕಾಶ್ ರೈ
ಕೂಡಲೇ ಸ್ಪಂದಿಸಿದ ಪ್ರಕಾಶ್ ರೈ, ಸಿರಿ ಚಂದನ ಅವರ ಓದಿನ ಸಂಪೂರ್ಣ ವೆಚ್ಚವನ್ನು ತಾವು ಭರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಸಿರಿ ಚಂದನ, ವಿದೇಶದಲ್ಲಿ ಉಳಿದುಕೊಳ್ಳುವ ಖರ್ಚು, ಟ್ಯುಶನ್ ಖರ್ಚು, ಪ್ರಯಾಣದ ಖರ್ಚನ್ನು ಪ್ರಕಾಶ್ ರೈ ಅವರೇ ಭರಿಸುತ್ತಿದ್ದಾರೆ.

ಪ್ರಕಾಶ್ ರೈಗೆ ಋಣಿಯಾಗಿರುತ್ತೇನೆ: ಸಿರಿ ಚಂದನ
ಈ ಬಗ್ಗೆ ಮಾತನಾಡಿರುವ ಸಿರಿ ಚಂದನ, 'ನಾನು ಸಣ್ಣವಳಿದ್ದಾಗಲೇ ತಂದೆ ತೀರಿಕೊಂಡರು. ಅಮ್ಮ ಇಷ್ಟು ವರ್ಷ ಕಷ್ಟಪಟ್ಟು ನನ್ನನ್ನು ಓದಿಸಿದ್ದಾರೆ. ಈಗ ವಿದೇಶದ ಪ್ರತಿಷ್ಠಿತ ವಿವಿಯಲ್ಲಿ ಸೀಟು ದೊರೆತಾಗ, ಇದು ನನ್ನ ಆರ್ಥಿಕ ಯೋಗ್ಯತೆಗೆ ತಕ್ಕುದಲ್ಲ ಎಂದು ಸುಮ್ಮನಾಗಿಬಿಟ್ಟಿದ್ದೆ. ಆದರೆ ಪ್ರಕಾಶ್ ರೈ ಅವರು ಮುಂದೆ ಬಂದು ಸಹಾಯ ಮಾಡಿದರು, ಅವರಿಗೆ ನಾನು ಋಣಿಯಾಗಿರುತ್ತೇನೆ' ಎಂದಿದ್ದಾರೆ.

ಕೊರೊನಾ ಸಮಯದಲ್ಲಿ ಪ್ರಕಾಶ್ ರೈ ಸಹಾಯ
ನಟ ಪ್ರಕಾಶ್ ರೈ ಅವರು ಕೊರೊನಾ ಸಮಯದಲ್ಲಿ ಸಹ ಹಲವಾರು ಕಾರ್ಮಿಕರಿಗೆ ಸಹಾಯ ಮಾಡಿದ್ದರು. ಕಾರ್ಮಿಕರು ಉಳಿದುಕೊಳ್ಳಲು ತಮ್ಮ ಫಾರಂ ಹೌಸ್ ಅನ್ನು ಸಹ ಬಿಟ್ಟುಕೊಟ್ಟಿದ್ದರು.


Click it and Unblock the Notifications











