Prakash Raj: ರಾಜ್ಯಸಭೆಗೆ ಪ್ರಕಾಶ್ ರೈ! ರೇಸ್ನಲ್ಲಿ ಇನ್ನೂ ಕೆಲವರು
ರಾಜಕೀಯ ಮಹತ್ವಾಕಾಂಕ್ಷೆ ಇರುವ ನಟ ಪ್ರಕಾಶ್ ರೈ. ನಟನೆ ಜೊತೆಗೆ ರಾಜಕೀಯ, ಸಾಮಾಜಿಕ ಹೋರಾಟಗಳಲ್ಲೂ ಸಕ್ರಿಯರಾಗಿರುವ ಪ್ರಕಾಶ್ ರೈ, ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದಾರೆ.
ಆದರೆ ಈಗ ಸಂಸದರಾಗುವ ಅವಕಾಶ ಪ್ರಕಾಶ್ ರೈ ಅವರನ್ನು ತಂತಾನೆ ಅರಸಿ ಬಂದಿದೆ. ಅವಕಾಶವೇನೋ ಇದೆಯಾದರೂ ಅದರಲ್ಲಿಯೂ ಸ್ಪರ್ಧೆ ಹುಟ್ಟಿಕೊಂಡಿದೆ.
ಬಹುತೇಕರಿಗೆ ಗೊತ್ತೇ ಇರುವಂತೆ ತೆಲಂಗಾಣ ಸಿಎಂ ಕೆಸಿಆರ್ ಅವರಿಗೆ ಪ್ರಕಾಶ್ ರೈ ಬಹಳ ಆಪ್ತರು. ಕರ್ನಾಟಕ ಅಥವಾ ಇನ್ನಿತರೆಗಳಿಗೆ ಕೆಸಿಆರ್ ಹೋದಾಗೆಲ್ಲ ಪ್ರಕಾಶ್ ರೈ ಅವರ ಜೊತೆಗಿರುತ್ತಾರೆ. ಇದೇ ಆಪ್ತತೆ ಆಧಾರದಲ್ಲಿ ಇದೀಗ ಕೆಸಿಆರ್ ಅವರು, ಪ್ರಕಾಶ್ ರೈ ಅವರನ್ನು ರಾಜ್ಯಸಭೆಗೆ ಕಳಿಸುವ ಚಿಂತನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಪ್ರಕಾಶ್ ರೈ ಮೇಲೆ ಕೆಸಿಆರ್ಗೆ ಒಲವು
ರಾಜಕೀಯದಲ್ಲಿ ಆಸಕ್ತಿ ಇರುವ, ವಿಚಾರವಾದಿ ಆಗಿರುವ ಪ್ರಕಾಶ್ ರೈಗೆ ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ತಮಿಳು ಭಾಷೆಗಳ ಮೇಲೆ ಹಿಡಿತವೂ ಚೆನ್ನಾಗಿದೆ. ಜೊತೆಗೆ ಕೆಸಿಆರ್ ಪಕ್ಷದ ಆದರ್ಶಗಳು, ಕೆಸಿಆರ್ ನಿಲವುಗಳ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ ಅವರನ್ನು ರಾಜ್ಯಸಭೆಗೆ ಕಳಿಸಿದರೆ ಉತ್ತಮ ಸಂಸದೀಯ ಪಟುವೊಬ್ಬರನ್ನು ನೀಡಿದಂತಾಗುತ್ತದೆ ಎಂಬುದು ಕೆಸಿಆರ್ ಲೆಕ್ಕಾಚಾರ.

ಮೂರು ಸ್ಥಾನಗಳು ತೆರವಾಗುತ್ತಿವೆ
ಇದೀಗ ಕೆಸಿಆರ್ ಪಕ್ಷದ ಡಿ.ಶ್ರೀನಿವಾಸ ಪ್ರಸಾದ್ ಹಾಗೂ ಕ್ಯಾಪ್ಟನ್ ಲಕ್ಷ್ಮೀಕಾಂತ್ ಅವರುಗಳು ರಾಜ್ಯಸಭೆಯಿಂದ ಅವಧಿ ಮುಗಿಸಿ ತೆರವಾಗುತ್ತಿದ್ದಾರೆ. ಬಂಡ ಪ್ರಕಾಶ್ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನವೂ ಖಾಲಿ ಇದೆ. ಈ ಮೂರು ಸ್ಥಾನಕ್ಕೆ ಹೊಸ ಸದಸ್ಯರ ಆಯ್ಕೆ ಮಾಡಬೇಕಿದೆ. ಮೂರು ಸ್ಥಾನಗಳಿಗೆ ಬರೋಬ್ಬರಿ ಹತ್ತಕ್ಕು ಹೆಚ್ಚು ಮಂದಿ ಆಕಾಂಕ್ಷಿಗಳು ಇದ್ದಾರೆ. ಅದರಲ್ಲಿ ಪ್ರಕಾಶ್ ರೈ ಸಹ ಒಬ್ಬರು. ಪ್ರಕಾಶ್ ರೈ ಟಿಆರ್ಎಸ್ ಪಕ್ಷದ ಸದಸ್ಯರಲ್ಲವಾದರೂ ಕೆಸಿಆರ್ಗೆ ಬಹು ಆಪ್ತ ವ್ಯಕ್ತಿಯಾಗಿದ್ದಾರೆ. ಅಲ್ಲದೆ, ಕೆಸಿಆರ್ ದೆಹಲಿ ರಾಜಕೀಯದ ಮುಖ ಮಾಡಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ರಾಷ್ಟ್ರರಾಜಕಾರಕ್ಕೆ ಸಹಕಾರಿ ಆಗಬಲ್ಲವರಿಗೆ ರಾಜ್ಯಸಭಾ ಟಿಕೆಟ್ ನೀಡುವ ಸಾಧ್ಯತೆ ಇದೆ.

ರಾಜ್ಯಸಭಾ ಟಿಕೆಟ್ಗೆ ಸ್ಪರ್ಧೆ ಸಾಕಷ್ಟಿದೆ
ಇನ್ನು ರಾಜ್ಯಸಭಾ ಟಿಕೆಟ್ಗೆ ಹಲವರು ಸ್ಪರ್ಧೆಯಲ್ಲಿದ್ದು, ಪಟ್ಟಿ ಇಂತಿದೆ; ಪೊಂಗಲೆಟ್ಟಿ ಶ್ರೀನಿವಾಸ್, ಸೀತಾರಾಮ ನಾಯಕ್, ವೇಣುಗೋಪಾಲ್, ಜ್ಯೂಬ್ಲಿ ಕೃಷ್ಣಾರಾವು, ಮಂದಾ ಜಗನ್ನಾಥಮ್, ಮಾಜಿ ಎಂಪಿ ಬೋಯಿನಪಲ್ಲಿ ವಿನೋದ್ ಕುಮಾರ್, ಎಂಎಲ್ಸಿ ಕವಿತಾ ಇನ್ನೂ ಕೆಲವರು ಟಿಆರ್ಎಸ್ ಪಕ್ಷದ ಮುಖಂಡರು ರಾಜ್ಯಸಭಾ ಆಕಾಂಕ್ಷಿಗಳಾಗಿದ್ದಾರೆ. ಇದರ ಜೊತೆಗೆ ಸಿನಿಮಾ ನಟರು ಸಹ ಕೆಲವರು ರಾಜ್ಯಸಭಾ ಸೀಟಿಗಾಗಿ ಒತ್ತಡ ಹೇರುತ್ತಿದ್ದಾರೆ. ಇವರ ಮಧ್ಯೆ ಪ್ರಕಾಶ್ ರೈಗೆ ರಾಜ್ಯಸಭಾ ಸೀಟು ದೊರಕುವುದೇ ಇಲ್ಲವೇ ಕಾದು ನೋಡಬೇಕಿದೆ.

ರಾಜಕೀಯದಲ್ಲಿ ಆಸಕ್ತಿಯುಳ್ಳ ಪ್ರಕಾಶ್ ರೈ
ಪ್ರಕಾಶ್ ರೈ ಮೊದಲಿನಿಂದಲೂ ರಾಜಕೀಯದಲ್ಲಿ ಆಸಕ್ತಿ ಉಳ್ಳವರೇ ಆಗಿದ್ದಾರೆ. ರಾಜಕೀಯ ಕುರಿತಾದ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿರುವ ಪ್ರಕಾಶ್ ರೈ, ತಮಗೆ ಸರಿ ಬಾರದನ್ನು ಖಂಡಿಸುವಲ್ಲಿ, ಟೀಕಿಸುವಲ್ಲಿ ಹಿಂದಡಿ ಇಟ್ಟವರಲ್ಲ. ಇದೇ ಕಾರಣದಿಂದಾಗಿ ಹಲವು ಬಾರಿ ವಿವಾದಕ್ಕೂ ತುತ್ತಾಗಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ನಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಪ್ರಕಾಶ್ ರೈ ಸೋತಿದ್ದರು. ಆ ಬಳಿಕ ಇತ್ತೀಚೆಗೆ ತೆಲುಗಿನ ಕಲಾವಿದರ ಸಂಘ 'ಮಾ' ಚುನಾವಣೆಗೆ ಸ್ಪರ್ಧಿಸಿ ಮತ್ತೆ ಸೋಲನುಭವಿಸಿದರು. ಇದೀಗ ರಾಜ್ಯಸಭೆ ರೇಸ್ನಲ್ಲಿದ್ದಾಗಿ ಇಲ್ಲಾದರೂ ಅವರಿಗೆ ಯಶಸ್ಸು ದೊರಕುತ್ತದೆಯೇ ಕಾದು ನೋಡಬೇಕಿದೆ.


Click it and Unblock the Notifications











