'ಲೈಗರ್' ಸೋಲು.. ಪ್ರತಿಭಟನೆ ಬೆದರಿಕೆ.. ಬ್ಲ್ಯಾಕ್ ಮೇಲ್ ಮಾಡಿದ್ರೆ ಒಂದು ರೂಪಾಯಿ ಕೊಡಲ್ಲ ಎಂದ ಪುರಿ: ಆಡಿಯೋ ವೈರಲ್
ಈ ವರ್ಷ ಭಾರೀ ಸದ್ದು ಮಾಡಿದ್ದ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್' ಸೋಲುಂಡಿದ್ದು ಗೊತ್ತೇಯಿದೆ. ಚಿತ್ರದಿಂದ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶನಕರಿಗೆ ಭಾರೀ ನಷ್ಟವಾಗಿತ್ತು. ಇದೀಗ ಪ್ರದರ್ಶನಕರು ಪುರಿ ಜಗನ್ನಾಥ್ ಆಫೀಸ್ ಮುಂದೆ ಧರಣಿ ನಡೆಸುವ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕುವವರಿಗೆ ನಿರ್ದೇಶಕರು ತಿರುಗೇಟು ನೀಡಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ನಟನೆಯ ಆಕ್ಷನ್ ಎಂಟರ್ಟೈನರ್ 'ಲೈಗರ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಭಾರೀ ಮೊತ್ತಕ್ಕೆ ವಿತರಕರು, ಪ್ರದರ್ಶಕರು ಸಿನಿಮಾ ಥಿಯೇಟ್ರಿಕಲ್ ರೈಟ್ಸ್ ಕೊಂಡುಕೊಂಡಿದ್ದರು. ಆದರೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಕೋಟಿ ಕೋಟಿ ನಷ್ಟ ತಂದಿತ್ತು. ಸಿನಿಮಾ ಸೋಲಿನ ನಂತರ ಚಿತ್ರತಂಡ ಮಾತನಾಡಲೇ ಇಲ್ಲ. ಇನ್ನು ಪುರಿ ಜಗನ್ನಾಥ್ ಪ್ರದರ್ಶಕರಿಗೆ ಒಂದಷ್ಟು ನಷ್ಟವನ್ನು ಭರಿಸಿ ಕೊಡುವುದಾಗಿ ಹೇಳಿದ್ದರು. ಆದರೆ ಪ್ರದರ್ಶಕರು ಕಾದು ಕಾದು ಸುಸ್ತಾಗಿ ನಿರ್ದೇಶಕರ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಕೆರಳಿದ ಪುರಿ ಜಗನ್ನಾಥ್ ಬ್ಲ್ಯಾಕ್ಮೇಲ್ ಮಾಡಿದ್ರೆ, ಒಂದು ರೂಪಾಯಿ ಕೊಡಲ್ಲ ಎಂದಿದ್ದಾರೆ.
'ಲೈಗರ್' ಚಿತ್ರದ ನೈಜಾಂ ಏರಿಯಾ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿತ್ತು. ನೈಜಾಂನ 83 ಜನ ಪ್ರದರ್ಶಕರು ಪುರಿ ಜಗನ್ನಾಥ್ ಆಫೀಸ್ ಮುಂದೆ ಧರಣಿ ನಡೆಸಲು ಮುಂದಾಗಿದ್ದರು. ಈ ವಿಷಯ ತಿಳಿದ ನಿರ್ದೇಶಕ ಗರಂ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

"ಒಂದು ರೂಪಾಯಿ ಕೂಡ ಕೊಡಲ್ಲ": ಪುರಿ ಜಗನ್ನಾಥ್
'ಏನು ಬ್ಲಾಕ್ ಮೇಲ್ ಮಾಡುತ್ತಿದ್ದೀರಾ ? ನಾನು ಯಾರಿಗೂ ಹಣ ಮರುಪಾವತಿ ಮಾಡಬೇಕಾಗಿಲ್ಲ, ಆದರೂ ನಾನು ಮಾಡುತ್ತಿದ್ದೇನೆ. ಯಾಕಂದರೆ ದುರದೃಷ್ಟವಶಾತ್ ಅವರೂ ಸೋತಿದ್ದಾರೆ ಎಂದು. ಈಗಾಗಲೇ ಖರೀದಿದಾರರೊಂದಿಗೆ ಮಾತುಕತೆ ನಡೆಸಲಾಗಿದೆ. ನಮ್ಮ ಒಪ್ಪಂದದ ಪ್ರಕಾರ ನಾನು ಹೇಳಿದ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸುತ್ತೇನೆ. ಇಷ್ಟು ಹೇಳಿದ ಮೇಲೂ ಮತ್ತೆ ಹೀಗೆ ಮಾಡುತ್ತಿದ್ದರೆ ಕೊಡಲು ಮನಸ್ಸಾಗುತ್ತಿಲ್ಲ. ಆದರೆ ನಾವೇಕೆ ಕೊಡುತ್ತಿದ್ದೇವೆ? ಗೌರವಕ್ಕಾಗಿ ನೀಡುತ್ತಿದ್ದೇವೆ. ನನ್ನ ಮರ್ಯಾದೆ ತೆಗೆಯಬೇಕು ಎಂದುಕೊಂಡರೆ ಒಂದು ರೂಪಾಯಿ ಕೂಡ ಕೊಡುವುದಿಲ್ಲ." ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.

ನಾವೆಲ್ಲಾ ಗ್ಯಾಂಬ್ಲಿಂಗ್ ಮಾಡ್ತಿದ್ದೀವಿ
"ನಾವೆಲ್ಲರೂ ಇಲ್ಲಿ ಗ್ಯಾಂಬ್ಲಿಂಗ್ ಮಾಡ್ತಿದ್ದೀವಿ. ಕೆಲವು ಸಿನಿಮಾಗಳು ಗೆಲ್ಲುತ್ತವೆ. ಕೆಲವು ಸಿನಿಮಾಗಳು ಸೋಲುತ್ತವೆ. 'ಪೋಕಿರಿ'ಯಿಂದ ಹಿಡಿದು 'ಇಸ್ಮಾರ್ಟ್ ಶಂಕರ್'ವರೆಗೆ ಪ್ರದರ್ಶಕರಿಂದ ನನಗೆ ಸಾಕಷ್ಟು ಹಣ ಬರಬೇಕಿದೆ. ಪ್ರದರ್ಶಕರ ಸಂಘವು ಆ ಮೊತ್ತವನ್ನು ನನಗೆ ವಸೂಲಿ ಮಾಡಿ ಮಾಡಿಕೊಡುತ್ತದೆಯೇ? ಧರಣಿ ಮಾಡುತ್ತೇವೆ ಎನ್ನುತ್ತಾರೆ. ಮಾಡಿ, ಧರಣಿ ಮಾಡಿದವರ ಪಟ್ಟಿ ಮಾಡಿ, ಅವರನ್ನು ಹೊರತುಪಡಿಸಿ ಉಳಿದವರಿಗೆ ಹಣ ವಾಪಸ್ ಕೊಡುತ್ತೇನೆ" ಎಂದು ಹೇಳಿರುವ ಅಡಿಯೋ ಕ್ಲಿಪ್ ವೈರಲ್ ಆಗಿದೆ.

ವಾಟ್ಸಾಪ್ ಮೆಸೇಜ್ ಸ್ಕ್ರೀನ್ಶಾಟ್ ವೈರಲ್
ಇನ್ನು 'ಲೈಗರ್' ಚಿತ್ರದಿಂದ ನಷ್ಟ ಅನುಭವಿಸಿದ ವಿತರಕರು, ಪ್ರದರ್ಶಕರು ನಿರ್ದೇಶಕ ಪುರಿ ಜಗನ್ನಾಥ್ ಆಫೀಸ್ ಮುಂದೆ ಧರಣಿಗೆ ನಡೆಸಲು ಪ್ಲ್ಯಾನ್ ನಡೆಸಿದ್ದಾರಂತೆ. ಅದಕ್ಕಾಗಿ ಪ್ರದರ್ಶಕರೆಲ್ಲಾ ಬರಬೇಕು ಎಂದು ವಾಟ್ಸಾಪ್ ಮೆಸೇಜ್ ಮಾಡಿದ್ದಾರೆ ಎಂದು ಸ್ಕ್ರೀನ್ಶಾಟ್ವೊಂದು ವೈರಲ್ ಆಗಿದೆ. "ಅಕ್ಟೋರ್ 27ರ ಗುರುವಾರ ಬೆಳಗ್ಗೆ 9 ಗಂಟೆಗೆ ಪುರಿ ಜಗನ್ನಾಥ್ ಮನೆ ಮುಂದೆ ಪ್ರದರ್ಶಕರು ಧರಣಿಗೆ ಹೊರಟಿದ್ದೇವೆ. ಧರಣಿಗಾಗಿ 4 ದಿನಕ್ಕೆ ಆಗುವಷ್ಟು ಬಟ್ಟೆಗಳನ್ನು ಪ್ರದರ್ಶನಕರು ತೆಗೆದುಕೊಂಡು ಬನ್ನಿ. ಎಲ್ಲರೂ ನಮಗ್ಯಾಕೆ ಎಂದು ಬರದೇ ಇದ್ದರೆ ಸಂತ್ರಸ್ತರ ಪಟ್ಟಿಯಿಂದ ಹೆಸರು ತೆಗೆಯುತ್ತೇವೆ. ಇದರಿಂದ ನಿಮಗೆ ಬರಬೇಕಾದ ಹಣ ಬರಲ್ಲ. ಆ ದಿನ ಬರದೇ ಇದ್ದರೆ ನಾವು ಫೋನ್ ಮಾಡಲ್ಲ, ಎಲ್ಲರೂ ನಷ್ಟ ಅನುಭವಿಸಿರುವುದರಿಂದ ಎಲ್ಲರೂ ಬರಬೇಕು. ಎಲ್ಲರು ಅಂದು ಬೆಳಗ್ಗೆ ವೇಣು ಗೋಪಾಲ ರೆಡ್ಡಿ ಅಫೀಸ್ ಬಳಿ ಬನ್ನಿ. ಅಲ್ಲಿಂದ ಪುರಿ ಜಗನ್ನಾಥ್ ಮನೆ ಬಳಿ ಹೋಗಬೇಕು. ದಯವಿಟ್ಟು ಬನ್ನಿ. ಹಣ ಬೇಡ ಎನ್ನುವವರು ಬರಬೇಡಿ" ಎಂದು ಆ ವಾಟ್ಸಾಪ್ ಮೆಸೇಜ್ನಲ್ಲಿದೆ.

ಅಟ್ಟರ್ ಫ್ಲಾಪ್ ಆಗಿದ್ದ 'ಲೈಗರ್'
ಆಗಸ್ಟ್ 25ರಂದು ತೆರೆಗಪ್ಪಳಿಸಿದ್ದ 'ಲೈಗರ್' ಚಿತ್ರಕ್ಕೆ ಮೊದಲ ಶೋನಿಂದಲೇ ನೆಗಟಿವ್ ಟಾಕ್ ಬಂದಿತ್ತು. ಅಂದಾಜು 100 ಕೋಟಿ ಬಜೆಟ್ನಲ್ಲಿ ಸಿದ್ಧವಾಗಿದ್ದ ಸಿನಿಮಾ ಸೋಲುಂಡಿತ್ತು. ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಆಗಿ ಅಬ್ಬರಿಸಿದ್ದಾರೆ. ಅನನ್ಯಾ ಪಾಂಡೆ ನಾಯಕಿಯಾಗಿ ಮಿಂಚಿದ್ದಳು. ರಮ್ಯಾಕೃಷ್ಣ, ಬಾಕ್ಸಿಂಗ್ ಲೋಕದ ದಂತಕಥೆ ಮೈಕ್ ಟೈಸನ್ ತಾರಾಗಣದಲ್ಲಿದ್ದರು. ಸಿನಿಮಾ ಕೆಲವೇ ದಿನಗಳಲ್ಲಿ ಓಟಿಟಿಗೆ ಬಂದರೂ ಪ್ರೇಕ್ಷಕರಿಗೆ ರುಚಿಸಿರಲಿಲ್ಲ.


Click it and Unblock the Notifications











