'ಆಚಾರ್ಯ' ಸಿನಿಮಾ ಹಿಂದಿಗೆ ಡಬ್ ಇಲ್ಲ: ರಾಮ್ ಚರಣ್ ಕೊಟ್ಟರು ಕಾರಣ
ಮಾರುಕಟ್ಟೆ ದೃಷ್ಟಿಯಿಂದ ಪ್ಯಾನ್ ಇಂಡಿಯಾ ಸಿನಿಮಾಗಳು ಲಾಭದಾಯಕ ಎನಿಸಿಕೊಂಡಿವೆ. ಸ್ಟಾರ್ ನಟರು ಮಾತ್ರವೇ ಅಲ್ಲ ಆವರೇಜ್ ನಟರೂ ಸಹ ತಮ್ಮ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡುತ್ತಿದ್ದಾರೆ.
ನಟ ರಾಮ್ ಚರಣ್ 'RRR' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಇನ್ನು ಮುಂದಿನ ಎಲ್ಲ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗಿರಲಿವೆ ಎನ್ನಲಾಗಿತ್ತು. ಆದರೆ 'RRR' ಯಶಸ್ಸಿನ ಗುಂಗು ಮರೆಯಾಗುವ ಮುನ್ನವೇ ಬರುತ್ತಿರುವ ಅವರದ್ದೇ ನಟನೆಯ 'ಆಚಾರ್ಯ' ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ.
ರಾಮ್ ಚರಣ್ ಹಾಗೂ ಚಿರಂಜೀವಿ ಇಬ್ಬರೂ ನಟಿಸಿರುವ 'ಆಚಾರ್ಯ' ಸಿನಿಮಾ ಪ್ಯಾನ್ ಇಂಡಿಯಾ ಮಾದರಿಗೆ ಹೇಳಿ ಮಾಡಿಸಿದ ಸಿನಿಮಾ ಆದರೂ ಸಹ ಸಿನಿಮಾದ ನಿರ್ಮಾಪಕರೂ ಆಗಿರುವ ರಾಮ್ ಚರಣ್ ತೇಜ ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.
Recommended Video


ಇದು ದಕ್ಷಿಣ ಭಾರತದ ಸಿನಿಮಾ: ರಾಮ್ ಚರಣ್
ಕಾರ್ಯಕ್ರಮದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ರಾಮ್ ಚರಣ್ ತೇಜ, ''ಆಚಾರ್ಯ' ಸಿನಿಮಾ ಪೂರ್ಣವಾಗಿ ದಕ್ಷಿಣ ಭಾರತದ ನೇಟಿವಿಟಿ, ಸಂಸ್ಕೃತಿ, ಸಂಪ್ರದಾಯಗಳು ಹೊಂದಿರುವ ಸಿನಿಮಾ. ಈ ಸಿನಿಮಾ ಹಿಂದಿ ಭಾಷಿಕರಿಗೆ ಕನೆಕ್ಟ್ ಆಗುವುದಿಲ್ಲ ಹಾಗಾಗಿ ನಾವು ಈ ಸಿನಿಮಾವನ್ನು ಕನ್ನಡ, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಮಾಡುತ್ತಿದ್ದೇವೆಯೇ ಹೊರತು ಹಿಂದಿ ಭಾಷೆಗೆ ಮಾಡುತ್ತಿಲ್ಲ'' ಎಂದಿದ್ದಾರೆ.

ಡಬ್ ಆಗದೇ ಇರುವುದು ಬೇಸರವಿಲ್ಲ: ರಾಮ್
''ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿದಾಗಿನಿಂದಲೂ ನಿರ್ದೇಶಕ ಕೊರಟಾಲ ಶಿವ ಬಗ್ಗೆ ಕ್ಲಾರಿಟಿ ಹೊಂದಿದ್ದರು. ಸಿನಿಮಾವನ್ನು ದಕ್ಷಿಣ ಭಾರತದ ಪ್ರೇಕ್ಷಕರನ್ನಷ್ಟೆ ಮನಸ್ಸಿನಲ್ಲಿಟ್ಟುಕೊಂಡು ಮಾಡಲಾಗಿದೆ ಆದ್ದರಿಂದ ಹಿಂದಿ ಭಾಷೆಗೆ ಡಬ್ ಮಾಡಬಾರದು ಎಂಬುದು ಅವರ ಸ್ಪಷ್ಟ ನಿಲವಾಗಿತ್ತು. ನಮ್ಮ ಸಿನಿಮಾ ಹಿಂದಿಗೆ ಡಬ್ ಆಗದೇ ಇರುವ ಬಗ್ಗೆ ನಮಗೆ ಬೇಸರ ಸಹ ಇಲ್ಲ'' ಎಂದಿದ್ದಾರೆ ರಾಮ್ ಚರಣ್ ತೇಜ.

ಹಿಂದಿಗೆ ಡಬ್ ಮಾಡದೇ ಇರುವುದಕ್ಕೆ ಕಾರಣ ಬೇರೆ
ಆದರೆ ಮೂಲಗಳ ಪ್ರಕಾರ ಹಿಂದಿಗೆ ಡಬ್ ಮಾಡದೇ ಇರುವುದಕ್ಕೆ ಕಾರಣ ಬೇರೆಯೇ ಇದೆ. 'RRR' ಮೂಲಕ ರಾಮ್ ಚರಣ್ಗೆ ಹಿಂದಿ ಪ್ರದೇಶದಲ್ಲಿ ದೊಡ್ಡ ಅಭಿಮಾನಿ ವರ್ಗ ಧಕ್ಕಿದೆ. 'RRR'ಗೆ ಹೋಲಿಸಿದರೆ 'ಆಚಾರ್ಯ' ಸಿನಿಮಾ ಕತೆ ಇನ್ನಿತರ ವಿಷಯಗಳಲ್ಲಿ ಕಡಿಮೆ ಗುಣಮಟ್ಟದ್ದಾಗಿದೆ. ಅಲ್ಲದೆ 'ಆಚಾರ್ಯ'ನಲ್ಲಿ ಚಿರಂಜೀವಿ ಹೀರೋ, ರಾಮ್ ಚರಣ್ ಅಲ್ಲ, ಹಾಗಾಗಿ 'RRR' ಮೂಲಕ ತಮಗೆ ಸೃಷ್ಟಿಯಾಗಿರುವ 'ಇಮೇಜ'ನ್ನು ಹಾಗೆಯೇ ಉಳಿಸಿಕೊಳ್ಳುವ ಕಾರಣ 'ಆಚಾರ್ಯ' ಸಿನಿಮಾ ಮೂಲಕ ಹಿಂದಿಯಲ್ಲಿ ಬಿಡುಗಡೆ ಮಾಡಲಾಗುತ್ತಿಲ್ಲ ಎನ್ನಲಾಗುತ್ತಿದೆ.

ಏಪ್ರಿಲ್ 29ಕ್ಕೆ ಸಿನಿಮಾ ಬಿಡುಗಡೆ
ಇನ್ನು 'ಆಚಾರ್ಯ' ಸಿನಿಮಾ ಏಪ್ರಿಲ್ 29 ರಂದು ತೆರೆಗೆ ಬರಲಿದೆ. ನಟ ಮೆಗಾಸ್ಟಾರ್ ಚಿರಂಜೀವಿ ಈ ಸಿನಿಮಾದಲ್ಲಿ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಚರಣ್ ತೇಜ ಸಹ ಸಿನಿಮಾದಲ್ಲಿದ್ದು, ಅವರ ಪಾತ್ರ ಕತೆಯ ಕೆಲ ಭಾಗಗಳಲ್ಲಿ ಅಷ್ಟೆ ಇರಲಿದೆ. ಸಿನಿಮಾಕ್ಕೆ ನಟಿ ಕಾಜಲ್ ಅಗರ್ವಾಲ್ ನಾಯಕಿ, ರಾಮ್ ಚರಣ್ಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಕೊರಟಾಲ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಸೂನು ಸೂದ್ ಸೇರಿ ಹಲವು ಖಡಕ್ ವಿಲನ್ಗಳಿದ್ದಾರೆ. ಸಿನಿಮಾದಲ್ಲಿ ಹಾಕಲಾಗಿರುವ ದೇವಾಲಯ ಹಾಗೂ ಹಳ್ಳಿಯ ಸೆಟ್ ಏಷ್ಯಾದಲ್ಲಿಯೇ ದೊಡ್ಡ ಸೆಟ್ ಎನ್ನಲಾಗುತ್ತಿದೆ.


Click it and Unblock the Notifications











