ದೇವರಿಗೆ ವಿಸ್ಕಿ ಕುಡಿಸಿದ ರಾಮ್ ಗೋಪಾಲ್ ವರ್ಮಾ!
ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ವಿವಾದಗಳೆಂದರೆ ಅಚ್ಚು-ಮೆಚ್ಚು. ಸುದ್ದಿಯಲ್ಲಿರದೆ, ಚರ್ಚೆಯಲ್ಲಿರದೆ ಅವರಿಗೆ ಇರಲಾಗದು. ಸುದ್ದಿಯಲ್ಲಿರಬೇಕೆಂಬ ಕಾರಣದಿಂದಲೇ ವಿವಾದ ಎಬ್ಬಿಸುವ ಟ್ವೀಟ್ಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತಾರೆ. ಸ್ಟಾರ್ ನಟರನ್ನು ಅಕಾರಣ ಮೂದಲಿಸುತ್ತಾರೆ.
ಈಗ ಮತ್ತೆ ರಾಮ್ ಗೋಪಾಲ್ ವರ್ಮಾ ಸುದ್ದಿಗೆ ಬಂದಿದ್ದಾರೆ. ಈ ಬಾರಿ ಅವರು ದೇವರಿಗೆ ವಿಸ್ಕಿ ಕುಡಿಸಿದ್ದಾರೆ.
ತಾವು ನಿರ್ದೇಶಿಸುತ್ತಿರುವ ಹೊಸ ಸಿನಿಮಾ 'ಕೊಂಡ'ದ ಸಮಾರಂಭದಲ್ಲಿ ಭಾಗವಹಿಸಲು ರಾಮ್ ಗೋಪಾಲ್ ವರ್ಮಾ ವರಾಂಗಲ್ಗೆ ತೆರಳಿದ್ದು, ಸಿನಿಮಾ ಆರಂಭಿಸುವ ಮುನ್ನಾ ವರಾಂಗಲ್ನ ಮೈಸಮ್ಮ ದೇವಿಗೆ ಪೂಜೆ ಮಾಡಿದ್ದಾರೆ. ಈ ಸಂದರ್ಭ ದೇವಿ ಮೂರ್ತಿಗೆ ವಿಸ್ಕಿ ಕುಡಿಸಿದ್ದಾರೆ. ಮದ್ಯ ನೈವೇದ್ಯ ಮಾಡಿದ್ದಾರೆ.
ಮೈಸಮ್ಮ ದೇವತೆಯ ಮೂರ್ತಿಗೆ ವಿಸ್ಕಿ ಕುಡಿಸುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ''ನಾನು ವೋಡ್ಕಾ ಮಾತ್ರವೇ ಕುಡಿಯುತ್ತೇನೆ ಆದರೆ ದೇವತೆ ಮೈಸಮ್ಮನಿಗೆ ವಿಸ್ಕಿ ಕುಡಿಸಿದೆ'' ಎಂದಿದ್ದಾರೆ. ವರ್ಮಾ ಹಾಕಿರುವ ಪೋಸ್ಟ್ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ವರ್ಮಾಗೆ ಹಿಂದು ದೇವತೆಗಳ ಬಗ್ಗೆ ಗೌರವವಿಲ್ಲ ಎಂದು ಸಹ ಕೆಲವರು ಮೂದಲಿಸಿದ್ದಾರೆ. ಕೆಲವರು, 'ಮದ್ಯದ ಜೊತೆಗೆ ಕೆಎಫ್ಸಿ ಚಿಕನ್ ಸಹ ನೀಡಬೇಕಿತ್ತು' ಎಂದು ಹಾಸ್ಯ ಮಾಡಿದ್ದಾರೆ.

ಮದ್ಯ ಅಭಿಷೇಕ ಮಾಡುವುದು ಸಾಮಾನ್ಯ
ಆದರೆ ವರ್ಮಾ ಮಾಡಿರುವ ಈ ಕಾರ್ಯ ಹೊಸದೇನೂ ಅಲ್ಲ. ವರಾಂಗಲ್ನಲ್ಲಿ ಮೈಸಮ್ಮ ದೇವರಿಗೆ ಮದ್ಯವನ್ನು ಅಭಿಷೇಕ ಮಾಡಲಾಗುತ್ತದೆ. ಮೈಸಮ್ಮ ದೇವರಿಗೆ ಕಳ್ಳು (ಸಾರಾಯಿ) ನೈವೇದ್ಯ ನೀಡುವುದು ತೆಲಂಗಾಣ ರಾಜ್ಯದಲ್ಲಿ ಪದ್ಧತಿ. ವರಾಂಗಲ್ನಲ್ಲಿ ಮಾತ್ರವೇ ಅಲ್ಲ ಕರ್ನಾಟಕದ ಕೆಲವು ದೇವಾಲಯಗಳಲ್ಲಿಯೂ ದೇವರಿಗೆ ಮದ್ಯ ಸಮರ್ಪಿಸುವ ಸಂಪ್ರದಾಯ ಇದೆ. ಆಂಧ್ರ-ತೆಲಂಗಾಣಗಳಲ್ಲಿ ಈ ಸಂಪ್ರದಾಯ ಹೆಚ್ಚಾಗಿಯೇ ಇದೆ.

ತೆಲಂಗಾಣದ ರಕ್ತ ಚರಿತ್ರೆ ಹೇಳುತ್ತಿದ್ದೇನೆ: ವರ್ಮಾ
ರಾಮ್ ಗೋಪಾಲ್ ವರ್ಮಾ ಬಹಳ ದಿನಗಳ ಬಳಿಕ ತಮ್ಮ ಹಳೆಯ ಧಾಟಿಗೆ ಮರಳುವ ಸೂಚನೆಯನ್ನು ಕೊಂಡ ಸಿನಿಮಾದ ಮೂಲಕ ನೀಡಿದ್ದಾರೆ. 'ಕೊಂಡ' ಸಿನಿಮಾವು ಕೊಂಡ ಮುರಳಿ, ಕೊಂಡ ಸುರೇಖ ಜೀವನ ಆಧರಿಸಿದ ಸಿನಿಮಾ ಆಗಿದೆ. ಭೂ ಮಾಲೀಕರ ವಿರುದ್ಧ ತಿರುಗಿ ಬಿದ್ದ, ನಕ್ಸಲೈಟ್ ಚಲವಳಿ ನೋಡಿ ಬಂದು ಈಗ ರಾಜಕೀಯದಲ್ಲಿ ಸೆಟಲ್ ಆಗಿರುವ ಈ ದಂಪತಿಗಳ ಸಾಹಸದ ಬಗ್ಗೆ ವರಾಂಗಲ್ನಲ್ಲಿ ತಿಳಿಯದವರಿಲ್ಲ. ''ನಾನು ಸಿನಿಮಾ ತೆಗೆಯುತ್ತಿಲ್ಲ ಬದಲಿಗೆ ತೆಲಂಗಾಣದ ರಕ್ತ ಚರಿತ್ರೆ ಹೇಳುತ್ತಿದ್ದೇನೆ'' ಎಂದು 'ಕೊಂಡ' ಸಿನಿಮಾದ ಬಗ್ಗೆ ವರ್ಮಾ ಹೇಳಿದ್ದಾರೆ.

ಕೊಂಡ ದಂಪತಿಯ ಜೀವನ ಕತೆ
'ಕೊಂಡ' ಸಿನಿಮಾವು 80 ರ ದಶಕದ ನಕ್ಸಲ್ ಹಿನ್ನೆಲೆಯ ಕತೆ ಹೊಂದಿರಲಿದೆ. 'ಪಿರಿಯಾಡಿಕ್ ಲವ್ ಸ್ಟೋರಿ" ಎಂದು ವರ್ಮಾ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾ ಘೋಷಣೆಯಾಗುತ್ತಿದ್ದಂತೆ ತೆಲಂಗಾಣದಲ್ಲಿ ಅದರಲ್ಲೂ ವಿಶೇಷವಾಗಿ ಕೊಂಡಾ ದಂಪತಿಗಳ ಒಂದು ಕಾಲದ ಭದ್ರಕೋಟೆಯಾಗಿದ್ದ ವಾರಂಗಲ್ ಜಿಲ್ಲೆಯಲ್ಲಿ ಇದು ಸಂಚಲನವನ್ನು ಉಂಟು ಮಾಡಿದೆ. ಕೆಲವು ವರ್ಷಗಳ ಹಿಂದಿನವರೆಗೂ ವಾರಂಗಲ್ ರಾಜಕೀಯದಲ್ಲಿ ಶಕ್ತಿ ಕೇಂದ್ರವಾಗಿದ್ದ ಕೊಂಡಾ ಸುರೇಖಾ-ಮುರಳಿ ದಂಪತಿಗೆ ಸಂಬಂಧಿಸಿದ ಪ್ರಮುಖ ಸಂಗತಿಗಳನ್ನು ಸಂಗ್ರಹಿಸಿರುವ ವರ್ಮಾ, ಈ ಚಿತ್ರದ ಮೂಲಕ ತೆಲಂಗಾಣ ರಾಜಕೀಯ ಹಿನ್ನೆಲೆಯ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ.

ದಿಕ್ಕು ತಪ್ಪಿದಂತಾಗಿರುವ ರಾಮ್ ಗೋಪಾಲ್ ವರ್ಮಾ
ಒಂದು ಕಾಲದಲ್ಲಿ ಭಾರತೀಯ ಸಿನಿಮಾ ರಂಗದ ದಿಕ್ಕನ್ನೇ ಬದಲಾಯಿಸಿ ನಿರ್ದೇಶಕ ಎನಿಸಿಕೊಂಡಿದ್ದ ವರ್ಮಾ ಈಗ ತಾವೇ ದಿಕ್ಕು ತಪ್ಪಿದಂತಾಗಿದ್ದಾರೆ. ಹಲವು ಸಾಫ್ಟ್ ಪೋರ್ನ್ ಸಿನಿಮಾಗಳನ್ನು ಮಾಡಿದ ವರ್ಮಾ, ವೆಬ್ಸೈಟ್ಗಳಲ್ಲಿ ಬಿಡುಗಡೆ ಮಾಡಿ ಹಣ ಮಾಡಿದರು. ನಂತರ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಮೇಲಿನ ತಮ್ಮ ವೈಯಕ್ತಿಕ ದ್ವೇಷದಿಂದ ಅವರ ವಿರುದ್ಧ ಸಿನಿಮಾಗಳನ್ನು ಮಾಡಿದರು. ತಮ್ಮ ಹಳೆಯ ಟಚ್ ಮರೆತಿರುವ ರಾಮ್ ಗೋಪಾಲ್ ವರ್ಮಾ 'ಕೊಂಡ' ಸಿನಿಮಾದ ಮೂಲಕವಾದರೂ ಹಳೆಯ ಲಯಕ್ಕೆ ಮರಳುತ್ತಾರಾ ಕಾದು ನೋಡಬೇಕಿದೆ.


Click it and Unblock the Notifications











