ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ತೆಲುಗು ನಟನಿಗೆ ಬೆಂಗಳೂರು ಪೊಲೀಸರ ನೊಟೀಸ್
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಜಾಲ ವಿಸ್ತೃತಗೊಳ್ಳುತ್ತಲೇ ಇದೆ. ಇಷ್ಟು ದಿನ ಸ್ಯಾಂಡಲ್ವುಡ್ ಗೆ ಮಾತ್ರ ಸೀಮಿತವಾಗಿದ್ದ ಪ್ರಕರಣ ಈಗ ರಾಜ್ಯವನ್ನು ದಾಟಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟನೊಬ್ಬನಿಗೆ ನೊಟೀಸ್ ನೀಡಿ ವಿಚಾರಣೆಗೆ ತುರ್ತಾಗಿ ಹಾಜರಾಗುವಂತೆ ಕೇಳಿದ್ದಾರೆ.
ತೆಲುಗು ಬಿಗ್ಬಾಸ್ 2 ಸ್ಪರ್ಧಿಯಾಗಿದ್ದ ಹಾಗೂ ಕೆಲವು ಸಿನಿಮಾದಲ್ಲಿಯೂ ನಟಿಸಿರುವ ತನಿಶ್ ಅಲ್ಲಾಡಿ ಗೆ ಬೆಂಗಳೂರು ಪೊಲೀಸರು ಇಂದು (ಮಾರ್ಚ್ 13) ರಂದು ನೊಟೀಸ್ ನೀಡಿದ್ದು ಎರಡು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ 'ಕೆಂಪೇಗೌಡ 2' ನಿರ್ಮಾಪಕ ಶಂಕರೇಗೌಡ ಹಾಗೂ ಕನ್ನಡ ಬಿಗ್ಬಾಸ್ ಮಾಜಿ ಸ್ಪರ್ಧಿ ಮಸ್ತಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದರು ಪೊಲೀಸರು. ಅವರು ನೀಡಿದ ಮಾಹಿತಿ ಆಧಾರದ ಮೇಲೆ ತೆಲಗು ನಟ ತನೀಶ್ಗೆ ನೊಟೀಸ್ ನೀಡಲಾಗಿದೆ.

'ಶಂಕರೇಗೌಡರನ್ನು ಎರಡು ವರ್ಷದ ಹಿಂದೆ ಭೇಟಿಯಾಗಿದ್ದೆ'
ಈ ಬಗ್ಗೆ ಸ್ಪಷ್ಟನೆ ನೀಡಿರುವ ತನೀಶ್, 'ನನಗೆ ಬೆಂಗಳೂರು ಪೊಲೀಸರಿಂದ ನೊಟೀಸ್ ಬಂದಿರುವುದು ನಿಜ. ಬಿಗ್ಬಾಸ್ ನಂತರ ನಾನು ಕರ್ನಾಟಕದ ನಿರ್ಮಾಪಕ ಶಂಕರೇಗೌಡ ಅವರನ್ನು ಭೇಟಿ ಆಗಿದ್ದೆ. ಬೆಂಗಳೂರಿಗೆ ಹೋಗಿ ಅವರೊಟ್ಟಿಗೆ ಸಿನಿಮಾ ಸಬಂಧ ಮಾತನಾಡಿದ್ದೆ, ಆದರೆ ಆ ಸಿನಿಮಾ ಮುಂದುವರೆಯಲಿಲ್ಲ. ಈ ಘಟನೆ ನಡೆದು ಎರಡು ವರ್ಷವಾಗಿದೆ' ಎಂದಿದ್ದಾರೆ ತನೀಶ್.

ನನ್ನನ್ನು ಅಪರಾಧಿ ಎಂಬಂತೆ ಬಿಂಬಿಸಲಾಗುತ್ತಿದೆ: ತನೀಶ್
67 ಎನ್ಡಿಪಿಸಿ ಆಕ್ಟ್ ಅನ್ವಯ ನನಗೆ ನೊಟೀಸ್ ನೀಡಲಾಗಿದೆ. ಆರೋಪಿಯ ಸುತ್ತ-ಮುತ್ತ ಇದ್ದವರಿಂದ ಮಾಹಿತಿ ಕಲೆಹಾಕಲು ನೀಡಿರುವ ನೊಟೀಸ್ ಇದು. ಆದರೆ ಮಾಧ್ಯಮಗಳಲ್ಲಿ ನಾನೇ ಅಪರಾಧಿ ಎಂಬಂತೆ ಬಿಂಬಿಸಲಾಗುತ್ತಿದೆ. ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ. ನನಗೆ ಮಾತ್ರವೇ ಅಲ್ಲದೆ, ಆ ಬಂಧಿತ ನಿರ್ಮಾಪಕನಿಗೆ ಸಂಬಂಧಿಸಿದ ಇನ್ನೂ ಕೆಲವರಿಗೆ ನೊಟೀಸ್ ನೀಡಲಾಗಿದೆ ಎಂದಿದ್ದಾರೆ ತನೀಶ್.

ಜೈಲು ಸೇರಿದ್ದ ರಾಗಿಣಿ-ಸಂಜನಾ
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದು ವರ್ಷವಾಗುತ್ತಾ ಬಂತು. ಆದರೆ ಬಂಧನಗಳು ಈಗಲೂ ಆಗುತ್ತಲೇ ಇವೆ. ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಇನ್ನೂ ಹಲವಾರು ಮಂದಿ ಪ್ರಭಾವಿಗಳು ಈ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ರಾಗಿಣಿ ಹಾಗೂ ಸಂಜನಾ ಅವರುಗಳು ಜಾಮೀನಿನ ಮೇಲೆ ಹೊರಗಿದ್ದಾರೆ.
Recommended Video

ಸುಶಾಂತ್ ಸಿಂಗ್ ಪ್ರಕರಣ ಸಖತ್ ಸದ್ದು ಮಾಡಿತ್ತು
ಬಾಲಿವುಡ್ನಲ್ಲಿಯೂ ಡ್ರಗ್ಸ್ ಪ್ರಕರಣ ಸಾಕಷ್ಟು ಸುದ್ದಿ ಮಾಡಿದೆ. ಸುಶಾಂತ್ ಸಿಂಗ್ ಸಾವಿನ ನಂತರ ಹೊರಬಿದ್ದ ಡ್ರಗ್ಸ್ ಪ್ರಕರಣದಲ್ಲಿ ಸ್ಟಾರ್ ನಟ-ನಟಿಯರು ವಿಚಾರಣೆಗೆ ಒಳಗಾದರು. ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಬಂಧನ ಸಹ ಆಯಿತು.


Click it and Unblock the Notifications











