'ಬಾಹುಬಲಿ'ಗೆ 6 ವರ್ಷ: ಸಿನಿಮಾವನ್ನು ಪ್ರಭಾಸ್ ನೆನಪಿಸಿಕೊಂಡಿದ್ದು ಹೀಗೆ
'ಬಾಹುಬಲಿ' ಸಿನಿಮಾವು ಭಾರತೀಯ ಸಿನಿಮಾ ಇತಿಹಾಸದಲ್ಲಿ ಮೈಲಿಗಲ್ಲಾಗಿ ನಿಂತ ಸಿನಿಮಾ. ಹಲವು ಕಾರಣಗಳಿಗೆ 'ಬಾಹುಬಲಿ' ಭಾರತೀಯ ಸಿನಿಮಾರಂಗದ ಮಟ್ಟಿಗೆ ಮಹತ್ವದ ಸಿನಿಮಾ. ಇಂತಿಪ್ಪ 'ಬಾಹುಬಲಿ' ಸಿನಿಮಾ ಬಿಡುಗಡೆ ಆಗಿ ಇಂದಿಗೆ ಆರು ವರ್ಷವಾಯಿತು.
ರಾಜಮೌಳಿ ನಿರ್ದೇಶಿಸಿ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಬಾಹುಬಲಿ; ದಿ ಬಿಗಿನಿಂಗ್' ಸಿನಿಮಾ 2015 ರ ಜುಲೈ 10 ರಂದು ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿತ್ತು. ಪ್ರೇಕ್ಷಕರನ್ನು ಹೊಸ ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗಿಬಿಟ್ಟಿತ್ತು.
ಆ ಸಿನಿಮಾದಲ್ಲಿ ನಟಿಸಿದ ನಟರಿಗೆ 'ಬಾಹುಬಲಿ'ಯು ವೃತ್ತಿ ಜೀವನದಲ್ಲಿ ಚಿಮ್ಮು ಹಲಗೆಯಂತಾಗಿ ದೊಡ್ಡ ಎತ್ತರಕ್ಕೆ ಏರಲು ಕಾರಣವಾದ ಸಿನಿಮಾ 'ಬಾಹುಬಲಿ'. ಅದರಲ್ಲೂ ವಿಶೇಷವಾಗಿ ಪ್ರಭಾಸ್ 'ಬಾಹುಬಲಿ' ನಂತರ ವಿಶ್ವ ಮಟ್ಟದ ಸ್ಟಾರ್ ಆಗಿ ಗುರುತಿಸಿಕೊಂಡರು. ಪ್ರಭಾಸ್ ಬೇಡಿಕೆ, ಸಂಭಾವನೆ ದೊಡ್ಡ ಮಟ್ಟಕ್ಕೆ ಏರಿಕೆ ಆಯಿತು. ಇದೆಲ್ಲವೂ ಆಗಿದ್ದು 'ಬಾಹುಬಲಿ' ಸಿನಿಮಾದಿಂದಲೇ.

ಧನ್ಯವಾದ ಹೇಳಿದ ನಟ ಪ್ರಭಾಸ್
ತಮ್ಮ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ ಸಿನಿಮಾ 'ಬಾಹುಬಲಿ' ಬಿಡುಗಡೆ ಆಗಿ ಆರು ವರ್ಷವಾದ ಸಂದರ್ಭದಲ್ಲಿ ಪ್ರಭಾಸ್ ಸಿನಿಮಾ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದು, ''ವಿಶ್ವದಾದ್ಯಂತ ದೃಶ್ಯ ಕಾವ್ಯದ ಮಾಂತ್ರಿಕ ಅಲೆಗಳನ್ನು ಎಬ್ಬಿಸಿದ ಚಿತ್ರತಂಡಕ್ಕೆ ಧನ್ಯವಾದಗಳು'' ಎಂದಿದ್ದಾರೆ ಪ್ರಭಾಸ್. ಪೋಸ್ಟ್ನ ಜೊತೆಗೆ ಸಿನಿಮಾದಲ್ಲಿ ಶಿವಲಿಂಗವನ್ನು ಕೀಳುವ ದೃಶ್ಯದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ಚಿತ್ರತಂಡದ ಹಲವರನ್ನು ನೆನಪಿಸಿಕೊಂಡಿದ್ದಾರೆ ಪ್ರಭಾಸ್
ಪೋಸ್ಟ್ನ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡಿದ ಹಲವರನ್ನು ಟ್ಯಾಗ್ ಸಹ ಮಾಡಿದ್ದಾರೆ. ಮೊದಲಿಗೆ ನಿರ್ದೇಶಕ ರಾಜಮೌಳಿ, ಶೋಭು ಯರ್ರಲಗಡ್ಡ, ಪ್ರಸಾದ್ ದೇವಿನೇನಿ, ಸಂಗೀತ ನಿರ್ದೇಶಕ ಕೀರವಾಣಿ, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ, ಸತ್ಯರಾಜ್, ನಾಸರ್, ಎಆರ್ಕೆ ಮೀಡಿಯಾ, ಕರಣ್ ಜೋಹರ್, ಧರ್ಮ ಪ್ರೊಡಕ್ಷನ್ ಹಾಗೂ ಇನ್ನೂ ಕೆಲವರನ್ನು ಪ್ರಭಾಸ್ ನೆನಪಿಸಿಕೊಂಡಿದ್ದಾರೆ.

4000 ಚಿತ್ರಮಂದಿರಗಳಲ್ಲಿ ಬಿಡುಗುಡೆ
2015ರ ಜುಲೈ 10 ಬಾಹುಬಲಿ ಸಿನಿಮಾವು ವಿವಿಧ ಭಾಷೆಗಳಿಗೆ ಡಬ್ ಆಗಿ ವಿಶ್ವದಾದ್ಯಂತ ಸುಮಾರು 4000 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. 'ಬಾಹುಬಲಿ' ಸಿನಿಮಾ ಬಿಡುಗಡೆಗೆ ಮುನ್ನ ಕರ್ನಾಟದಲ್ಲಿ ತುಸು ವಿವಾದ ಎದ್ದಿತ್ತು. ನಟ ಸತ್ಯರಾಜ್ ಕರ್ನಾಟಕದ ಬಗ್ಗೆ ಹಿಂದೊಮ್ಮೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿದ್ದ ಕಾರಣ 'ಬಾಹುಬಲಿ' ಸಿನಿಮಾ ಬಿಡುಗಡೆ ಮಾಡಬಾರದು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿದ್ದವು. ಕೊನೆಗೆ ನಿರ್ದೇಶಕ ರಾಜಮೌಳಿ ಹಾಗೂ ನಟ ಸತ್ಯರಾಜು ಕನ್ನಡಿಗರ ಕ್ಷಮೆ ಕೋರಿದ ಬಳಿಕ ಸಿನಿಮಾ ಬಿಡುಗಡೆ ಆಯಿತು.
Recommended Video

'ಬಾಹುಬಲಿ; ದಿ ಕನ್ಕ್ಲೂಷನ್' 2017 ರಲ್ಲಿ ಬಿಡುಗಡೆ
'ಬಾಹುಬಲಿ; ದಿ ಬಿಗಿನಿಂಗ್' ಸಿನಿಮಾವು ಬಹು ದೊಡ್ಡ ಹಿಟ್ ಆಯಿತು. ಸಿನಿಮಾ ಬಿಡುಗಡೆ ಆದ ಬಳಿಕ 'ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ' ಎಂಬುದು ದೊಡ್ಡ ಕುತೂಹಲ ಕೆರಳಿಸಿತ್ತು. ಹಲವು ಮೀಮ್ಗಳು ಇದರ ಸುತ್ತ ಹರಿದಾಡಿದವು. ಹೋದಲ್ಲೆಲ್ಲ ಇದೇ ಪ್ರಶ್ನೆಯನ್ನೇ ಕೇಳಲಾಗುತ್ತಿತ್ತು. ಕೊನೆಗೆ 'ಬಾಹುಬಲಿ; ದಿ ಕನ್ಕ್ಲೂಷನ್' ಸಿನಿಮಾ 2017ರ ಏಪ್ರಿಲ್ 28ರಂದು ಬಿಡುಗಡೆ ಆಗಿ ಅದೂ ಸಹ ದೊಡ್ಡ ಹಿಟ್ ಆಯಿತು.


Click it and Unblock the Notifications











