ನಟಿ ಆತ್ಮಹತ್ಯೆ: ಪ್ರಿಯಕರನಿಗಾಗಿ ಪೊಲೀಸರ ಹುಡುಕಾಟ
ಇಂದು ಬೆಳಿಗ್ಗೆಯಷ್ಟೆ ಕನ್ನಡದ ನಟಿ ಸೌಜನ್ಯ ಆತ್ಮಹತ್ಯೆ ಸುದ್ದಿ ಹೊರಬಿದ್ದಿದೆ ಇದೀಗ ಮತ್ತೊಬ್ಬ ತೆಲುಗು ನಟಿ ನೇಣಿನ ಕುಣಿಕೆಗೆ ಕೊರಳು ಕೊಟ್ಟಿದ್ದಾಳೆ.
ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ, ಹಲವು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ನಟಿ ಅನುರಾಧಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೈದರಾಬಾದ್ನ ಫಿಲಂ ನಗರ್ನಲ್ಲಿ ವಾಸವಾಗಿದ್ದ ಅನುರಾಧಾಗೆ ಇತ್ತೀಚೆಗಷ್ಟೆ ಮದುವೆ ನಿಗದಿಯಾಗಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಮದುವೆ ಆಗುವವರಿದ್ದರು ಅನುರಾಧಾ, ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದ ಹಠಾತ್ತನೆ ಮದುವೆ ರದ್ದಾಯಿತು. ಇದೇ ಕಾರಣಕ್ಕೆ ಅನುರಾಧಾ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಅನುರಾಧಾ ತಮ್ಮ ಮನೆಯಿಂದ ಕಳೆದ ನಾಲ್ಕು ದಿನಗಳಿಂದ ಹೊರಗೆ ಬಂದಿರಲಿಲ್ಲ, ಹಾಗಾಗಿ ಅನುಮಾನ ಬಂದು ನೆರೆ-ಹೊರೆಯವರು ಅನುರಾಧಾ ಮನೆಯ ಒಳಗೆ ಇಣುಕಿದಾಗ ಅನುರಾಧಾ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಅನುರಾಧಾ ಸಹೋದರಿಯು ಅಕ್ಕನ ಸಾವಿನ ಕುರಿತು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಅನುರಾಧಾರ ಮಾಜಿ ಪ್ರಿಯಕರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕನ್ನಡದ ನಟಿ ಸೌಜನ್ಯ ಸಹ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್ನಲ್ಲಿ ಬಾಯ್ಫ್ರೆಂಡ್ ಜೊತೆ ನಟಿ ಸೌಜನ್ಯ ವಾಸವಾಗಿದ್ದರು. ಕಳೆದ ಹಲವು ದಿನಗಳಿಂದಲೂ ಇಬ್ಬರು ಒಟ್ಟಿಗೆ ಇದ್ದರು. ಆದರೆ ಇಂದು (ಸೆಪ್ಟೆಂಬರ್ 30) ಬೆಳಗ್ಗೆ ಬಾಯ್ಫ್ರೆಂಡ್ ತಿಂಡಿ ತರಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಸೌಜನ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೌಜನ್ಯಾ ಪತ್ರವೊಂದನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರದಲ್ಲಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂಬಳಗೋಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]


Click it and Unblock the Notifications











