ಮೆಗಾ ಸ್ಟಾರ್ ಮಾಡಿದ ಒಂದು ಫೋನ್ ಕರೆ ಹಿರಿಯ ನಟನ ಜೀವ ಉಳಿಸಿತು
ತೆಲುಗು ಚಿತ್ರರಂಗದಲ್ಲಿ ಸರಿ ಸುಮಾರು 30 ವರ್ಷಕ್ಕೂ ಅಧಿಕ ಕಾಲ ವಿವಿಧ ಪಾತ್ರಗಳಲ್ಲಿ ನಟಿಸಿ ರಂಜಿಸಿದ್ದ ಹಿರಿಯ ನಟ ಇತ್ತೀಚೆಗೆ ಅಶ್ಲೀಲ ಸಂಭಾಷಣೆ ಆಡಿಯೋ ಪ್ರಕರಣದಲ್ಲಿ ಸಿಲುಕಿ ನಲುಗಿದ್ದಾರೆ.
ತಿರುಪತಿ ತಿರುಮಲ ದೇವಸ್ವಂ(ಟಿಟಿಡಿ) ನಿರ್ವಹಣೆಯ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಮುಖ್ಯಸ್ಥ, ನಿರ್ದೇಶಕ ಹುದ್ದೆಯಿಂದ ಅನಿವಾರ್ಯವಾಗಿ ಕೆಳಗಿಳಿದ ಬಳಿಕ ಬಲಿರೆಡ್ಡಿ ಪೃಥ್ವಿರಾಜ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರಂತೆ.
ನನ್ನನ್ನು ವಿನಾಕಾರಣ ಟಿಟಿಡಿಯಿಂದ ದೂರವಿಡಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಷಡ್ಯಂತ್ರ ಅಡಗಿದೆ ಎಂದಿರುವ ಪೃಥ್ವಿ, ನಾನು ಇಂದು ಆತ್ಮಹತ್ಯೆ ಮಾಡಿಕೊಳ್ಳದೆ ಉಳಿದುಕೊಳ್ಳಲು ಮೆಗಾಸ್ಟಾರ್ ಚಿರಂಜೀವಿ ಕಾರಣ ಎಂದು ಟಿವಿ ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ.
ಮಹಿಳಾ ಉದ್ಯೋಗಿ ಜೊತೆ ಅಶ್ಲೀಲ ಮಾತುಕತೆ, ಸಂಕಟದಲ್ಲಿ ಹಾಸ್ಯನಟ
30 ವರ್ಷಗಳಲ್ಲಿ ಅನುಭವಿಸಿರದ ನೋವನ್ನು ಕಳೆದ 30 ದಿನಗಳಲ್ಲಿ ಅನುಭವಿಸಿದೆ. ಒಂದು ಆರೋಪದಿಂದ ಇಡೀ ಜೀವನವೇ ಬೇಸರ ಉಂಟಾಗುವಂತಾಯಿತು. ಹತ್ತಿರದವರು ಎಂದುಕೊಂಡಿದ್ದವರು ದೂರಾದರು. ರಾಜೀನಾಮೆ ನೀಡಿರುವ ಪೃಥ್ವಿ ತನಿಖೆಗೆ ಸಿದ್ಧ ಎಂದು ಘೋಷಿಸಿದರೂ, ವಿನಾಕರಣ ನನ್ನ ಚಾರಿತ್ರ್ಯವಧೆ ಮಾಡಲಾಯಿತು.
ಇದರಿಂದ ನಾನು ತೀವ್ರವಾಗಿ ನೊಂದು ಹೋದೆ, ಕಷ್ಟದ ಸಂದರ್ಭದಲ್ಲಿ ನನ್ನ ಕೈ ಹಿಡಿದಿದ್ದು ಮೆಗಾಸ್ಟಾರ್ ಮಾತ್ರ ಎಂದು ತಮ್ಮ ನೋವನ್ನು ಚಾನೆಲ್ ಮುಂದೆ ತೋಡಿಕೊಂಡಿದ್ದಾರೆ. ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ಪೃಥ್ವಿ ಚಿರಂಜೀವಿ ಬಗ್ಗೆ ಇನ್ನೇನು ಹೇಳಿದರು, ಅವರ ಮೇಲೆ ಬಂದ ಆರೋಪವೇನು? ಇನ್ನಷ್ಟು ವಿವರ ಮುಂದಿದೆ...

ಸಾವೇ ಸೂಕ್ತ ಎಂದು ನಿರ್ಧರಿಸಿದ್ದೆ
ತಿರುಪತಿ ತಿರುಮಲ ದೇವಸ್ವಂ(ಟಿಟಿಡಿ) ನಿರ್ವಹಣೆಯ ಶ್ರೀವೆಂಕಟೇಶ್ವರ ಭಕ್ತಿ ಚಾನೆಲ್ ತೊರೆದ ಬಳಿಕ ನಾನು ತನಿಖೆ ಎದುರಿಸಿ ಮತ್ತೆ ಭಕ್ತಿ ವಾಹಿನಿಯ ಕಾರ್ಯಕ್ಕೆ ಮರಳಲು ಮುಂದಾಗಿದ್ದೆ. ಆದರೆ ಚಾನೆಲ್ ಕಡೆಯಿಂದ ಯಾವುದೇ ಸಹಕಾರ ಸಿಗಲಿಲ್ಲ. ಸಿನಿಮಾರಂಗದಲ್ಲೂಅನುಮಾನದಿಂದಲೇ ನೋಡತೊಡಗಿದರು. ಇನ್ನು ರಾಜಕೀಯ ರಂಗದಲ್ಲಿ ನನ್ನವರು ಎಂದುಕೊಂಡವರೆಲ್ಲ, ನನ್ನ ವಿರುದ್ಧ ಜಗನ್ ರೆಡ್ಡಿ ಬಳಿ ದೂರು ಹೇಳಿ, ನನ್ನನ್ನು ಇನ್ನಷ್ಟು ಬಲಹೀನ ಮಾಡಿಬಿಟ್ಟಿದ್ದರು. ಈ ಸಂದರ್ಭದಲ್ಲಿ ನನಗೆ ಎಲ್ಲೆಡೆ ಬಾಗಿಲು ಮುಚ್ಚಿದ್ದರಿಂದ ಸಾವೇ ಸೂಕ್ತ ಎಂದು ನಿರ್ಧರಿಸಿದ್ದೆ

ಸಿನಿಮಾ ನಿಜ ಜೀವನಕ್ಕೆ ತಳುಕು ಹಾಕಿದರು
ತಮ್ಮ ಇತ್ತೀಚಿನ ಸಂದರ್ಶನದಲ್ಲಿ, ತಮ್ಮ ಚಲನಚಿತ್ರ ಮತ್ತು ರಾಜಕೀಯ ಬದುಕಿನ ಬಗ್ಗೆ ಪ್ರಸ್ತಾಪಿಸಿದ ಪೃಥ್ವಿ, ಎಸ್ವಿಬಿಸಿವಾಹಿನಿಯಲ್ಲಿ ಅನ್ಯಾಯವಾಗಿ ನನ್ನನ್ನು ಸಮಸ್ಯೆಯಲ್ಲಿ ಸಿಲುಕುವಂತೆ ಮಾಡಿದರು. ಪೊಕಿರಿ ಚಿತ್ರದಲ್ಲಿ, ನಟಿ ಇಲಿಯಾನಾ ಬಟ್ಟೆಗಳನ್ನು ಹರಿದು ರೇಪ್ ಆಯಿತು ಎಂಬಂತೆ ಬಿಂಬಿಸುವ ದೃಶ್ಯವಿದೆ. ಅದೇ ರೀತಿ ಪ್ರಯೋಗವನ್ನು ನನ್ನ ಮೇಲೆ ನಿಜ ಜೀವನದಲ್ಲಿ ಮಾಡಲಾಯಿತು. ಏನು ಆಗಿಲ್ಲದಿದ್ದರೂ ಎಲ್ಲವೂ ಆಗಿಬಿಟ್ಟಿದೆ ಎಂದು ಜಗತ್ತಿಗೆ ನಂಬಿಸಿದರು. ಇದಕ್ಕೆ ಸೂಕ್ತ ಸಾಕ್ಷಿ ಎಂದು ಆಡಿಯೋ ಸಂಭಾಷಣೆ ಮುಂದಿಟ್ಟರು ಎಂದು ಪೃಥ್ವಿಹೇಳಿದ್ದಾರೆ.

ಚಿರಂಜೀವಿ ಮಾಡಿದ ಫೋನ್ ಕರೆ
ಆಡಿಯೋ ಟೇಪ್ ಪ್ರಕರಣದಿಂದ ಚಾನೆಲ್ ಕೆಲಸ, ಸಿನಿಮಾರಂಗ, ರಾಜಕೀಯ ಎಲ್ಲದರಿಂದ ದೂರ ಉಳಿಯುವಂಥ ಪರಿಸ್ಥಿತಿ ಎದುರಾಗಿತ್ತು. ಆಗ ನನಗೆ ಕರೆ ಮಾಡಿ ಧೈರ್ಯ ಹೇಳಿದ್ದು ಚಿರಂಜೀವಿ ಮಾತ್ರ. ನ್ಯಾಯನಿಷ್ಠೆಯಿಂದ ದುಡಿಯಿರಿ, ತಪ್ಪು ಮಾಡಿದ್ದರೆ ಶಿಕ್ಷೆ ತಪ್ಪಿದ್ದಲ್ಲ, ಪಶ್ಚಾತ್ತಾಪ ಪಟ್ಟ ಬಳಿಕವೂ ಕ್ಷಮಿಸದೇ ಹೊದರೆ ದೇವರು ಮೆಚ್ಚುವುದಿಲ್ಲ. ಧೈರ್ಯವಾಗಿರಿ, ಖಿನ್ನತೆಯಿಂದ ಹೊರಬಂದು ಸಿನಿಮಾದಲ್ಲಿ ತೊಡಗಿಕೊಳ್ಳಿ ಎಲ್ಲವೂ ಸರಿ ಹೋಗುತ್ತೆ ಎಂದು ಹೇಳಿದರು. ಚಿರಂಜೀವಿಯ ಸೈರಾ ರೆಡ್ಡಿ ಚಿತ್ರದಲ್ಲಿ ನಟಿಸಿರುವ ಪೃಥ್ವಿ, ಇತ್ತೀಚಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೆಗಾ ಫ್ಯಾಮಿಲಿ ಜೊತೆ ಯಾವುದೇ ಘರ್ಷಣೆಗಳಿಲ್ಲ ಎಂದು ಘೋಷಿಸಿದ್ದರು. ಈ ಹಿಂದೆ ಪವನ್ ಕಲ್ಯಾಣ್ ರನ್ನು ಟೀಕಿಸಿದ್ದ ಪೃಥ್ವಿ ಈಗ ಚಿರಂಜೀವಿ ಕುಟುಂಬವನ್ನು ಹೊಗಳುತ್ತಿದ್ದಾರೆ.

ರಾಜಕೀಯ ನಂಟು ಹೊಂದಿರುವ ಜನಪ್ರಿಯ ನಟ
2018ರಲ್ಲಿ ಪ್ರಜಾ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಜಗನ್ ಭೇಟಿ ಮಾಡಿದ್ದ ಪೃಥ್ವಿ, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಇದಕ್ಕೂ ಮುನ್ನ ತೆಲುಗುದೇಶಂ ಪಕ್ಷವನ್ನು ಹಿಗ್ಗಾ ಮುಗ್ಗಾ ಬೈದಿದ್ದರು. ಸಿನಿಮಾ ನಟರನ್ನು ನಂಬಿ ಮತ ಹಾಕಬೇಡಿ ಎಂದಿದ್ದರು. ಅಮರಾವತಿ ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಎಸ್ ವಿಬಿಸಿ ವಾಹಿನಿ ಸೇರಿದ ಮೇಲೆ ಭ್ರಷ್ಟಾಚಾರ ಆರೋಪವನ್ನು ಹೊತ್ತುಕೊಂಡಿದ್ದರು. ಇದರಿಂದ ಚಾನೆಲ್ ನಲ್ಲಿ ಅನೇಕರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಇದೇ ಅವರನ್ನು ಹೊರಹಾಕಲು ನಾಂದಿಯಾಯಿತು ಎನ್ನಬಹುದು.

ದೇವರೇ ನೋಡಿಕೊಳ್ಳುತ್ತಾನೆ
ಭಕ್ತಿ ವಾಹಿನಿಯ ನೌಕರರ ಸಂಘದ ಅಧ್ಯಕ್ಷ ಕಂದರಪು ಮುರುಳಿ ಪ್ರತಿಕ್ರಿಯಿಸಿ, 'ಪೃಥ್ವಿರಾಜ್ ಅವರು ಆಡಿಯೋದಲ್ಲಿ ಅಶ್ಲೀಲದಲ್ಲಿ ಮಾತನಾಡಿರುವುದು ನಿಜ, ಮಹಿಳಾ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ, ಕಾಯಂ ಉದ್ಯೋಗದ ಆಮಿಷ ನೀಡಿ ಲೈಂಗಿಕ ಕಿರುಕುಳ ನೀಡುತ್ತಾರೆ ಎಂಬ ದೂರು ಕೇಳಿ ಬಂದಿತ್ತು. ಇದಕ್ಕೆ ಈಗ ಶಿಕ್ಷೆ ಸಿಕ್ಕಿದೆ ಎಂದಿದ್ದರು. ಈ ಬಗ್ಗೆ ಪೃಥ್ವಿ ಅವರನ್ನು ಪ್ರಶ್ನಿಸಿದರೆ, ನಾನು ತಪ್ಪು ಮಾಡಿದ್ದರೆ ವೆಂಕಟೇಶ್ವರ ಸ್ವಾಮಿ ಶಿಕ್ಷಿಸುತ್ತಾನೆ. ನನ್ನನ್ನು ಅನ್ಯಾಯವಾಗಿ ಹೊರಹಾಕಿದವರನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದಿದ್ದಾರೆ.


Click it and Unblock the Notifications











