ಹವಾಲಾ ದುಡ್ಡಲ್ಲಿ 'ಲೈಗರ್' ನಿರ್ಮಾಣ! ವಿಜಯ್ ದೇವರಕೊಂಡಗೆ ಇಡಿ ಕಾಟ
ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದ ವಿಜಯ್ ದೇವರಕೊಂಡ ಅನ್ನು ಧುತ್ತನೆ ಕೆಳಕ್ಕೆ ದಬ್ಬಿದೆ 'ಲೈಗರ್' ಸಿನಿಮಾ. ಭಾರಿ ನಿರೀಕ್ಷೆ ಇರಿಸಿಕೊಂಡಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿದೆ.
ವಿಜಯ್ ದೇವರಕೊಂಡ ಮಾತ್ರವೇ ಅಲ್ಲದೆ, ಸಿನಿಮಾದ ನಿರ್ದೇಶಕ ಪುರಿ ಜಗನ್ನಾಥ್, ನಿರ್ಮಾಪಕಿ ಚಾರ್ಮಿ ಇನ್ನೂ ಕೆಲವರು ಈ ಸೋಲಿನಿಂದ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಸಿನಿಮಾದಿಂದಾಗಿ ವೃತ್ತಿಯ ವಿಷಯದಲ್ಲಿ ಹಿನ್ನಡೆ ಅನುಭವಿಸಿರುವ ವಿಜಯ್ ದೇವರಕೊಂಡ 'ಲೈಗರ್' ಅನ್ನು ತಮ್ಮ ನೆನಪಿನಿಂದಲೇ ತೊಡೆದುಹಾಕುವ ಯತ್ನದಲ್ಲಿದ್ದಾರೆ ಆದರೆ 'ಲೈಗರ್' ಮಾತ್ರ ಅವರ ಬೆನ್ನು ಬಿಡುತ್ತಿಲ್ಲ. 'ಲೈಗರ್' ಸಿನಿಮಾದ ಬಂಡವಾಳ ಹೂಡಿಕೆ ಕುರಿತಂತೆ ಕೇಂದ್ರ ತನಿಖಾ ಸಂಸ್ಥೆ ಇಡಿ ತನಿಖೆ ನಡೆಸುತ್ತಿದ್ದು, ವಿಜಯ್ ದೇವರಕೊಂಡ ಅವರನ್ನು ವಿಚಾರಣೆ ನಡೆಸಿದೆ.

ವಿಜಯ್ ದೇವರಕೊಂಡ ವಿಚಾರಣೆ
ತೆಲಂಗಾಣದ ಜನಪ್ರಿಯ ರಾಜಕಾರಣಿಯೊಬ್ಬರು, ವಿದೇಶದಿಂದ ಅಕ್ರಮವಾಗಿ ಹವಾಲಾ ಮೂಲಕ ತರಿಸಿಕೊಂಡ ಹಣವನ್ನು 'ಲೈಗರ್' ಸಿನಿಮಾದ ಮೇಲೆ ಹೂಡಿಕೆ ಮಾಡಿರುವ ಆರೋಪವಿದ್ದು, ಅದೇ ಕಾರಣಕ್ಕೆ ಸಿನಿಮಾದ ನಾಯಕ ನಟರಾಗಿರುವ ವಿಜಯ್ ದೇವರಕೊಂಡ ಅನ್ನು ಇಡಿ ಅಧಿಕಾರಿಗಳು ಹೈದರಾಬಾದ್ನಲ್ಲಿ ಇಂದು (ನವೆಂಬರ್ 30) ವಿಚಾರಣೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ 'ಲೈಗರ್' ಸಿನಿಮಾದ ನಿರ್ದೇಶಕ ಪುರಿಜಗನ್ನಾಥ್ ಹಾಗೂ ನಿರ್ಮಾಪಕಿ ಚಾರ್ಮಿಯನ್ನು ಜಂಟಿಯಾಗಿ ಇಡಿ ಅಧಿಕಾರಿಗಳು ಹೈದರಾಬಾದ್ನಲ್ಲಿಯೇ ವಿಚಾರಣೆಗೆ ಒಳಪಡಿಸಿದ್ದರು. ಇದೀಗ ವಿಜಯ್ ದೇವರಕೊಂಡ ಅವರನ್ನೂ ಸಹ ವಿಚಾರಣೆ ನಡೆಸಿದ್ದಾರೆ.

90 ಕೋಟಿ ಬಜೆಟ್ನ ಸಿನಿಮಾ
'ಲೈಗರ್' ಸಿನಿಮಾವನ್ನು 90 ಕೋಟಿ ಬಜೆಟ್ನಲ್ಲಿ ಚಿತ್ರೀಕರಿಸಲಾಗಿತ್ತು. ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಾಯಕಿಯಾಗಿದ್ದರು. ರಮ್ಯಾ ಕೃಷ್ಣ, ಮಕರಂದ್ ದೇಶ್ಪಾಂಡೆ ಇನ್ನಿತರರು ಸಿನಿಮಾದಲ್ಲಿದ್ದರು. ಅತಿಥಿ ಪಾತ್ರದಲ್ಲಿ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಕಾಣಿಸಿಕೊಂಡಿದ್ದರು. ಹೈದರಾಬಾದ್, ಗೋವಾ ಹಾಗೂ ವಿದೇಶಗಳಲ್ಲಿಯೂ ಸಿನಿಮಾದ ಚಿತ್ರೀಕರಣವಾಗಿತ್ತು. ಸಿನಿಮಾದ ಪ್ರಚಾರಕ್ಕಾಗಿಯೂ ಭರ್ಜರಿಯಾಗಿಯೇ ಹಣ ಖರ್ಚು ಮಾಡಲಾಗಿತ್ತು.

ಭಾರಿ ನಷ್ಟ ಅನುಭವಿಸಿದ ಸಿನಿಮಾ
ಆದರೆ 'ಲೈಗರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಇನ್ನಿಲ್ಲದಂತೆ ನೆಲಕಚ್ಚಿತು. ಹಲವೆಡೆ ಸಿನಿಮಾ ಕೇವಲ ಒಂದೇ ದಿನಕ್ಕೆ ಎತ್ತಂಡಗಿಯಾಯ್ತು. ಸಿನಿಮಾದ ಒಟ್ಟು ಬಂಡವಾಳದ 30% ಹಣ ಸಹ ನಿರ್ಮಾಪಕರಿಗೆ ವಾಪಸ್ಸಾಗಲಿಲ್ಲ. ಸಿನಿಮಾದ ಸಹ ನಿರ್ಮಾಪಕರೂ ಆಗಿದ್ದ ಪುರಿ ಜಗನ್ನಾಥ್ ತಮ್ಮ ಮುಂಬೈನ ಮನೆಯನ್ನು ಮಾರಬೇಕಾಗಿ ಬಂತು. ಚಾರ್ಮಿ ಸಹ ದೊಡ್ಡ ಮಟ್ಟದ ಮೊತ್ತವನ್ನು ಕಳೆದುಕೊಂಡರು. ನಷ್ಟವಾದ ಹಣ ಹಿಂತಿರುಗಿಸುವಂತೆ ವಿತರಕರು ಪುರಿ ಜಗನ್ನಾಥ್ ಹಾಗೂ ಚಾರ್ಮಿಯ ಹಿಂದೆ ಬಿದ್ದರು. ಈ ತಲೆ ನೋವುಗಳ ನಡುವೆ ಈಗ ಇಡಿ ತಲೆ ನೋವು ಸಹ ಚಿತ್ರತಂಡಕ್ಕೆ ಶುರುವಾಗಿದೆ.

ವಿಜಯ್ ಮುಂದಿನ ಸಿನಿಮಾಗಳು
ಇನ್ನು ವಿಜಯ್ ದೇವರಕೊಂಡ ವಿಷಯಕ್ಕೆ ಮರಳುವುದಾದರೆ, 'ಲೈಗರ್' ಸೋಲಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ ವಿಜಯ್. ಸಮಂತಾ ಜೊತೆಗೆ ವಿಜಯ್ ನಟಿಸಿರುವ 'ಖುಷಿ' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಬಳಿಕ 'ಪುಷ್ಪ' ನಿರ್ದೇಶಕ ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ. 'ಲೈಗರ್' ಶೂಟಿಂಗ್ ವೇಳೆಯೇ ಪುರಿ ಜಗನ್ನಾಥ್ ನಿರ್ದೇಶನದ 'ಜನ ಗಣ ಮನ' ಸಿನಿಮಾ ಘೋಷಣೆ ಆಗಿತ್ತು. ಆದರೆ ಆ ಸಿನಿಮಾ ಸೆಟ್ಟೇರುವುದು ಅನುಮಾನವಾಗಿದೆ. ಇದರ ಜೊತೆಗೆ 'ಹೀರೋ' ಹೆಸರಿನ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ.


Click it and Unblock the Notifications











