ಓದುಗರನ್ನು ಬೆಚ್ಚಿ ಬೀಳಿಸಿದ ಉದಯವಾಣಿ ಪತ್ರಿಕೆ!

ಶುಕ್ರವಾರದ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಓದಿದ ಅದೆಷ್ಟೋ ಓದುಗರು ಭಾವನಾ ಪಾತ್ರಧಾರಿ ಸುಷ್ಮಾ ಕೆ ರಾವ್ ನಿಧನರಾಗಿದ್ದಾರೆ ಎಂದೇ ತಪ್ಪಾಗಿ ಅರ್ಥೈಸಿದ್ದಾರೆ. ಆದರೆ ಅದು ನಿಜವಲ್ಲ. ನಿಧನರಾಗಿರುವುದು ಗುಪ್ತಗಾಮಿನಿಯ ಭಾವನಾ ಪಾತ್ರ ಅಷ್ಟೇ, ಸುಷ್ಮಾ ಕೆ ರಾವ್ ಅಲ್ಲ. ಉದಯವಾಣಿ ವರದಿ ಓದುಗರನ್ನು ಗೊಂದಲಕ್ಕೀಡು ಮಾಡಿದೆ ಅಷ್ಟೇ! ಪತ್ರಿಕೆಯ ಸಂಪೂರ್ಣ ವರದಿಯನ್ನು ಇಲ್ಲಿ ನೀಡಲಾಗಿದೆ. ಓದಿ ನೋಡಿ ನೀವೂ ಗೊಂದಲಕ್ಕೀಡಾಗುತ್ತೀರಿ!
''ಗುಪ್ತಗಾಮಿನಿಯ ತಾಯಿಮನೆಯ ಭಾವನಾ ಇನ್ನಿಲ್ಲ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ತಂಡ ಸತತ 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿತು. ಆದರೆ ಶಸ್ತ್ರಚಿಕಿತ್ಸೆಯ ನಡುವೆಯೇ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ತಮ್ಮ ಪತಿ ತೇಜಸ್ವಿ ಅಕಾಲ ಮರಣಕ್ಕೀಡಾದಾಗ ಭಾವನಾ ಎದೆಗುಂದಿರಲಿಲ್ಲ. ತೇಜಸ್ವಿ ಕಂಡ ಕನಸುಗಳನ್ನು ನನಸಾಗಿಸುವ ಪ್ರಯತ್ನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 'ತಾಯಿಮನೆ' ಎಂಬ ಆಶ್ರಮವನ್ನು ಕಟ್ಟಿ ಮುದುಡಿದ ಬದುಕುಗಳನ್ನು ಅರಳಿಸಿದರು.ನಾನಾ ತರದ ಸಮಸ್ಯೆಗಳನ್ನು ಹೊತ್ತು ಬರುವವ ಮಹಿಳೆಯರಿಗೆ ತಾಯಿಮನೆ ಆಶ್ರಯ ನೀಡಿ ಸ್ವಂತ ಬದುಕಗಳನ್ನು ಕಟ್ಟಿಕೊಡುತ್ತಿತ್ತು. ಭಾವನಾ ಅವರಿಲ್ಲದ ತಾಯಿಮನೆಯನ್ನು ಊಹಿಸುವುದು ಕಷ್ಟ.
ಪುತ್ರ, ಅಜ್ಜಿ, ಸೋದರ, ಇಬ್ಬರು ಸಹೋದರಿ, ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಭಾವನಾ ಅಗಲಿದ್ದಾರೆ. ಶುಕ್ರವಾರ ಸಂಜೆ 6.30ಕ್ಕೆ ಈ ಟಿವಿಯಲ್ಲಿ ಪ್ರಸಾರವಾಗುವ 'ಗುಪ್ತಗಾಮಿನಿ'ಯಲ್ಲಿ ವಿಶ್ವವ್ಯಾಪಿಯಾಗಿರುವ ವೀಕ್ಷಕರು ಅವರೆಲ್ಲರ ಪ್ರೀತಿಗೆ ಪಾತ್ರಳಾಗಿದ್ದ ಭಾವನಾರಿಗೆ ಭಾಷ್ಪಾಂಜಲಿ ಅರ್ಪಿಸಲಿದ್ದಾರೆ."
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











