ಈಟಿವಿ ಕನ್ನಡದಲ್ಲಿ ಮೆಗಾ ಧಾರಾವಾಹಿ ಶುಭಮಂಗಳ
ಜನಪ್ರಿಯ ಧಾರಾವಾಹಿಗಳಿಗೆ ಹೆಸರಾದಈಟಿವಿ ಕನ್ನಡ ವಾಹಿನಿ ಈಗ ಮತ್ತೊಂದು ಮೆಗಾ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ತರುತ್ತಿದೆ. ಧಾರಾವಾಹಿ ಹೆಸರು 'ಶುಭಮಂಗಳ'. ಡಿಸೆಂಬರ್ 13ರಿಂದ ಸೋಮವಾರದಿಂದ ಶುಕ್ರವಾರದ ತನಕ ಪ್ರತಿದಿನ ರಾತ್ರಿ 9ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.
'ಶುಭಮಂಗಳ' ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಜನಪ್ರಿಯ ಬರಹಗಾರ ಜೋಗಿ ಎಂದೇ ಜನಪ್ರಿಯರಾಗಿರುವ ಗಿರೀಶ್ ರಾವ್ ರಚಿಸಿದ್ದಾರೆ. ಸಂಗೀತ ಸಂಯೋಜನೆ ರಿಕಿ ಕೇಜ್. ಹಯವದನ ನಿರ್ದೇಶಿಸುತ್ತಿರುವ ಚೊಚ್ಚಲ ಧಾರಾವಾಹಿ ಇದಾಗಿದೆ.
ಅರ್ಧದಲ್ಲೇ ಕಾಲೇಜು ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿದ ನಿರ್ದೇಶಕ ಹಯವದನ ಅವರಿಗೆ ಕಿರುತೆಯ ಜನಪ್ರಿಯ ನಿರ್ದೇಶಕರ ಜೊತೆ ಎಂಟು ವರ್ಷ ಕೆಲಸ ಮಾಡಿದ ಅನುಭವವಿದೆ. ಧಾರಾವಾಹಿಯಲ್ಲಿನ ಕುತೂಹಲಕರ ಅಂಶಗಳು ಮನೆಮಂದಿಯನ್ನು ಸೆಳೆಯುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
'ಶುಭಮಂಗಳ' ಎಂದರೆ ಸಾಮಾನ್ಯವಾಗಿ ಪ್ರೇಕ್ಷಕರಿಗೆ ಥಟ್ ಎಂದು ಹೊಳೆಯುವುದು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರ ಚಿತ್ರ.ಶೋಕ, ತತ್ವ, ಪ್ರೀತಿ ಪ್ರೇಮ, ದ್ವೇಷದ ನೆಲೆಗಟ್ಟಿನಲ್ಲಿ ಧಾರಾವಾಹಿ ಸಾಗುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಧಾರಾವಾಹಿಯಲ್ಲಿ ಉತ್ತರ ಸಿಗುತ್ತದೆ ಎನ್ನುತ್ತಾರೆ ಹಯವದನ.
ಕಿರುತೆರೆಯ ಮುಖ್ಯಮಂತ್ರಿಯಾಗಿ ಮಿಂಚುತ್ತಿರುವ ಹುಲಿವಾನ್ ಗಂಗಾಧರಯ್ಯ ಸೇರಿದಂತೆ ಹಲವಾರು ಖ್ಯಾತನಾಮರು ಧಾರಾವಾಹಿಯಲ್ಲಿದ್ದಾರೆ. ರೇಖಾ ರಾವ್, ಪದ್ಮಾ ಕುಮುಟ, ಆಶಾಲತಾ, ಜ್ಯೋತಿ, ಸುಧಾ ಬೆಳವಾಡಿ, ಅಪರ್ಣಾ, ವಾಣಿಶ್ರೀ, ಭಾಗ್ಯಶ್ರೀ ರೈ, ಸ್ನೇಹಾ, ಜಯಶ್ರೀ, ರಂಜಿತಾ, ಮಂಜುನಾಥ ಹೆಗಡೆ ಮುಂತಾದ ಕಿರುತೆರೆ ಕಲಾವಿದರ ದೊಡ್ಡ ಬಳಗವೇ ಧಾರಾವಾಹಿಯಲ್ಲಿದೆ.
ಪ್ರಸಾದ್ ದೇವಿನೇನಿ ಹಾಗೂ ಶೋಭಾ ಯಾರ್ಲಗಡ್ಡ ನಿರ್ಮಿಸುತ್ತಿರುವ ಧಾರಾವಾಹಿಗೆ ಮಂಜುನಾಥ್ ಮಂಡ್ಯ ಅವರ ಛಾಯಾಗ್ರಹಣವಿದೆ. ಸತ್ಯ ಭಾರದ್ವಾಜ್ ಮತ್ತು ಸುದರ್ಶನ್ ಅವರ ಸಂಕಲನವಿದೆ. ವಾಗ್ದೇವಿ ಮೀಡಿಯಾದವರು ಸಂಭಾಷಣೆ, ಚಿತ್ರಕತೆಯನ್ನು ಹೆಣೆದಿದ್ದಾರೆ.


Click it and Unblock the Notifications











