ಟಿವಿ ಕಾರ್ಯಕ್ರಮಗಳ ಸೆನ್ಸಾರ್ ಮಾಡಲು ತಜ್ಞರ ಸಮಿತಿ
ಕಿರುತೆರೆಯಲ್ಲಿ ಬಿತ್ತರವಾಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೂಗುಮುರಿಯುವ ಮಂದಿಯೇ ಹೆಚ್ಚು. ಇವರನ್ನು ಹೇಳುವವರು ಕೇಳುವವರು ಯಾರು ಇಲ್ಲವೆ? ಏನ್ರಿ ಟಿವಿಗಳಲ್ಲಿ ಏನೆಂದರೆ ಅದು ತೋರಿಸ್ತಾರೆ. ಮಕ್ಕಳು, ಮಹಿಳೆಯರು, ಹಿರಿಯರು ನೋಡ್ತಿರ್ತಾರೆ ಎಂಬ ಕಿಂಚಿತ್ ಪರಿಜ್ಞಾನಾವಾದರು ಬೇಡವೆ ಎಂದು ಗೊಣಗುವವರಿಗೂ ಬರವಿಲ್ಲ.
ಟಿವಿ ಕಾರ್ಯಕ್ರಮಗಳಲ್ಲಿ ಮಿತಿ ಮೀರುತ್ತಿರುವ ಹಿಂಸೆ, ಕ್ರೌರ್ಯ, ಅಪರಾಧ ಸುದ್ದಿಗಳ ವೈಭವೀಕರಣ, ಇದಕ್ಕೆ ಕಡಿವಾಣ ಹಾಕುವವರು ಯಾರು ಇಲ್ಲವೆ ಎಂಬ ದೂರುಗಳು ಕೇಂದ್ರ ಸರ್ಕಾರದ ನಿದ್ದೆ ಕೆಡಿಸಿವೆಯಂತೆ. ಇದಕ್ಕಾಗಿ ಒಂದು ತಜ್ಞರ ಸಮಿತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ. ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಸ್ಥಾಪಿಸುವುದಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ.
ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿದವರು ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. "ಟಿವಿ ಕಾರ್ಯಕ್ರಮಗಳ ಬಗ್ಗೆ ಬಂದ ದೂರುಗಳನ್ನು ತಜ್ಞರ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತದೆ" ಎಂದು ಅಂಬಿಕಾ ತಿಳಿಸಿದ್ದಾರೆ.
ಖಾಸಗಿ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಬರುವ ದೂರುಗಳನ್ನು ಸಮಿತಿ ಪರಿಶೀಲಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯ ದುರುಪಯೋಗವಾಗುತ್ತಿದೆ ಅನ್ನಿಸಿದರೆ ಕ್ರಮಕೈಗೊಳ್ಳಲಾಗುತ್ತದೆ. ಸಮಿತಿ ನಿರ್ಣಯಿಂದ ವಾದವಿವಾದಗಳು ತಲೆದೋರಿದ ಪಕ್ಷದಲ್ಲಿ ಮಾಹಿತಿ ಸಚಿವಾಲಯ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಸಾಧ್ಯವಾದಷ್ಟು ಪರಿಹರಿಸಲು ಪ್ರಯತ್ನಿಸುತ್ತದೆ.
'ಬಿಗ್ ಬಾಸ್'ನಂತಹ ರಿಯಾಲಿಟಿ ಶೋಗಳ ಬಗ್ಗೆ ಹಲವಾರು ಆಕ್ಷೇಪಣೆಗಳು ಕೇಳಿಬಂದಿವೆ. ಈ ರೀತಿಯ ರಿಯಾಲಿಟಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲವೆ ಎಂಬ ರಾಶಿರಾಶಿ ದೂರಿನ ಪತ್ರಗಳು ಬಂದಿವೆಯಂತೆ. ಸದ್ಯಕ್ಕೆ ಟಿವಿ ಕಾರ್ಯಕ್ರಮಗಳನ್ನು ಕೇಬಲ್ ನಿಯಂತ್ರಣ ಕಾಯಿದೆ ನಿಯಂತ್ರಿಸುತ್ತಿದೆ. ಇನ್ನು ಮುಂದೆ ಟಿವಿ ಕಾರ್ಯಕ್ರಮಗಳ ಬಗ್ಗೆ ಕೇಳಿಬರುವ ಆಕ್ಷೇಪಣೆಗಳ ಬಗ್ಗೆ ತಜ್ಞರ ಸಮಿತಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅಂಬಿಕಾ ಹೇಳಿದ್ದಾರೆ.


Click it and Unblock the Notifications











