twitter
    For Quick Alerts
    ALLOW NOTIFICATIONS  
    For Daily Alerts

    ಗೆಜ್ಜೆಪೂಜೆ ರಾಜ್ಯದಲ್ಲಿ ಇನ್ನೂ ಗುಟ್ಟಾಗಿ ನಡೆಯುತ್ತಿದೆ!

    By Rajendra
    |

    ದೇವದಾಸಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗಿಯೊಬ್ಬಳು ದೇವದಾಸಿಯಾಗಲು ಇಷ್ಟಪಡದೇ ಪರಿಸ್ಥಿತಿಗೆ ಸಿಲುಕಿ ಜೀವನ ಕಟ್ಟಿಕೊಳ್ಳಲು ಒದ್ದಾಡುವ ಕಥೆಯೇ ಗೆಜ್ಜೆಪೂಜೆ. ಕರ್ನಾಟಕದ ಒಂದು ಒಳ ಹಳ್ಳಿ ಚಂದ್ರಗಿರಿ. ಕಂದಾಚಾರಗಳು ತುಂಬಿರುವ ಹಳ್ಳಿ. ಕೆಲವು ಕುಟುಂಬದ ಹುಡುಗಿಯರು ದೊಡ್ಡವರಾದಾಗ ದೇವರೊಂದಿಗೆ ಅವರ ಮದುವೆ ನಡೆಯುವುದು ವಾಡಿಕೆ. ಆನಂತರ ಅವರು ದೇವಸ್ಥಾನದಲ್ಲಿ ದೇವದಾಸಿಯರಾಗಿ ನರ್ತನ ಮಾಡಿಕೊಂಡು ದೇವರ ಸೇವೆ ಮಾಡಬೇಕು ಎನ್ನುವುದು ಮೇಲ್ನೋಟದ ಉದ್ದೇಶ. ವಾಸ್ತವದಲ್ಲಿ ಅವರು ಶ್ರೀಮಂತರ ಭೋಗದ ವಸ್ತುಗಳಾಗುತ್ತಾರೆ.

    ಸದಭಿರುಚಿಯ ಧಾರವಾಹಿಗಳ ಮೂಲಕ ಮನೆಮಾತಾಗಿರುವ ಜೀ ಕನ್ನಡ ಇದೀಗ ಮತ್ತೊಂದು ವೈವಿಧ್ಯಮಯ ಕಥಾನಕ ಹೊಂದಿರುವ ಗೆಜ್ಜೆಪೂಜೆ ಎಂಬ ನೂತನ ಧಾರಾವಾಹಿಯನ್ನು ವೀಕ್ಷಕರಿಗೆ ಸಮರ್ಪಿಸುತ್ತಿದೆ. ದೇವದಾಸಿಯರ ಬದುಕಿನ ವೃತ್ತಾಂತ ಹೊಂದಿರುವ ಗೆಜ್ಜೆಪೂಜೆ ಧಾರಾವಾಹಿ ಇದೇ ಅಕ್ಟೋಬರ್ 4ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ಸಂಜೆ 8 ರಿಂದ 8.30 ಗಂಟೆವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಜೋಗುಳದ ಜನಪ್ರಿಯ ನಿರ್ದೇಶಕ ವಿನು ಬಳಂಜ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

    ಈಗ ಊರಿನ ಹಳೆಯ ದೇವದಾಸಿ ಯಮುನವ್ವಳ ಕಿರಿ ಮಗಳು ಕಲ್ಪನಾ ದೊಡ್ಡವಳಾಗಿದ್ದಾಳೆ. ಅಪ್ರತಿಮ ಸುಂದರಿ ಬೇರೆ. ಅಂದಮೇಲೆ ಅವಳಿಗೆ ಮುತ್ತು ಕಟ್ಟಲೇ ಬೇಕು; ಗೆಜ್ಜೆಪೂಜೆ ಮಾಡಲೇಬೇಕು ಎಂಬುದು ಸುತ್ತಮುತ್ತ ಊರಿನ 'ಬಡೇ' ಗಂಡಸರ ಇರಾದೆ. ಆದರೆ ಮುಗ್ಧೆ ಕಲ್ಪನಾಗೆ ಗೆಜ್ಜೆಪೂಜೆ ಎಂಥ ಒಳಸುಳಿ ಎಂಬುದು ಗೊತ್ತಿಲ್ಲ.

    ಸಕಲೇಶಪುರದ ಶ್ರೀಮಂತ ರಸಿಕ ಧರ್ಮಯ್ಯ, ಕಲ್ಪನಾಳ ಅಕ್ಕನ ಗೆಜ್ಜೆಪೂಜೆ ವೇಳೆ ಅತಿಹೆಚ್ಚು ಹರಾಜು ಕೂಗಿ ಮೊದಲ ರಾತ್ರಿ ಪಡೆದವ. ಕಲ್ಪನಾಳ ಗೆಜ್ಜೆಪೂಜೆ ಹರಾಜನ್ನೂ ತಾನೇ ಪಡೆಯಬೇಕೆಂಬ ಮಹದಾಸೆ. ಗೆಜ್ಜೆಪೂಜೆ ತಯ್ಯಾರಿ ನಡೆದೇಬಿಡುತ್ತದೆ. ಕಲ್ಪನಾ ಹರಕೆಯ ಕುರಿಯಾಗಿ ಹಸೆಮಣೆಯೇರುತ್ತಾಳೆ.

    ಧರ್ಮಯ್ಯ ಸೇರಿದಂತೆ ಸುತ್ತ ಊರಿನ ಶ್ರೀಮಂತರು, ರಾಜಕಾರಣಿಗಳು ಎಲ್ಲ ನೆರೆಯುತ್ತಾರೆ. ದೇವರ ಹೆಸರಿನಲ್ಲಿ ಅರಿಶಿಣ ಕೊಂಬು ಇನ್ನೇನು ಕಲ್ಪನಾ ಕೊರಳಿಗೆ ಬೀಳಬೇಕೆನ್ನುವಷ್ಟರಲ್ಲಿ ಯಾರೂ ಊಹಿಸದಂಥ ಘಟನೆ ನಡೆದುಹೋಗುತ್ತದೆ ಮತ್ತು ಅದರ ನೆಲೆಯ ಮೇಲೆಯೇ ಇಡೀ ಧಾರಾವಾಹಿ ಮುಂದುವರಿಯುತ್ತದೆ.

    ಅಡಿ ಟಿಪ್ಪಣಿ: ದೇವಸ್ಥಾನದಲ್ಲಿ ಕುಣಿಯುವ ಹುಡುಗಿಯರ ಪ್ರಸ್ತಾಪ ಮೊದಲು ಬಂದಿದ್ದು ಕಾಳಿದಾಸನ ಮೇಘದೂತದಲ್ಲಿ. ಆರನೇ ಶತಮಾನದ ಹೊತ್ತಿಗೆ ದೇವದಾಸಿ ಪದ್ಧತಿ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಯಿತು. ಚೋಳರ ಕಾಲದಲ್ಲಿ ಇನ್ನಷ್ಟು ಜನಪ್ರಿಯವಾದ ಈ ಪದ್ಧತಿ ಒಂದು ಸಾಮಾಜಿಕ ಅನಿಷ್ಟವಾಗಿ ಬೆಳೆಯಿತು.

    ಹೊಯ್ಸಳರ ಕಾಲದ ದೇಗುಲಗಳಲ್ಲಿ ವೇಶ್ಯೆಯರ ನರ್ತನಕ್ಕಾಗಿಯೇ ನವರಂಗ ಇರುವುದನ್ನು ಗಮನಿಸಬಹುದು. ಹೊಳೆನರಸೀಪುರ ಒಂದು ಕಾಲದಲ್ಲಿ ವೇಶ್ಯೆಯರಿಗೆ ಪ್ರಸಿದ್ಧವಾಗಿತ್ತು. ವ್ಯಾಪಕವಾಗಿದ್ದ ದೇವದಾಸಿ ಪದ್ಧತಿಯನ್ನು 1988ರಲ್ಲಿ ಕರ್ನಾಟಕ ಸರಕಾರ ಕಾನೂನು ತಂದು ನಿಷೇಧಿಸಿತು. ಈಗ ದೇವದಾಸಿ ಪದ್ಧತಿ ನಿರ್ಮೂಲನೆಯಾಗಿದೆ ಎನ್ನುವುದು ಸಾಮಾನ್ಯ ನಂಬಿಕೆ.

    ಆದರೆ ಮೂರು ತಿಂಗಳ ಹಿಂದೆ ಬಿಬಿಸಿ ಮಾಡಿದ ಸಮೀಕ್ಷೆಯ ಪ್ರಕಾರ ಈಗಲೂ ಕರ್ನಾಟಕದಲ್ಲಿ 25,000 ದೇವದಾಸಿಯರಿದ್ದಾರೆ. ಸವದತ್ತಿಯ ಯಲ್ಲಮ್ಮನ ದೇವಸ್ಥಾನದಲ್ಲಿ ಈಗಲೂ ಕದ್ದುಮುಚ್ಚಿ ಹುಡುಗಿಯರನ್ನು ದೇವದಾಸಿಯರನ್ನಾಗಿ ಮಾಡಲಾಗುತ್ತದೆ ಎಂಬ ವರದಿ ಇದೆ.ವಿನು ಬಳಂಜ ಅವರ ನಿರ್ದೇಶನ, ಸತ್ಯಮೂರ್ತಿ ಆನಂದೂರು ಅವರ ಸಂಭಾಷಣೆ, ಪರಮೇಶ್ವರ ಗುಂಡ್ಕಲ್ ಅವರ ಕಥೆ ಗೆಜ್ಜೆ ಪೂಜೆ ಧಾರಾವಾಹಿಗಿದೆ.

    ನಿರ್ದೇಶಕರ ಬಗ್ಗೆ ಒಂದೆರಡು ಮಾತು: 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿದವರು ನಿರ್ದೇಶಕ ವಿನು ಬಳಂಜ. ಜೀ ಕನ್ನಡದಲ್ಲಿ ಮೊಟ್ಟಮೊದಲ ಸಲ 500 ಕಂತು ದಾಟಿದ ಯಶಸ್ವೀ ಧಾರಾವಾಹಿ 'ಜೋಗುಳ', ವಿನು ಅವರ ಮುಕುಟಕ್ಕೆ ಮತ್ತೊಂದು ಗರಿ. ವೀಕ್ಷಕರು ತುದಿಗಾಲಲ್ಲಿ ನಿಂತು ನಿರೀಕ್ಷಿಸುವಂಥ ಕಥಾವಸ್ತು ಆಯ್ದುಕೊಳ್ಳುವುದು, ನವಿರು ನಿರೂಪಣೆ ಮತ್ತು ತಾಂತ್ರಿಕವಾಗಿ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಳ್ಳುವುದು ವಿನು ಅವರ ವಿಶೇಷತೆ.

    ಗೆಜ್ಜೆ ಪೂಜೆ ತಾರಾಗಣ: ಕಲ್ಪನಾ (ಕಥಾನಾಯಕಿ) ಸುಮಾ, ಮಧು ಹೆಗಡೆ(ಹರಿಪ್ರಸಾದ್ ), ಜ್ಯೋತಿ ರೈ(ಮಂಜುಳಾ ), ಅಶೋಕ್ ಹೆಗಡೆ (ಧರ್ಮಯ್ಯ ), ಉಷಾ ಭಂಡಾರಿ(ರುಕ್ಮಿಣಿ ), ನಿಶಿತಾ ಗೌಡ(ಚಿತ್ರಾ - ),ಅರುಣಾ ಬಾಲ್‌ರಾಜ್( ಯಮುನವ್ವ ), ಕೆ.ವಿ.ನಾಗರಾಜ ಮೂರ್ತಿ(ನಾಗು ), ಗುರು ಹೆಗ್ಡೆ(ಗುರುಪ್ರಸಾದ್) ಮತ್ತಿತರರು.

    Tuesday, September 28, 2010, 12:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X