ಕಿರುತೆರೆಗೆ ಅಡಿಯಿಟ್ಟ ಹ್ಯಾಟ್ರಿಕ್ ಹೀರೋ
ಕನ್ನಡ ಚಲನಚಿತ್ರರಂಗದ ಅಗ್ರಗಣ್ಯ ನಾಯಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ಬರಮಾಡಿಕೊಳ್ಳುವಲ್ಲಿ ಯಶಸ್ವಿಯಾದ ವಾಹಿನಿ, ಜೀ ಕನ್ನಡ ವಾಹಿನಿ. ಜೀ ಕನ್ನಡದ ಸರಿಗಮಪ ಚಾಲೆಂಜ್ ಸಂಗೀತ ಸಮರಕ್ಕೆ ಹ್ಯಾಟ್ರಿಕ್ ಹೀರೋ ಮುಖ್ಯ ಆಥಿತಿಯಾಗಿ ಆಗಮಿಸಿದ್ದರು.
ಸಂಗೀತಾಧಾರಿತ "ಸರಿಗಮಪ" ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಾರಥ್ಯದಲ್ಲಿ ಮೂಡಿಬರುತ್ತಿದೆ. ವಿಶೇಷ ಸಂಚಿಕೆಯೊಂದರ ನಿರ್ಮಾಣಕ್ಕೆ ಶಿವರಾಜ್ ಅವರನ್ನು ಆಹ್ವಾನಿಸಲಾಗಿತ್ತು. ಶಿವರಾಜ್ ಕುಮಾರ್ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೂ ಯಾವುದೇ ಕಿರುತೆರೆಯ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಾಗಲಿ ಅಥವಾ ರಿಯಾಲಿಟಿ ಶೋಗಳಲ್ಲಾಗಲಿ ಕಾಣಿಸಿಕೊಂಡಿದ್ದಿಲ್ಲ ಹೀಗಾಗಿ ಇದು ಅವರಿಗೂ ಹೊಸ ಅನುಭವೇ.
ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ ಸ್ವತಃ ಹಾಡಿ, ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದಿದ್ದಾರೆ. ನಾಯಕ ನಟರಾಗಿ ಬಾರಿ ಜನಪ್ರಿಯತೆಗಳಿಸಿರುವ ಶಿವರಾಜ್ಕುಮಾರ್ ಸ್ವತಃ ಗಾಯಕರಾಗಿಯೂ ಅನೇಕ ಹಾಡುಗಳನ್ನು ಹಾಡಿದ್ದು ತಮ್ಮ ಹಾಡು ಹಾಗೂ ಹಿನ್ನೆಲೆ ಗಾಯನದ ಅನುಭವವನ್ನು ಸರಿಗಮಪದಲ್ಲಿ ಹಂಚಿಕೊಂಡರು.
ಜೊತೆಗೆ ಹಂಸಲೇಖ ಅವರೊಂದಿಗಿನ ಸಂಗೀತ ಹಾಗೂ ಸಾಹಿತ್ಯದ ಒಡನಾಟಗಳನ್ನು ಶಿವಣ್ಣ ಹಂಚಿಕೊಂಡರು. ತಮ್ಮ 23 ವರ್ಷಗಳ ನಟನಾ ಬದುಕಿನ ಆಯ್ದ ಘಟನೆಗಳ ಬಗ್ಗೆ ಶಿವಣ್ಣ ಮನಬಿಚ್ಚಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವರ್ಣರಂಜಿತ ಕಾರ್ಯಕ್ರಮ ಸದ್ಯದಲ್ಲಿಯೇ ಜೀಕನ್ನಡದಲ್ಲಿ ಪ್ರಸಾರ ಕಾಣಲಿದೆ.


Click it and Unblock the Notifications











