ಖಳ ನಾಯಕಿಯಾಗಿ ಮತ್ತೆ ಕಿರುತೆರೆಗೆ ಎಂಟ್ರಿಕೊಟ್ಟ ಐಶ್ವರ್ಯ ಬಸ್ಪುರೆ
ಯಾರೇ ನೀ ಮೋಹಿನಿ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದಿದ್ದ ಖಳ ನಾಯಕಿ ನಟಿ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಖಳ ನಾಯಕಿ ಪಾತ್ರದಿಂದಲೇ ಹೆಚ್ಚು ಹೆಸರು ಮಾಡಿದ ಐಶ್ವರ್ಯ ಬಸ್ಪುರೆ, ಮತ್ತೆ ವಿಲನ್ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.
ಗುಂಡು ಮುಖದ ದುಂಡು ಬೆಡಗಿ ಐಶ್ವರ್ಯ ಬಸ್ಪುರೆ. 2015ರಲ್ಲಿ ಐಶ್ವರ್ಯ ಬಸ್ಪುರೆ ಅವರು ಮಿಸ್ ಕರ್ನಾಟಕ ವಿಜೇತೆಯಾಗಿದ್ದರು. ನಟನೆಯ ಜೊತೆಗೆ ಐಶ್ವರ್ಯ ಬಸ್ಪುರೆ ಅವರು ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.
ಐಶ್ವರ್ಯ ಬಸ್ಪುರೆ ಅವರಿಗೆ ಅವರ ಮನೆಯಲ್ಲಿ ತಮ್ಮ ನಟನಾ ಆಸಕ್ತಿಗೆ ಸಹಕಾರವಿದೆಯಂತೆ. ಮತ್ತೆ ವಿಲನ್ ಪಾತ್ರದ ಮೂಲಕವೇ ಐಶ್ವರ್ಯ ಬಸ್ಪುರೆ ಎಂಟ್ರಿ ಕೊಟ್ಟಿರುವುದಕ್ಕೆ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ.

ಉದಯ ಟಿವಿ ಮೂಲಕ ಕಿರುತೆರೆ ಪಯಣ ಶುರು
ಮಹಾಸತಿ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಐಶ್ವರ್ಯ ಬಸ್ಪುರೆ ಬಣ್ಣ ಹಚ್ಚಿದ್ದರು. ಮಹಾಸತಿ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಇದರಲ್ಲಿ ಐಶ್ವರ್ಯ ಬಸ್ಪುರೆ ಅವರು ನಾಯಕಿಯಾಗಿ ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಧಾರಾವಾಹಿಯಲ್ಲಿ ಅಳುಮುಂಜಿಯಾಗಿದ್ದರು. ಮಹಾಸತಿ ಧಾರಾವಾಹಿ ಐಶ್ವರ್ಯ ಬಸ್ಪುರೆ ಅವರಿಗೆ ಅಷ್ಟೇನು ಹೆಸರನ್ನು ತಂದುಕೊಡಲಿಲ್ಲ.

ಮಾಯಾಳನ್ನು ಒಪ್ಪಿದ್ದ ವೀಕ್ಷಕರು
ಶೃತಿ ನಾಯ್ಡು ಅವರ ಗರಡಿಯಲ್ಲಿ ಬೆಳೆದ ಐಶ್ವರ್ಯ ಬಸ್ಪುರೆ ಅವರು, ನಂತರ ಜೀ ಕನ್ನಡಕ್ಕೆ ಎಂಟ್ರಿಕೊಟ್ಟರು. ಜೀ ಕನ್ನಡ ವಾಹಿನಿಯಲ್ಲಿ ಖಳ ನಾಯಕಿಯಾಗಿ ಕಾಣಿಸಿಕೊಂಡರು. ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ನಟಿಸಿದ ಐಶ್ವರ್ಯ ಬಸ್ಪುರೆ ಅವರು ಮಾಯಾ ಪಾತ್ರದಲ್ಲಿ ಮಿಂಚಿದರು. ಮಾಯಾ ಪಾತ್ರದಲ್ಲಿ ಐಶ್ವರ್ಯ ಬಸ್ಪುರೆ ಅವರನ್ನು ನೋಡಿದ ಪ್ರೇಕ್ಷಕರು ಹಿಡಿ ಶಾಪ ಹಾಕಲು ಶುರು ಮಾಡಿದರು. ಈ ಮೂಲಕ ಐಶ್ವರ್ಯ ಅವರ ನಟನೆಯನ್ನು ಮೆಚ್ಚಿಕೊಂಡಿದ್ದರು. ಈಗಲೂ ಇವರನ್ನು ಜನ ಮಾಯಾ ಎಂಬ ಹೆಸರಿನಲ್ಲೇ ಗುರುತಿಸುತ್ತಾರೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಅವಕಾಶವಿಲ್ಲದ ಕಾರಣ ಕೊಂಚ ಸೈಲೆಂಟ್ ಆಗಿದ್ದರು.

ಎರಡನೇ ಇನ್ನಿಂಗ್ಸ್ ಶುರು ಮಾಡಿದ ಐಶ್ವರ್ಯ ಬಸ್ಪುರೆ
ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಸಂಘರ್ಷ ಧಾರಾವಾಹಿಗೆ ಬಣ್ಣ ಹಚ್ಚಿದರು. ಇದೀಗ ಮತ್ತೆ ಜೀ ಕನ್ನಡ ವಾಹಿನಿಗೆ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಹೊಸ ಪಾತ್ರ ಕಳೆದ ವಾರ ಎಂಟ್ರಿಯಾಗಿದೆ. ಮಾಳವಿಕಾ ಹೆಸರಿನಲ್ಲಿ ಐಶ್ವರ್ಯ ಬಸ್ಪುರೆ ಎಂಟ್ರಿ ಕೊಟ್ಟಿದ್ದು, ಈಗ ಕಾರ್ತಿಕ್ ಹಾಗೂ ಅವರ ಮನೆಗೆ ಮಸಿ ಬಳಿಯಲು ಮುಂದಾಗಿದ್ದಾಳೆ. ಈ ಧಾರಾವಾಹಿಯಲ್ಲಿ ಜಸ್ಟ್ ಗೆಸ್ಟ್ ರೋಲ್ ಮಾಡುತ್ತಾರಾ ಇಲ್ಲವೇ ಈಗಿರುವ ವಿಲನ್ ಪಾತ್ರದ ಜೊತೆಗೆ ಕೈ ಜೋಡಿಸಿ ಸೀರಿಯಲ್ ನಲ್ಲಿ ಮುಂದುವರಿಯುತ್ತಾರಾ ಎಂಬುದೇ ಪ್ರೇಕ್ಷಕರ ಕುತೂಹಲವಾಗಿದೆ.

ಅವಕಾಶಕ್ಕಾಗಿ ಕಾಯುತ್ತಿರುವ ನಟಿ
ಇನ್ನು ಐಶ್ವರ್ಯ ಬಸ್ಪುರೆ ಅವರು ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲೂ ನಟಿಸಿದ್ದಾರೆ. ಇದು ಹೊರತು ಪಡಿಸಿ ಕಳೆದ ವರ್ಷ ಸೈಕಾಲಜಿ, ಜರ್ನಲಿಸಂ ಮತ್ತು ಲಿಟರೇಚರ್ ನಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿದ್ದಾರೆ.. ಉತ್ತಮ ಪಾತ್ರಗಳಿಗಾಗಿ ಕಾಯುತ್ತಿರುವ ಐಶ್ವರ್ಯ ಬಸ್ಪುರೆ ಅವರಿಗೆ ಯಾರೇ ನೀ ಮೋಹಿನಿ ಧಾರಾವಾಹಿ ಒಳ್ಳೆಯ ಬ್ರೇಕ್ ಕೊಟ್ಟಿತ್ತು. ಆದರೆ ಕೋವಿಡ್ ನಿಂದಾಗಿ ಸಿಕ್ಕ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳೆಲ್ಲವೂ ಕೈ ಬಿಟ್ಟಿದ್ದವು. ಇದೀಗ ಮಾಳವಿಕಾ ಪಾತ್ರ ಬ್ರೇಕ್ ಕೊಡುತ್ತದೆಯಾ ಕಾದು ನೋಡಬೇಕಿದೆ.


Click it and Unblock the Notifications











