'ಸರಿಗಮಪ ಲಿಟಲ್ ಚಾಂಪ್ಸ್' 19 ಆಡಿಷನ್ ಶುರು: ನಿಮ್ಮ ಮಕ್ಕಳೂ ಭಾಗವಹಿಸಬಹುದು!
ಹತ್ತು ಹಲವು ಬಗೆಯ ರಿಯಾಲಿಟಿ ಶೋಗಳನ್ನು ನೀಡುವ ಮೂಲಕ ವಾಹಿನಿಗಳು ಜನ ಮನ ಗೆಲ್ಲುತ್ತಿವೆ. ಜೀ ಕನ್ನಡ ವಾಹಿನಿಯಲ್ಲೂ ಅದ್ಭುತವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮ ಜೂನಿಯರ್ಸ್ ಸೇರಿದಂತೆ ಡ್ಯಾನ್ಸ್ ಶೋ, ಟಾಕ್ ಶೋ ಮೂಡಿ ಬರುತ್ತಿವೆ.
ಹಲವು ಸೀಸನ್ಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ ಸರಿಗಮಪ ಲಿಟಲ್ ಚಾಂಪ್ಸ್. ಇಡೀ ಕರ್ನಾಟಕದ ಮೂಲೆ ಮೂಲೆಗಳಿಂದಲೂ ಮಕ್ಕಳನ್ನು ಒಂದು ಕಡೆ ಸೇರಿಸಿ, ಮಕ್ಕಳಲ್ಲಿ ಹಾಡಿನ ಕಲೆ ಬಗ್ಗೆ ಮೊಳಕೆಯಲ್ಲಿ ಪಾಠ ಮಾಡುವ ಶಾಲೆಯೇ ಸರಿಗಮಪ ಲಿಟಲ್ ಚಾಂಪ್ಸ್. ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಮೂಲಕ ನೂರಾರು ಪುಟಾಣಿಗಳು ಕಿರುತೆರೆಯಲ್ಲಿ ಮಿಂಚಿದ್ದಾರೆ.
'ಸರಿಗಮಪ ಲಿಟಲ್ ಚಾಂಪ್ಸ್'ನಲ್ಲಿ ಭಾಗವಹಿಸಿದ ಕೆಲ ಮಕ್ಕಳು ಕಿರುತೆರೆ ಹಾಗೂ ಬೆಳ್ಳಿಪರದೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪುಟಾಣಿಗಳ ಕಂಠಕ್ಕೆ, ಅವರ ಮುಗ್ಧತೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಇನ್ನು ಪ್ರಪಂಚದ ಅರಿವಿಲ್ಲದ ಮಕ್ಕಳು, ಅರ್ಥಪೂರ್ಣವಾದ ಹಾಡುಗಳನ್ನು ಹಾಡಿ ಏಲ್ಲರ ಮನ ಮುಟ್ಟಿದ್ದಾರೆ.

'ಸರಿಗಮಪ ಲಿಟಲ್ ಚಾಂಪ್ಸ್' ಸೀಸನ್ 19!
'ಸರಿಗಮಪ ಲಿಟಲ್ ಚಾಂಪ್ಸ್' ರಿಯಾಲಿಟಿ ಶೋ ಸಿಕ್ಕಾಪಟ್ಟೆ ಹಿಟ್ ಆದ ಶೋ. ಈಗಾಗಲೇ ಬರೋಬ್ಬರಿ 18 ಸೀಸನ್ಗಳು ಪ್ರಸಾರಗೊಂಡಿವೆ. ಕರ್ನಾಟಕದ ಮೂಲೆ ಮೂಲೆಗಳಿಂದ ಬರುವ ಪುಟಾಣಿ ಪ್ರತಿಭೆಗಳು ವೇದಿಕೆ ಮೇಲೆ ಮಿಂಚಿ, ಹಿನ್ನೆಲೆ ಗಾಯಕರೂ ಆಗಿದ್ದಾರೆ. ಚಿಕ್ಕ ವಯಸ್ಸಿಗೆ ಸಕ್ಸಸ್ ಕಂಡ ಪುಟಾಣಿಗಳು ಮತ್ತಷ್ಟು ಕಂದಮ್ಮಗಳಿಗೆ ಸ್ಪೂರ್ತಿಯಾಗಿದ್ದಾರೆ. ಇದೀಗ ಮತ್ತೆ 'ಸರಗಮಪ ಲಿಟಲ್ ಚಾಂಪ್ಸ್' ಆರಂಭವಾಗಲಿದ್ದು, ಜೀ ಕನ್ನಡ ವಾಹಿನಿ ಪುಟಾಣಿಗಳಿಗೆ ಸ್ವಾಗತ ಕೋರಿದೆ.

ನಿಮ್ಮ ಮಕ್ಕಳಿಗೆ ಇದು ಸದಾವಕಾಶ!
ಜೀ ಕನ್ನಡ ವಾಹಿನಿ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ಕ್ಕೆ ಆಡಿಷನ್ ನಡೆಸುತ್ತಿದೆ. ಆಸಕ್ತ ಪೋಷಕರು ಮಕ್ಕಳು ಹಾಡಿದ ವೀಡಿಯೋಗಳನ್ನು ವಾಹಿನಿಗೆ ತಲುಪಿಸುವಂತೆ ಪ್ರಕಟಣೆ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ವಾಹಿನಿ, ಫೇಸ್ ಬುಕ್, ಟ್ವಿಟರ್ ಹಾಗೂ ಇನ್ ಸ್ಟಾಗ್ರಾಂಗಳಲ್ಲಿ ವಾಟ್ಸಪ್ ಫೋನ್ ನಂಬರ್ ಪ್ರಕಟಸಿದ್ದು, ಆಸಕ್ತರು ವೀಡಿಯೋ ಕಳಿಸುವಂತೆ ಹೇಳಿದೆ. 4 ರಿಂದ 15 ವರ್ಷದೊಳಗಿನ ಮಕ್ಕಳು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ರಲ್ಲಿ ಭಾಗವಹಿಸಬಹುದು.

ರಾಜ್ಯದ ಹಲವಡೆಯಿಂದ ಮಕ್ಕಳಿಗೆ ಅವಕಾಶ!
ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಆಡಿಷನ್ ನಡೆಯಲಿದೆ. ಉತ್ತಮ ಗಾಯಕ ಪ್ರತಿಭೆಗಳನ್ನು ವಾಹಿನಿ ಆಯ್ಕೆ ಮಾಡಲಿದೆ. 4 ರಿಂದ 15 ವಯಸ್ಸಿನ ಮಕ್ಕಳು ಈ ಬಾರಿ ವೇದಿಕೆಯಲ್ಲಿ ಹಾಡಲಿದ್ದಾರೆ. ಈ ಬಾರಿಯೂ ಕಾರ್ಯಕ್ರಮದಲ್ಲಿ ಬೇರೆ ಬೇರೆ ಹಿನ್ನಲೆಯ ಮಕ್ಕಳು ಭಾಗಿಯಾಗಲಿದ್ದಾರೆ. ಪೋಷಕರು ಮಕ್ಕಳ ವೀಡಿಯೋವನ್ನು 9513516200 ನಂಬರ್ಗೆ ವಾಟ್ಸಪ್ ಮಾಡಬಹುದಾಗಿದೆ. ಸೆಲೆಕ್ಟ್ ಆದ ಮಕ್ಕಳಿಗೆ ಕರೆ ಮಾಡಿ ವಾಹಿನಿ ಮಾಹಿತಿ ನಿಡಲಾಗುತ್ತದೆ.

ಈ ಬಾರಿ ತೀರ್ಪುಗಾರರ್ಯಾರು?
ಈ ಹಿಂದೆ 'ಸರಿಗಮಪ ಲಿಟಲ್ ಚಾಂಪ್ಸ್' ಕಾರ್ಯಕ್ರಮದ ತೀರ್ಪುಗಾರರ ಸ್ಥಾನದಲ್ಲಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಇದ್ದರು. ನಾದಬ್ರಹ್ಮ ಹಂಸಲೇಖ ಮಹಾ ಗುರುಗಳಾಗಿದ್ದರು. ಅನುಶ್ರೀ ನಿರೂಪಣೆ ಮಾಡಿದ್ದರು. ಈ ಬಾರಿಯೂ ಅನುಶ್ರೀ ಆಂಕರಿಂಗ್ ಮಾಡಲಿದ್ದಾರೆ. ಆದರೆ, ತೀರ್ಪುಗಾರರ ಸ್ಥಾನದಲ್ಲಿ ಯಾರೆಲ್ಲಾ ಕೂರಬಹುದು ಎಂಬ ಕುತೂಹಲವಿದೆ. ಆದರೆ, ಎಲ್ಲಾ ವಿಚಾರ ಸಂಪೂರ್ಣವಾಗಿ ತಿಳಿಯಬೇಕೆಂದರೆ ಕಾಯಲೇಬೇಕಿದೆ.


Click it and Unblock the Notifications











