ಪ್ರಥಮ್ ಕಾಲಿಟ್ಟ ಕಡೆಯಲ್ಲೆಲ್ಲಾ ಬರೀ ಕಿರಿಕ್ಕೇ.! ಸಾಕ್ಷಿ ಬೇಕಾ?
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಹಾಗೂ ಬಿಗ್ ಬಾಸ್ ಸ್ವರ್ಧಿ ಪ್ರಥಮ್ ನಡುವೆ ಮೆಗಾ ಫೈಟ್.! ಫೋನ್ ಕಾಲ್ ಮೂಲಕ ಆಗಿತ್ತು ಕಿರಿಕ್. ಕಾರಣ ಏನು? ಯಾವಾಗ ಕಿರಿಕ್ ಆಗಿದ್ದು? ಇಲ್ಲಿದೆ ನೋಡಿ...
'ಬಿಗ್ ಬಾಸ್ ಕನ್ನಡ-4' ಶುರುವಾಗಿ ಇನ್ನೂ ಒಂದು ವಾರ ಆಗಿಲ್ಲ. ಅಷ್ಟು ಬೇಗ, 'ಬಿಗ್ ಬಾಸ್' ಮನೆಯಲ್ಲಿ ಕಿರಿಕ್ ಮೇಲೆ ಕಿರಿಕ್ ನಡೆಯುತ್ತಿದೆ. ಈ ಎಲ್ಲಾ ಕಿರಿಕ್ ಗಳಿಗೂ ಕಾರಣ ಕಿರಿಕ್ ಕೀರ್ತಿ ಅಲ್ಲ. ಕೀರ್ತಿ ಜೊತೆ ಮೊದಲ ದಿನವೇ ಕಿರಿಕ್ ಮಾಡಿಕೊಂಡಿದ್ದ 'ಒಳ್ಳೆ ಹುಡುಗ' ಅಂತ ಸ್ವಯಂ ಬಿರುದು ಕೊಟ್ಟುಕೊಂಡಿರುವ ಪ್ರಥಮ್.!
'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಈ ಒಳ್ಳೆ ಹುಡುಗನ ಆಟ, ಹುಚ್ಚಾಟ, ರಂಪಾಟಗಳನ್ನೆಲ್ಲ ನೀವು ನೋಡ್ತಾ ಇದ್ದೀರಾ...ಕ್ಯಾಮರಾ ಮುಂದೆ ಮಾತ್ರ ಪ್ರಥಮ್ ಹೀಗೆ ಅಂದುಕೊಳ್ಳಬೇಡಿ. ರಿಯಲ್ ನಲ್ಲೂ ಪ್ರಥಮ್ ಸೇಮ್ ಟು ಸೇಮ್ ಹೀಗೆಯೇ....! ಅದಕ್ಕೆ ಸಾಕ್ಷಿ ಬೇಕಾ? [ಬಿಗ್ ಬಾಸ್-4: ಈ ವಾರ ಮನೆಯಿಂದ ಹೊರ ಹೋಗೋರು ಯಾರು?]
'ಬಿಗ್ ಬಾಸ್' ಮನೆಯೊಳಗೆ ಹೋಗುವ ಮುನ್ನ ಪ್ರಥಮ್ ಮಾಡಿಕೊಂಡಿದ್ದ ಒಂದು ಕಿರಿಕ್ ಪುರಾಣ ಈಗ ಬಯಲಾಗಿದೆ. ಇದೇ 'ಬಿಗ್ ಬಾಸ್' ಮನೆಯಲ್ಲಿ ಕಿರಿಕ್ ಮಾಡಿಕೊಂಡು ಗೇಟ್ ಪಾಸ್ ಪಡೆದಿದ್ದ ಹುಚ್ಚ ವೆಂಕಟ್ ಜೊತೆ ಪ್ರಥಮ್ ಗಲಾಟೆ ಮಾಡಿಕೊಂಡಿದ್ದ ಸತ್ಯ ಸಂಗತಿ ಇದೀಗ ಬಹಿರಂಗವಾಗಿದೆ. ಅದರ ಆಡಿಯೋ ಕ್ಲಿಪ್ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದೆ. ಅಷ್ಟಕ್ಕೂ, ಪ್ರಥಮ್ ಹಾಗೂ ಹುಚ್ಚ ವೆಂಕಟ್ ಯಾಕೆ ಜಗಳ ಆಡಿದ್ದು ? ಯಾವಾಗ ? ಎಂಬ ಸಂಪೂರ್ಣ ವರದಿ ಇಲ್ಲಿದೆ ನೋಡಿ....

ಆಡಿಯೋ ಕ್ಲಿಪ್ ನಲ್ಲಿ ಏನಿದೆ ?
ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಆಡಿಯೋ ಕ್ಲಿಪ್ ನಲ್ಲಿ ಪ್ರಥಮ್-ಹುಚ್ಚ ವೆಂಕಟ್ ನಡುವೆ ನಡೆದ ಮಾತಿನ ಜಟಾಪಟಿ ಇದೆ.

ವೆಂಕಟ್ v/s ಪ್ರಥಮ್
ಪ್ರಥಮ್: ''ವೆಂಕಟ್ ಜಿ...ನಾನು ಪ್ರಥಮ್, ಈಗ ಕಾಲ್ ಮಾಡಿದ್ದೆ ಅಲ್ವಾ. ಫೈನಲ್ ಆಗಿ ಸಾಂಗ್ ವೊಂದು ಮಾಡಿ ಕೊಟ್ಟುಬಿಡಿ. ಬೇರೇನು ಬೇಡ. ಎಲ್ಲವೂ ಪ್ರೀತಿಯಿಂದ, ನಗುನಗುತಾ ಕೆಲಸ ಮಾಡಿ ಮುಗಿಸಿಕೊಂಡು ಬಿಡೋಣ''
ವೆಂಕಟ್: ''ನಿನ್ನಳೆ,,,,ನೀ ಯಾವ ಮಟ್ಟಕ್ಕೆ ಬರ್ತಿಯಾ ಅಂದ್ರೆ, ರೋಡ್ ಗೆ ಬರ್ತಿಯಾ ನೀನು. ಆ ಪಿಕ್ಚರ್ ಮಾಡ್ಬಿಡೋ ನೋಡೋಣ.!''

ಮಾತಿನಲ್ಲೇ ಶುರುವಾಯ್ತು ಜಗಳ
ಪ್ರಥಮ್: ''ಖಂಡಿತಾ ನಾನು ರೋಡಲ್ಲೇ ಇದ್ದೀನಿ. ನೀವು ಏನೂ ಮಾಡೋಕೆ ಆಗಲ್ಲ.!''
ವೆಂಕಟ್: ''ಹೌದಾ, ನನ್ ಅಡ್ರೆಸ್ ಕೊಡ್ತೀನಿ ಮನೆ ಹತ್ರ ಬಾ''
ಪ್ರಥಮ್: ''ಎಲ್ಲಿ ಗುರು ನಿನ್ನ ಅಡ್ರೆಸ್, ಆಕ್ಟ್ ಮಾಡು ಅಂತ ತಾನೆ ಅಂದೆ, ಮಾಡ್ತೀನಿ ಅಂದ್ರೆ ಮಾಡ್ತೀನಿ ಅನ್ನು, ಇಲ್ಲ ಅಂದ್ರೆ ಇಲ್ಲ ಅನ್ನು, ಅದೇನು ಕೊಲೆಗಿಲೆ ಮಾಡಿ ಬಿಡ್ತೀನಿ ಅಂತಿಯಾ''

ಕಮೀಷನರ್ ಸಂಬಂಧಿಕರಂತೆ ಮಾತು
ವೆಂಕಟ್: ''ಐ.ಜಿ ಕಮಿಷನರ್ ಯಾರನ್ನೂ ಕೇರ್ ಮಾಡಲ್ಲ. ಬಾ, ನಿನಗೆ ಕಮಿಷನರ್ ಹತ್ರ ಬೋಟಿ ಬಿಚ್ಚಿಸ್ತೀನಿ ಬಾ ನಿಂದು.!''
ಪ್ರಥಮ್: ''ಬೋಟಿ ಬಿಚ್ಚಿಸೋಕೆ ಮಟನ್ ಚಾಪ್ಸ್ ಇಟ್ಕೊಂಡಿದ್ದಾರ ಕಮಿಷನರ್.? ಅಲ್ಲ ಗುರು, ಹೆಣ್ಮಕ್ಳಿಗೆ ಬೆಲೆ ಕೊಡ್ತೀನಿ ಅಂತಿಯಾ? ಮಹಿಳಾ ಮಿನಿಸ್ಟರ್ ಗೆ ಕೊಲೆ ಮಾಡ್ಬಿಡ್ತೀನಿ ಅಂತಿಯಾ.?''

ಸಂಭಾಷಣೆ ಕಟ್
ವೆಂಕಟ್: ''ಎಲ್ಲಾ ಟ್ರ್ಯಾಪ್ ಆಗುತ್ತೆ ಗೊತ್ತಾ ನಿನಗೆ''
ಪ್ರಥಮ್: ''ಪ್ರತಿಯೊಂದು ನನಗೂ ಗೊತ್ತು. ನಾನು ಹೇಳೋದು ಕೇಳಿಸ್ಕೋ..'' - ಇಲ್ಲಿಗೆ ಈ ಪೋನ್ ಸಂಭಾಷಣೆ ಕಟ್ ಆಗಿದೆ. ಇದ್ರ ಹಿಂದೆ ಏನು ನಡೆದಿದೆ, ಮುಂದೆ ಏನಾಗಿದೆ ಅಂತ ಯಾರಿಗೂ ಗೊತ್ತಿಲ್ಲ.

ಇಬ್ಬರಲ್ಲಿ ಸಭ್ಯರು ಯಾರು?
ಹುಚ್ಚ ವೆಂಕಟ್ ಹಾಗೂ ಪ್ರಥಮ್ ನಡುವಿನ ಮಾತಿನ ಸಮರದ ಈ ಆಡಿಯೋ ಕ್ಲಿಪ್ ನ, ಪ್ರಥಮ್ ಗೆಳೆಯ ಲೋಕೇಶ್ ಎಂಬುವರು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. 'ಇವರಿಬ್ಬರಲ್ಲಿ ಯಾರು ಸಭ್ಯರು' ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಆಡಿಯೋ ಕ್ಲಿಪ್ ಕೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗ್ತಿದೆ.

ಅಪ್ ಲೋಡ್ ಮಾಡಿದ್ದು ಯಾಕೆ
'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಟಿವಿಯೊಂದರಲ್ಲಿ ಚರ್ಚೆ ನಡೆಯುತ್ತಿದ್ದಾಗ ಪ್ರಥಮ್ ಇದೆಲ್ಲ ಪಬ್ಲಿಸಿಟಿಗೆ ಮಾಡ್ತಿರೋದು ಅಂತ ಹುಚ್ಚ ವೆಂಕಟ್ ಟೀಕಿಸಿದ್ದರಂತೆ. ಅದಕ್ಕೆ ಈ ಆಡಿಯೋ ಕ್ಲಿಪ್ ಅಪ್ ಲೋಡ್ ಮಾಡಿದ್ದೇನೆ. ಜನ ನಿರ್ಧಾರ ಮಾಡ್ತಾರೆ ಯಾರು ಸಭ್ಯರು ಅಂತ ಪ್ರಥಮ್ ಸ್ನೇಹಿತ ಲೋಕೇಶ್ ಹೇಳಿದ್ದಾರೆ.

ಇದು ಶುರುವಾಗಿದ್ದು ಹೇಗೆ
ಪ್ರಥಮ್ ನಿರ್ದೇಶನ ಮಾಡಿರುವ 'ದೇವ್ರಾಣೆ ಬುಡು ಗುರೂ' ಚಿತ್ರದಲ್ಲಿ ಹುಚ್ಚ ವೆಂಕಟ್ ರನ್ನ ಒಂದು ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ. ಆದ್ರೆ, ವೆಂಕಟ್ ನಿರಾಕರಿಸಿದ್ದಾರೆ. ಆಮೇಲೆ, ಒಂದು ಹಾಡಿನಲ್ಲಾದರೂ ಬಂದು ನಟಿಸುವಂತೆ ಎರಡನೇ ಬಾರಿ ಕಾಲ್ ಮಾಡಿದಾಗ ವೆಂಕಟ್ ಹಾಗೂ ಪ್ರಥಮ್ ಮಧ್ಯೆ ಈ ಮಾತಿನ ಚಕಮಕಿ ನಡೆದಿದೆ.

ಈ ಬಗ್ಗೆ ಹುಚ್ಚ ವೆಂಕಟ್ ಹೇಳುವುದೇನು.?
ಈ ಆಡಿಯೋ ಕ್ಲಿಪ್ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹುಚ್ಚ ವೆಂಕಟ್, ''ಪ್ರಥಮ್ ನನ್ನ ಹತ್ರ ಒಂದು ಪಾತ್ರ ಮಾಡುವಂತೆ ಕೇಳಿಕೊಂಡು ಬಂದಿದ್ದ. ನಾನು ಕಮಿಷನರ್ ಮೊಮ್ಮಗ, ಅಂತ ಹೇಳಿಕೊಂಡಿದ್ದ. ನನಗೆ ಆ ಪಾತ್ರ ಇಷ್ಟವಾಗಿಲ್ಲ. ನಾನು ಮಾಡಲ್ಲ ಅಂದೆ'' - ಹುಚ್ಚ ವೆಂಕಟ್

'ಕ್ರಿಕೆಟ್ ಬುಕ್ಕಿ' ಪಾತ್ರ ಮಾಡಬೇಕಿತ್ತಂತೆ
''ಆ ಚಿತ್ರದಲ್ಲಿ ನಾನು 'ಕ್ರಿಕೆಟ್ ಬುಕ್ಕಿ ಹುಚ್ಚ ವೆಂಕಟ್' ಎಂಬ ಪಾತ್ರ ಮಾಡಬೇಕು ಅಂತ ಕೇಳಿದ್ದ. ಕೆಟ್ಟ ಪದಗಳನ್ನ ಬಳಸಿದ್ದ. 'ನಾನು ಯಾರನ್ನೂ ಕೇರ್ ಮಾಡಲ್ಲ. ಎ.ಸಿ.ಪಿ ಕಮಿಷನರ್ ಗೆ ಕೇರ್ ಮಾಡಲ್ಲ' ಅಂತಿದ್ದ. ಈಗ ಅದೇ ತಾನೆ ರೆಕಾರ್ಡ್ ಆಗಿರೋದು'' - ಹುಚ್ಚ ವೆಂಕಟ್

ಅಸಲಿ ಕಥೆ ಏನು.?
ಇಲ್ಲಿ ನಿಜವಾಗಲೂ ಯಾರದ್ದು ತಪ್ಪು? ಯಾರದ್ದು ಸರಿ ಅಂತ ಹೇಳಲು ಕಷ್ಟ. ಯಾಕಂದ್ರೆ, ಆ ಸಂಪೂರ್ಣ ಆಡಿಯೋ ಕ್ಲಿಪ್ ಬಹಿರಂಗ ಆಗಿಲ್ಲ.


Click it and Unblock the Notifications











