ಮೂರೇ ದಿನಕ್ಕೆ ಡಾರ್ಲಿಂಗ್ ಎನ್ನಿಸಿಕೊಂಡ ಶಕೀಲಾ
ಮೂರನೇ ದಿನ ಬಿಗ್ ಬಾಸ್ ಮನೆ ಸ್ವಲ್ಪ ಗರಂ ಆಗಿ ಕಾಣಿಸಿತು. ಶಕೀಲಾಗೆ ಕನ್ನಡ ಬರಲ್ಲ, ಬಿಗ್ ಬಾಸ್ ಅವರನ್ನು ಬಿಡಲ್ಲ ಎಂಬಂತಾಗಿದೆ. ಆದರೂ ಶಕೀಲಾ ಮಾತ್ರ ಯಾವುದಕ್ಕೂ ಕೇರ್ ಮಾಡದಂತೆ ಕಾಣುತ್ತಿಲ್ಲ. ಅವರೊಂದಿಗೆ ಹೆಚ್ಚಾಗಿ ನೀತೂ, ರೋಹಿತ್ ಬೆರೆಯುತ್ತಿದ್ದಾರೆ. ಉಳಿದ ಸದಸ್ಯರು ಶಕೀಲಾ ಜೊತೆ ಬೆರೆಯುತ್ತಿರುವುದು ಅಷ್ಟಕ್ಕಷ್ಟೆ.
ಮನೆಯ ಸದಸ್ಯರಾದರೂ ಅವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡಬಹುದಲ್ಲಾ? ಅವರೂ ಸಹ ಅರ್ಧಂಬರ್ಧ ಕನ್ನಡದಲ್ಲೇ ಶಕೀಲಾ ಜೊತೆ ಸಂಭಾಷಿಸುತ್ತಿದ್ದಾರೆ. ಶಕೀಲಾ ಏನು ಹೇಳಿದರು ಎಂಬುದನ್ನು ಬಿಗ್ ಬಾಸ್ ಕನ್ನಡದಲ್ಲಿ ಹೇಳಬೇಕಾದ ಪರಿಸ್ಥಿತಿ ಇನ್ನೂ ಮುಂದುವರಿದಿದೆ. [ಎರಡನೇ ದಿನ ಮನೆಯಲ್ಲಿ ಕಿಟಾರನೆ ಚೀರಿದ ಶ್ವೇತಾ]
ಮೊದಲು ಶಕೀಲಾರನ್ನು ಚೇಚಿ ಎಂದು ಕರೆದ ರೋಹಿತ್ ಬಳಿಕ ಅವರನ್ನು ಶಕೀಲಾ ಎಂದು ಕರೆದ. ಇಷ್ಟಕ್ಕೂ ಚೇಚಿ ಎಂದರೆ ಏನರ್ಥ ಎಂದು ಶಕೀಲಾರನ್ನು ಕೇಳಿದ. ಅದರರ್ಥ ಅಕ್ಕ ಎಂದು ಹೇಳುತ್ತಾರೆ ಶಕೀಲಾ. ನಾನು ಒಡಹುಟ್ಟಿದವರನ್ನು ಬಿಟ್ಟು ಬೇರೆ ಯಾರನ್ನೂ ಅಕ್ಕ ತಂಗಿ ಎಂದು ಕರೆಯಲ್ಲ ಎನ್ನುತ್ತಾರೆ ರೋಹಿತ್.

ಜನ್ಮಾಂತರದ ಬಗ್ಗೆ ಶಕೀಲಾ ಹೊಸ ವೇದಾಂತ
ಇದೇ ಸಂದರ್ಭದಲ್ಲಿ ಶಕೀಲಾ ಜನ್ಮಾಂತರದ ಬಗ್ಗೆ ಒಂದು ವಿಷಯನ್ನೂ ಹೇಳಿದರು. ಅವರ ಪ್ರಕಾರ, ಎಲ್ಲರೂ ತಮ್ಮ ತಮ್ಮ ಕುಟುಂಬವನ್ನು ಪ್ರೀತಿಸುವುದರಿಂದ ಅದೇ ಕುಟುಂಬದಲ್ಲಿ ಮತ್ತೆ ಹುಟ್ಟಬಹುದು. ನನ್ನ ಕುಟುಂಬದ ಬಗ್ಗೆ ನನಗೆ ಯಾವುದೇ ಪ್ರೀತಿ ಗೌರವ ಇಲ್ಲ. ಆದರೆ ಮುಂದಿನ ಜನ್ಮದಲ್ಲಿ ಅದೇ ಕುಟುಂಬದಲ್ಲಿ ಹುಟ್ಟಿ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದರು ಶಕೀಲಾ.

ಅಕುಲ್ ಮೇಲೆ ನೀತೂ ಗರಂ
'ಬಿಗ್ ಬಾಸ್ ತುಲಾಭಾರ ಸೇವೆ' ಟಾಸ್ಕ್ ನಿಭಾಯಿಸುತ್ತಾ ನೀತೂ ಹಾಗೂ ಅಕುಲ್ ನಡುವೆ ಮಾತಿನ ಚಕಮಕಿಯೂ ನಡೆಯಿತು. ಓವರ್ ರಿಯಾಕ್ಟಿಂಗ್ ಯಾಕೆ ಎಂದು ನೀತೂರನ್ನು ಅಕುಲ್ ಕೆದಕಿದರು. ನೀತೂ ಹಾಗೂ ಅಕುಲ್ ನಡುವೆ ಒಂದು ಸಣ್ಣ ವಾಗ್ವಾದ ನಡೆಯಿತು. ನೀನ್ಯಾರು ನನಗೆ ಕೇಳಕ್ಕೆ ಎಂದು. ನನ್ನ ಜೊತೆಗೆ ಅವನ್ಯಾಕೆ ಲೇವಡಿಯಾಗಿ ಮಾತನಾಡುತ್ತಿದ್ದಾನೆ ಎಂದು ಸ್ವಲ್ಪ ಗರಂ ಆದರು ನೀತೂ.

ನನ್ನನ್ನು ಲೇವಡಿ ಮಾಡಲು ಅವನ್ಯಾರು?
ಇದಕ್ಕೆ ಅಕುಲ್ ಸ್ವಲ್ಪ ಬೇಸರವಾದಂತಿದ್ದರು. ಆದಿ ಹಾಗೂ ನೀತೂ ಇದೇ ವಿಚಾರವಾಗಿ ಚರ್ಚಿಸಿದರು. ಯಾರೇ ಆಗಲಿ ನನ್ನ ಬಗ್ಗೆ ಛೀಪ್ ಆಗಿ ಮಾತನಾಡಿದರೆ ನನಗೆ ಬೇಜಾರುತ್ತದೆ ಎಂದು ಅಕುಲ್ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಕುಲ್ ಲೇವಡಿ ಮಾಡಿ ಮಾತನಾಡಿದ್ದು ನನ್ನ ಬಗ್ಗೆ ಅವರಿಗೆ ಗೌರವ ಇಲ್ಲ ಎಂದು ನೀತೂ ಏನೇನೋ ವಾದಿಸಿದರು.

ಶಕೀಲಾ ಮಧ್ಯಸ್ಥಿಕೆಯಲ್ಲಿ ಒಂದಾದರು
ಒಟ್ಟಾರೆಯಾಗಿ ಸಣ್ಣಪುಟ್ಟ ವಿಚಾರಗಳಿಗೂ ನೀತೂ ಜಗಳ ತೆಗೆಯುತ್ತಿರುವುದು ಮನೆಯಲ್ಲಿ ಎಲ್ಲರ ಗಮನಕ್ಕೂ ಬರುತ್ತಿದೆ. ಇದೇ ವಿಚಾರವಾಗಿ ಮನೆಯಲ್ಲಿ ಎಲ್ಲ ಸದಸ್ಯರ ನಡುವೆ ಬಹಳ ಚರ್ಚೆಯೂ ನಡೆಯಿತು. ಬಳಿಕ ಶಕೀಲಾ ಅವರ ಮಧ್ಯಸ್ಥಿಕೆಯಲ್ಲಿ ನೀತೂ ಹಾಗೂ ಅಕುಲ್ ಅಪ್ಪಿಕೊಂಡು ಕಾಂಪ್ರಮೈಸ್ ಆದರು.

ಮೇಡಂ ಎಂದು ಕರೆಯುವಂತೆ ಶಕೀಲಾ ಆಜ್ಞೆ
ರೋಹಿತ್ ಬಗ್ಗೆ ಶಕೀಲಾ ಮಾತನಾಡುತ್ತಾ, ಸುದೀಪ್ ಅವರು ಎಲ್ಲರನ್ನೂ ಗೌರವದಿಂದ ಮಾತನಾಡುತ್ತಾರೆ, ಅದಕ್ಕೆ ಅವರು ಅಷ್ಟು ಎತ್ತರಕ್ಕೆ ಏರಿದ್ದಾರೆ. ಆದರೆ ರೋಹಿತ್ ನನ್ನನ್ನು ಹೆಸರಿಟ್ಟು ಕರೆಯುವುದು ಸರಿಯಿಲ್ಲ. ಇನ್ನು ಮುಂದೆ ಮೇಡಂ ಎಂದು ಕರೆಯಲು ಹೇಳುವುದಾಗಿ ನೀತೂ ಬಳಿ ಶಕೀಲಾ ಹೇಳಿದರು.

ಇಲ್ಲ ಡಾರ್ಲಿಂಗ್ ಅಂತೀನಿ ಎಂದ ರೋಹಿತ್
ಮೂರನೆ ದಿನದ ಬೆಳಗ್ಗೆ ಸಾರಥಿ ಚಿತ್ರದ ಹಾಡಿನೊಂದಿಗೆ ದಿನದ ಆರಂಭವಾಯಿತು. ಟಾಸ್ಕ್ ನಲ್ಲಿ ಭಾಗಿಯಾಗಿದ್ದ ರೋಹಿತ್ ಜೊತೆಗೆ ಶಕೀಲಾ ಮಾತನಾಡುತ್ತಾ, ನಾನು ನಿನಗಿಂತಲೂ ಹಿರಿಯಳು ಹೆಸರಿಟ್ಟು ಕರೆಯಬೇಡ. ಹೊರಗಡೆ ತಮ್ಮನ್ನು ಯಾರೂ ಹಾಗೆ ಹೆಸರಿಟ್ಟು ಕರೆಯುವ ಧೈರ್ಯ ಮಾಡಲ್ಲ ಎನ್ನುತ್ತಾರೆ. ಇದಕ್ಕೆ ರೋಹಿತ್ ಹೋಗಲಿ ನಿಮ್ಮನ್ನು ಡಾರ್ಲಿಂಗ್ ಎಂದು ಕರೆಯಲೆ ಎಂದಾಗ ಅದಕ್ಕೆ ಶಕೀಲಾ ನಗುತ್ತಾ ಒಪ್ಪಿಗೆ ಸೂಚಿಸುತ್ತಾರೆ.

ನೀತೂ, ಆದಿ ಲೋಕೇಶ್ ಹತ್ತಿರ ಹತ್ತಿರ
ಇನ್ನೊಂದು ಕಡೆ ನೀತೂ ಹಾಗೂ ಆದಿ ಲೋಕೇಶ್ ಮಾತನಾಡುತ್ತಾ, ನೀವೂ ಈಗ ತುಂಬಾ ಮೆಚ್ಯೂರ್ ಆಗಿದ್ದೀರಾ. ಮುಂಚೆ ನೀವು ಹೀಗಿರಲಿಲ್ಲ. ಆಗ ನಾನೂ ಅಷ್ಟೇ ಬಿಡು ಮೆಚ್ಯೂರ್ ಇರಲಿಲ್ಲ. ಈಗ ತುಂಬಾ ಬದಲಾಗಿದ್ದಾರಾ ಎಂದು ಸೈಲೆಂಟ್ ಆಗಿರುವ ಆದಿಯನ್ನು ಸ್ವಲ್ಪ ಗೆಲುವಾಗಿಸಿದರು.

ಲಯ ಕೋಕಿಲಾ ಕೂದಲು ಕೊಂಕಿಸುವ ಪ್ರಯತ್ನ
ಲಯ ಕೋಕಿಲಾ ಅವರ ಗುಂಗುರು ಕೂದಲನ್ನು ನೆಟ್ಟಗೆ ಮಾಡಲು ನೀತೂ ಹಾಗೂ ದೀಪಿಕಾ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ನಗಾಡುತ್ತಿದ್ದ ದೀಪಿಕಾ ಕುರಿತು ಸಣ್ಣ ನಾಯಿ ಮೇಲೆ ಯಾವುದಾದರೂ ಗಾಡಿ ಹೋದರೆ ಹೇಗಿರುತ್ತದೋ ಆ ರೀತಿ ನಗುತ್ತಾಳೆ ಎಂದು ಸೃಜನ್ ಹಂಗಿಸಿದರು.

ಐದು ಅಡಿ ಎಂಟು ಅಂಗುಲದ ಆಪತ್ತು
ಐದು ಅಡಿ ಎಂಟು ಅಂಗುಲದ ಆಪತ್ತು ನಿನಗೆ ಕಾದಿದೆ. ಅದರ ಹೆಸರು ನೀತೂ ಎಂದು ಲಯ ಕೋಕಿಲ ಅವರಿಗೆ ಡವ್ವಾನಂದ ಸ್ವಾಮಿ ಅವತಾರದಲ್ಲಿದ್ದ ಸೃಜನ್ ಲೋಕೇಶ್ ತಮಾಷೆಯಾಗಿ ಹೇಳಿದರು. ಅಲ್ಲೇ ಇದ್ದ ನೀತೂ ಈ ಮಾತುಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ.

ಶಕೀಲಾ ಕಳಪೆ ಪ್ರದರ್ಶನಕ್ಕೆ ಮಾರ್ಕ್ಸ್ ಕಟ್
ಮೊದಲ ಟಾಸ್ಕನ್ನು ಗೆದ್ದದ್ದಕ್ಕೆ ಬಿಗ್ ಬಾಸ್ ಎಲ್ಲರನ್ನೂ ಅಭಿನಂದಿಸಿದರು. ಈ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರು ಕಳಪೆ ಪ್ರದರ್ಶನ ನೀಡಿದವರು ಯಾರು ಎಂಬುದನ್ನು ನೀವೇ ನಿರ್ಧರಿಸಿ ಎಂದು ಹೇಳಿದರು. ಅದಕ್ಕೆ ಮನೆಯರು ಆದಿಯನ್ನು ಉತ್ತಮ ಎಂದೂ ಶಕೀಲಾರನ್ನು ಕಳಪೆ ಎಂದು ನಿರ್ಧರಿಸಿದರು.

ಮನೆಯಲ್ಲಿ ಅಸಮಾಧಾನದ ಹೊಗೆ
ನನ್ನನ್ನು ಯಾರೂ ಕರೆಯಲಿಲ್ಲ, ಹಾಗಾಗಿ ನಾನು ಹೆಚ್ಚಾಗಿ ಟಾಸ್ಕ್ ನಲ್ಲಿ ಭಾಗಿಯಾಗಲಿಲ್ಲ. ಇಷ್ಟಕ್ಕೇ ನನ್ನನ್ನು ಕಳಪೆ ಪ್ರದರ್ಶನ ನೀಡಿದ ಸದಸ್ಯ ಎಂದು ಆಯ್ಕೆ ಮಾಡಿದ್ದು ಸರಿಯಿಲ್ಲ ಎಂದು ಶಕೀಲಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ನೀತೂಗೆ ಯಾಕೆ ಶಿಕ್ಷೆ ಇಲ್ಲ ಎಂದ ರೋಹಿತ್
ನೀತೂ ಮಾತ್ರ ಜೋರಾಗಿ ಮಾತನಾಡಿಕೊಂಡು ಓಡಾಡುತ್ತಿದ್ದಾರೆ. ಅವರು ಏನೂ ಕೆಲಸ ಮಾಡದಿದ್ದರು ಯಾರೂ ಅವರನ್ನು ಕೇಳುತ್ತಿಲ್ಲ. ಹೆಚ್ಚಾಗಿ ಬಾತ್ ರೂಮಿನಲ್ಲೇ ಕಳೆಯುತ್ತಿದ್ದಾರೆ ಎಂದು ಶಕೀಲಾ ಹೇಳಿದರು. ಇದಕ್ಕೆ ಹೌದು ಎಂಬಂತೆ ರೋಹಿತ್ ಸಹ ಒಪ್ಪಿಗೆ ಸೂಚಿಸಿದರು.

ಲಗ್ಜಿರಿ ಟಾಸ್ಕ್ ನಿಂದ ವಂಚಿತರಾದ ಶಕೀಲಾ
ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಿದ್ದಕ್ಕೆ 800 ಪಾಯಿಂಟ್ ಕಟ್ ಮಾಡಿದರು. ಲಗ್ಜುರಿ ಟಾಸ್ಕ್ ನಲ್ಲಿ ಒಟ್ಟು 2,400 ಪಾಯಿಂಟ್ ನಲ್ಲಿ ಅವರಿಗೆ ಸಿಕ್ಕಿದ್ದು 1600 ಪಾಯಿಂಟ್ ಗಳು. ಕಳಪೆ ಪ್ರದರ್ಶನ ನೀಡಿದ ಶಕೀಲಾ ಅವರಿಗೆ ಲಗ್ಜುರಿ ಟಾಸ್ಕ್ ನಲ್ಲಿ ಸಿಕ್ಕಿದ್ದು ಸೊನ್ನೆ.

ಮಧ್ಯರಾತ್ರಿ ನೀತೂ, ದೀಪಿಕಾ ಗುಸುಗುಸು
ಮಧ್ಯರಾತ್ರಿಯಲ್ಲಿ ನೀತೂ ಮತ್ತು ದೀಪಿಕಾ ಬಾತ್ ರೂಂ ಬಳಿ ಚರ್ಚೆಸುತ್ತಿದ್ದರು. ಅಕುಲ್ ಹೊಟ್ಟೆಯುರಿಯಲ್ಲಿ ಮಾತನಾಡಿದ, ನನಗೆ ನಂಬಿಕೆನೇ ಬರುತ್ತಿಲ್ಲ ಎಂದು ಒಬ್ಬರಿಗೊಬ್ಬರು ಚರ್ಚಿಸಿದರು. ಅಲ್ಲಿಗೆ ಮೂರನೇ ದಿನದ ಆಟ ಮುಗಿದಿತ್ತು. ಅಸಲಿ ಆಟ ಇನ್ನಷ್ಟೇ ಶುರುವಾಗಬೇಕಿದೆ. ಮನೆಯಲ್ಲಿ ಒಬ್ಬರ ನಡುವೆ ಒಬ್ಬರ ಅಂತರ ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತಿದೆ.


Click it and Unblock the Notifications











