'ಮ್ಯಾಚ್ ಫಿಕ್ಸಿಂಗ್' ಮಾಡಿಕೊಂಡು ಆಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!
ತಮ್ಮ ತಂಡದ ಮೊಟ್ಟೆಗಳನ್ನು ಕಾಪಾಡಿಕೊಳ್ಳುವ ಟಾಸ್ಕ್ ನಲ್ಲಿ, ತಾವು ಹೇಳಿದ ಹಾಗೆ ರಿಯಾಝ್ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ರಿಯಾಝ್ ಮೇಲೆ ದಯಾಳ್ ಪದ್ಮನಾಭನ್ ಕೂಗಾಡಿದರು. ಸಾಲದಕ್ಕೆ, ನೈತಿಕತೆ ಬಗ್ಗೆ ಮಾತನಾಡಿದರು.
ನೈತಿಕತೆ ಬಗ್ಗೆ ಮಾತನಾಡಿದ ದಯಾಳ್ ಪದ್ಮನಾಭನ್, ಟಾಸ್ಕ್ ನಲ್ಲಿ 'ಬಿಗ್ ಬಾಸ್' ಕೊಟ್ಟ ನಿಯಮಗಳನ್ನ ಶಿಸ್ತು ಬದ್ಧವಾಗಿ ಪಾಲಿಸಿದ್ದಾರಾ.?
ತಮ್ಮ ಅನುಕೂಲಕ್ಕೆ ತಕ್ಕಂತೆ 'ಬಿಗ್ ಬಾಸ್' ಕೊಟ್ಟ ನಿಯಮಗಳನ್ನು ಬದಲಾಯಿಸಿಕೊಂಡು.. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು.. ಎಲ್ಲ ಗಲಾಟೆಗಳಿಗೆ ಕಾರಣಕರ್ತರಾದ ಉಭಯ ತಂಡಗಳ ಕ್ಯಾಪ್ಟನ್ ದಯಾಳ್ ಪದ್ಮನಾಭನ್ ಹಾಗೂ ಶ್ರುತಿ ಪ್ರಕಾಶ್ ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ಮಾತಲ್ಲೇ ಪೆಟ್ಟು ಕೊಟ್ಟರು. ಮುಂದೆ ಓದಿರಿ...

ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್
''ಬಿಗ್ ಬಾಸ್' ಎನ್ನುವ ಒಂದು ರಿಯಾಲಿಟಿ ಶೋಗೆ ಎಲ್ಲರೂ ಬೇರೆಯದ್ದೇ ಅರ್ಥ ಕೊಟ್ಟಿದ್ದೀರಾ. 'ನನಗೆ ಬಿಗ್ ಬಾಸ್ ಮನೆಯಲ್ಲಿ ಮೋಸ ಆಗುತ್ತಿದೆ'. 'ಮನೆ ಇಬ್ಭಾಗ ಮಾಡಲು ಬಿಗ್ ಬಾಸ್ ಟಾಸ್ಕ್ ಕೊಡುತ್ತಾರೆ'. 'ಬೇರೆ ಏನೋ ಹೇಳಿ ಕರ್ಕೊಂಡು ಬಂದು, ನನ್ನನ್ನ ಇಲ್ಲಿ ಬಿಗ್ ಬಾಸ್ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ'.... ಇಂತಹ ಮಾತುಗಳು ತುಂಬಾ ಕೇಳಿಸ್ತು. ಈ ಬಗ್ಗೆ ಎಲ್ಲರಿಗೂ ನಾನು ಹೇಳುವುದು ಏನಂದ್ರೆ, ''ತಾವು ತಾವಾಗಿ ಉಳಿದುಕೊಳ್ಳಬೇಕು ಅನ್ನೋದನ್ನ ಮಾತ್ರ ಬಿಗ್ ಬಾಸ್ ಅಪೇಕ್ಷೆ ಪಡುತ್ತಾರೆ. ತಾವು ತಾವಾಗಿ ಇಲ್ಲದೆ, ಕೂಗಾಡಿ, ಕಂಟೆಂಟ್ ಕೊಡಲಿ ಅಂತ ಯಾರೂ ಕಾಯುತ್ತಿಲ್ಲ'' ಎಂದು 'ಬಿಗ್ ಬಾಸ್' ಬಗ್ಗೆ ಆರೋಪ ಮಾಡಿದವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು.

ನಿಯಮಗಳನ್ನು ಬದಲಾಯಿಸಿಕೊಂಡಿದ್ದು ಯಾಕೆ.?
''ಬಿಗ್ ಬಾಸ್' ಕೊಟ್ಟಿರುವ ಟಾಸ್ಕ್, ಅದರಲ್ಲಿ ನೀಡಿರುವ ನಿಯಮಗಳನ್ನು ಮೊದಲು ಎಲ್ಲರೂ ಸರಿಯಾಗಿ ಪಾಲಿಸಬೇಕು. ಆಟದ ನಿಯಮಗಳನ್ನು ತಾವು ತಾವೇ ಮೀಟಿಂಗ್ ಮಾಡಿ ಯಾಕೆ ಬದಲಾಯಿಸಿಕೊಂಡ್ರಿ.?'' ಎಂದು ಉಭಯ ತಂಡಗಳ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಹಾಗೂ ದಯಾಳ್ ಪದ್ಮನಾಭನ್ ಗೆ ಸುದೀಪ್ ಪ್ರಶ್ನೆ ಮಾಡಿದರು.

ಶ್ರುತಿ ಪ್ರಕಾಶ್ ಗೆ ಸುದೀಪ್ ಪ್ರಶ್ನೆ
''ಆಟಕ್ಕೆ ಬಿಗ್ ಬಾಸ್ ಒಂದು ನಿಯಮ ಕೊಟ್ಟಿದ್ರು. ತಾವು ತಮ್ಮ ನಿರ್ಧಾರಗಳನ್ನ ದಯಾಳ್ ಅವರಿಂದ ಪ್ರಭಾವಿತರಾಗಿ ತೆಗೆದುಕೊಳ್ಳುತ್ತಿದ್ರಿ ಅನ್ನೋದು ವೀಕ್ಷಕರ ಅಭಿಪ್ರಾಯ. ತಾವು-ದಯಾಳ್ ಕೂತು ಆಟದ ನಿಯಮಗಳನ್ನೇ ಬದಲಾಯಿಸಿದ್ರಿ'' ಎಂದು ಶ್ರುತಿ ಪ್ರಕಾಶ್ ಗೆ ಸುದೀಪ್ ನೇರವಾಗಿ ಪ್ರಶ್ನಿಸಿದರು.

ಉತ್ತರ ಕೊಟ್ಟ ಶ್ರುತಿ ಪ್ರಕಾಶ್
''ನಾನು ದಯಾಳ್ ರವರಿಂದ ಪ್ರಭಾವಿತರಾಗಿಲ್ಲ. ದಯಾಳ್ ಜೊತೆ ಕೂತು ಮಾತನಾಡಿ, ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಿರ್ಧಾರ ಕೈಗೊಳ್ಳುತ್ತಿದ್ದೆ'' ಎಂದು ಶ್ರುತಿ ಪ್ರಕಾಶ್ ಉತ್ತರಿಸಿದರು.

ಇದು ಮ್ಯಾಚ್ ಫಿಕ್ಸಿಂಗ್.!
''ಮೊಟ್ಟೆಯನ್ನ ಎದುರಾಳಿ ತಂಡದಿಂದ ಕಾಪಾಡಿಕೊಳ್ಳುವುದು ಟಾಸ್ಕ್ ಆಗಿತ್ತು. ಇಪ್ಪತ್ತನಾಲ್ಕು ಗಂಟೆಗಳ ಕಾಲ ನಡೆಯಬೇಕಿದ್ದ ಟಾಸ್ಕ್ ನ ತಾವಿಬ್ಬರೂ ಮಾತನಾಡಿಕೊಂಡು, ರಾತ್ರಿ ಟಾಸ್ಕ್ ಮಾಡದೆ, ನಿದ್ದೆ ಮಾಡಿ, ಸ್ಟಾರ್ಟ್ ಅಂದಾಗ ಆಟ ಶುರು ಮಾಡಿ, ಸ್ಟಾಪ್ ಅಂದಾಗ ಆಟ ನಿಲ್ಲಿಸುವುದು ನಿಯಮ ಅಲ್ಲ. ಇದು ಮ್ಯಾಚ್ ಫಿಕ್ಸಿಂಗ್'' ಎಂದರು ಸುದೀಪ್.

ಗಲಾಟೆ ಆಗಲು ಕ್ಯಾಪ್ಟನ್ ಗಳೇ ಕಾರಣ.!
''ಕೆಲವರು ಬಿಗ್ ಬಾಸ್ ಕೊಟ್ಟ ನಿಯಮಗಳನ್ನು ಸರಿಯಾಗಿ ಪಾಲಿಸಿದರು. ಆದ್ರೆ, ನೀವು ಹಾಕಿಕೊಂಡ ನಿಯಮಗಳಿಂದಲೇ ದೊಡ್ಡ ಗಲಾಟೆ ಆರಂಭ ಆಯ್ತು. ನಿಯಮಗಳನ್ನು ಸರಿಯಾಗಿ ಪಾಲಿಸಿದವರೇ ನಿಮ್ಮ ಕೆಂಗಣ್ಣಿಗೆ ಗುರಿಯಾಗಿದ್ದು ಮಾತ್ರ ವಿಪರ್ಯಾಸ'' ಎಂದು ಶ್ರುತಿ ಪ್ರಕಾಶ್ ಹಾಗೂ ದಯಾಳ್ ಪದ್ಮನಾಭನ್ ಮಾಡಿದ ತಪ್ಪನ್ನ ಸುದೀಪ್ ಬೆಟ್ಟು ಮಾಡಿ ತೋರಿಸಿದರು.

ಉತ್ತರ ನಿರೀಕ್ಷಿಸದ ಸುದೀಪ್
ಶ್ರುತಿ ಪ್ರಕಾಶ್ ಹಾಗೂ ದಯಾಳ್ ಪದ್ಮನಾಭನ್ ಮಾಡಿದ ತಪ್ಪನ್ನ ಸುದೀಪ್ ಹೇಳಿದರೇ ಹೊರತು ಅವರಿಂದ ಉತ್ತರವನ್ನು ಸುದೀಪ್ ನಿರೀಕ್ಷೆ ಮಾಡಲಿಲ್ಲ.

ಸಿಹಿ ಕಹಿ ಚಂದ್ರು ಏನಂತಾರೆ.?
''ನಿಯಮಗಳ ಪ್ರಕಾರ ಕೆಲವರು ಆಡಿದರು. ಆದರೂ ಅವರೆಲ್ಲ ಬೈಯಿಸಿಕೊಂಡರು. ವಿಪರ್ಯಾಸ ಅಂದ್ರೆ, ಬೈಯುವವರ ಜಾಗದಲ್ಲಿ ನೀವಿದ್ರಿ, ಬೈಯಿಸಿಕೊಂಡ ಜಾಗದಲ್ಲಿ ಅವರು ಇದ್ದರು'' ಎಂದು ಸುದೀಪ್ ಕೇಳಿದಾಗ, ''ನೈತಿಕತೆ ವಿಷಯ ಬಂದಾಗ ನಾನು ಹೆಚ್ಚು ಮಾತನಾಡಲಿಲ್ಲ'' ಎಂದಷ್ಟೇ ಸಿಹಿ ಕಹಿ ಚಂದ್ರು ಹೇಳಿದರು.

ದಯಾಳ್ ಗೆ ಸುದೀಪ್ ಖಡಕ್ ಪ್ರಶ್ನೆ.!
''ತಾವು ಹೇಳಿದ ಮಾತಿನಂತೆ ರಿಯಾಝ್ ನಡೆದುಕೊಳ್ಳಲಿಲ್ಲ ಅಂತ ನಿಮಗೆ ಕೆಟ್ಟ ಕೋಪ ಬರುತ್ತೆ. ನೈತಿಕತೆ ಬಗ್ಗೆ ಮಾತನಾಡುತ್ತೀರಿ. ಆದ್ರೆ, 'ಬಿಗ್ ಬಾಸ್' ಕೊಟ್ಟ ನಿಯಮಗಳನ್ನೇ ಪಾಲನೆ ಮಾಡದೆ, ಸ್ಟಾರ್ಟ್ ಅಂದಾಗ ಶುರು ಮಾಡುವುದು, ಸ್ಟಾಪ್ ಅಂದಾಗ ನಿಲ್ಲಿಸಿ ಬಿಡುವುದು ನೈತಿಕತೆಯೇ.?'' ಎಂದು ದಯಾಳ್ ಪದ್ಮನಾಭನ್ ಗೆ ಸುದೀಪ್ ಪ್ರಶ್ನೆ ಮಾಡಿದರು.

ನಿಯಮ ಅರ್ಥ ಮಾಡಿಕೊಳ್ಳಲಿಲ್ವಂತೆ.!
''ನಿಯಮಗಳನ್ನು ನಾನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಇದನ್ನ ನಾನು ಒಪ್ಪಿಕೊಳ್ಳುತ್ತೇನೆ'' ಎಂದರು ದಯಾಳ್ ಪದ್ಮನಾಭನ್.

ಚಂದನ್ ಶೆಟ್ಟಿಗೆ ಶ್ಲಾಘನೆ
''ಮೊಟ್ಟೆಯ ಟಾಸ್ಕ್ ನಲ್ಲಿ ಚಂದನ್ ಶೆಟ್ಟಿ ತುಂಬಾ ಚೆನ್ನಾಗಿ ಆಡಿದರು. ಆಟವನ್ನ ಕರೆಕ್ಟಾಗಿ ಅರ್ಥ ಮಾಡಿಕೊಂಡು ಚೆನ್ನಾಗಿ ಆಡಿದರು'' ಎಂದು ಚಂದನ್ ಶೆಟ್ಟಿ ಆಟದ ವೈಖರಿ ಬಗ್ಗೆ ಇದೇ ಸಮಯದಲ್ಲಿ ಸುದೀಪ್ ಶ್ಲಾಘಿಸಿದರು.


Click it and Unblock the Notifications











