ಆಚಾರ್ಯರ ಪ್ರತಿಕೃತಿ ದಹನ: 'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಸಮೀರ್
Recommended Video

'ಬಿಗ್ ಬಾಸ್' ಎಂಬ ರಿಯಾಲಿಟಿ ಶೋ ಗೆಲ್ಲುವ ಉದ್ದೇಶದಿಂದ ಕೆಲ ಸಂಪ್ರದಾಯಗಳನ್ನು ಧಿಕ್ಕರಿಸಿದ, ಚಾಲಾಕಿತನಕ್ಕಿಂತ ಒಳ್ಳೆಯತನದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದ, ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.
14 ವಾರಗಳ ನಂತರ ಅಂತಿಮ ಹಂತದಲ್ಲಿ ಉಳಿದಿದ್ದ ಏಳು ಜನ ನೇರವಾಗಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಕಳೆದ ವಾರ 'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಅವರು ಹೊರಬಿದ್ದಿದ್ದರೆ, 15ನೇ ವಾರದ ಆರಂಭದಲ್ಲಿಯೇ ಸಮೀರ್ ಆಚಾರ್ಯ ಅವರು ಸೂಟ್ ಕೇಸ್ ಹಿಡಿದು ಹೊರನಡೆದಿದ್ದಾರೆ.
ಸಮೀರ್ ಆಚಾರ್ಯ ಅವರಿಂತ ಹೆಚ್ಚು ಮತ ಪಡೆದಿರುವ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ಅಂತಿಮ ಸುತ್ತು (ಟಾಪ್ 5) ಪ್ರವೇಶಿಸಿದ್ದಾರೆ. ಇಷ್ಟು ದಿನ ಸ್ಪರ್ಧಿಗಳನ್ನು ಉಳಿಸಲು ಜನರು ಮತ ಹಾಕುತ್ತಿದ್ದರೆ, ಇನ್ನು ಗೆಲ್ಲಿಸಲು ಮತ ಹಾಕಬೇಕಿದೆ.

ಈ ಬಾರಿ ವಿಶಿಷ್ಟವಾಗಿ ಎಲಿಮಿನೇಷನ್ ಪ್ರಕ್ರಿಯೆಯನ್ನು ಆಯೋಜಿಸಲಾಗಿತ್ತು. ವೀಕ್ಷಕರ ಎಸ್.ಎಂ.ಎಸ್ ಆಧಾರದ ಮೇಲೆ ಮೊದಲು ಜಯರಾಂ ಕಾರ್ತಿಕ್ ಹಾಗೂ ಚಂದನ್ ಶೆಟ್ಟಿ ಲಿವಿಂಗ್ ಏರಿಯಾದಲ್ಲಿ ಸೇಫ್ ಆದರು.
ನಂತರ ಶ್ರುತಿ ಪ್ರಕಾಶ್, ದಿವಾಕರ್, ನಿವೇದಿತಾ ಗೌಡ ಹಾಗೂ ಸಮೀರ್ ಆಚಾರ್ಯ ಅವರನ್ನ ಗಾರ್ಡನ್ ಏರಿಯಾಗೆ ಬರಲು 'ಬಿಗ್ ಬಾಸ್' ಆದೇಶಿಸಿದರು. ಅಲ್ಲಿ ಬಝರ್ ಆದ ಬಳಿಕ ಯಾವ ಸ್ಪರ್ಧಿಯ ಪ್ರತಿಕೃತಿ ದಹನವಾಗುತ್ತೋ, ಅವರು ಔಟ್ ಆದಂತೆ.
ಸ್ಪರ್ಧಿಗಳು ಬಝರ್ ಒತ್ತುತ್ತಿದ್ದಂತೆ ಸಮೀರ್ ಆಚಾರ್ಯ ಅವರ ಪ್ರತಿಕೃತಿ ದಹನ ಆಯ್ತು. 'ಬಿಗ್ ಬಾಸ್' ಮನೆಯಲ್ಲಿ ಸಮೀರ್ ಆಚಾರ್ಯ ಆಟ ಅಂತ್ಯವಾಯ್ತು.
ಸದ್ಯ ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ಚಂದನ್ ಶೆಟ್ಟಿ, ನಿವೇದಿತಾ ಗೌಡ ಹಾಗೂ ದಿವಾಕರ್ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದಾರೆ. ಇವರ ಪೈಕಿ ಯಾರಿಗೆ 'ಬಿಗ್ ಬಾಸ್' ಕಿರೀಟ ದೊರೆಯುತ್ತದೆ ಎಂಬುದು ನಿಮ್ಮ ಅಮೂಲ್ಯವಾದ ಮತಗಳ ಮೇಲೆ ನಿರ್ಧರವಾಗಲಿದೆ. ಯೋಚಿಸಿ, ಮತ ಹಾಕಿ.


Click it and Unblock the Notifications











