ಬಿಗ್ಬಾಸ್: ಸ್ಟಾರ್ ನಟ ಕೊಟ್ಟಿದ್ದ ತೊಂದರೆ ನೆನಪಿಸಿಕೊಂಡ ನಟಿ ನಿಧಿ ಸುಬ್ಬಯ್ಯ
ನಟಿ ನಿಧಿ ಸುಬ್ಬಯ್ಯ ಬಿಗ್ಬಾಸ್ ಮನೆಗೆ ಹೋಗಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಮೊದಲ ದಿನ ಅಷ್ಟೇನು ಒಳ್ಳೆಯ ಸಮಯ ಅವರದ್ದಾಗಲಿಲ್ಲ.
ಮೊದಲ ದಿನವೇ ನಾಮಿನೇಟ್ ಆಗಿ ಮನೆಯಿಂದ ಹೊರಬರುವ ಆತಂಕದಲ್ಲಿದ್ದಾರೆ. ನಿಧಿ ಅವರನ್ನು ನಾಮಿನೇಟ್ ಮಾಡಿದ ಹೆಚ್ಚು ಮಂದಿ ನೀಡಿದ ಕಾರಣ, ಅವರೊಟ್ಟಿಗೆ ಇನ್ನೂ ಸರಿಯಾಗಿ ಬೆರೆಯಲು ಸಾಧ್ಯವಾಗಿಲ್ಲ ಎಂಬುದು.
ಇದೀಗ ಬಿಡುಗಡೆ ಆಗಿರುವ ಬಿಗ್ಬಾಸ್ ಪ್ರೋಮೋನಲ್ಲಿ ನಿಧಿ ಸುಬ್ಬಯ್ಯ ಎಲ್ಲ ಸ್ಪರ್ಧಿಗಳೊಂದಿಗೆ ಚೆನ್ನಾಗಿ ಮಾತನಾಡುತ್ತಾ, ನಗುತ್ತಾ, ಕತೆ ಹೇಳುತ್ತಿರುವ ದೃಶ್ಯಗಳಿವೆ. ರಾಕಿಂಗ್ ಸ್ಟಾರ್ ಯಶ್ ಗೆ ಸಂಬಂಧಿಸಿದ ಕತೆಯೊಂದನ್ನು ಬಿಗ್ಬಾಸ್ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದಾರೆ ನಿಧಿ ಸುಬ್ಬಯ್ಯ.

ನಿಧಿ ಮನೆ ಮೇಲೆ ಪಟಾಕಿ ಸರ ಎಸೆದಿದ್ದರಂತೆ ಕೆಲವರು
ನಿಧಿ ಅವರು ಮೈಸೂರಿನಲ್ಲಿ ಅವರ ತಾತನೊಂದಿಗೆ ವಾಸವಿದ್ದರಂತೆ. ತಾತನ ರೂಂ ಗ್ರೌಂಡ್ಫ್ಲೋರ್ನಲ್ಲಿದ್ದರೆ, ನಿಧಿಯ ರೂಮು ಮೇಲೆ ಇತ್ತಂತೆ. ಒಂದು ರಾತ್ರಿ ಇದ್ದಕ್ಕಿದ್ದಂತೆ ಯಾರೋ ನಿಧಿಯ ಮನೆ ಗೆ ಪಟಾಕಿ ಎಸೆದು ಹೋದರಂತೆ.

ಪೊಲೀಸರನ್ನು ಕರೆಸಿದ್ದರಂತೆ
ನಿಧಿ ಹಾಗೂ ಅವರ ತಾತ ಬಹಳ ಗಾಬರಿಯಿಂದ ಹೊರಬಂದರೆ ನಾಲ್ಕು ಬೈಕ್ಗಳು ಹೋಗಿದ್ದಷ್ಟೆ ಕಾಣಿಸಿದುವಂತೆ. ನಿಧಿ ಅವರು ಪೊಲೀಸರನ್ನೆಲ್ಲಾ ಕರೆಸಿ ವಿಷಯ ತಿಳಿಸಿದ್ದರಂತೆ. ಈ ಘಟನೆ ಆದ ಬಳಿಕ ನಿಧಿ ಸಿನಿಮಾ ಉದ್ಯಮಕ್ಕೆ ಬಂದಿದ್ದಾರೆ. ಒಮ್ಮೆ ಮೈಸೂರಿನಲ್ಲಿ ಪೊಲೀಸರಿಗಾಗಿ ವಿಶೇಷ ಶೋ ಮಾಡುತ್ತಿದ್ದಾಗ. ನಟರೊಬ್ಬರು ನಿಧಿ ಬಳಿ ಬಂದು, ನಿಮ್ಮಲ್ಲಿ ಕ್ಷಮೆ ಕೇಳಬೇಕು, ಒಮ್ಮೆ ನಿಮ್ಮ ಮನೆಗೆ ಪಟಾಕಿ ಎಸೆದಿದ್ದು ನೆನಪಿದಿಯೇ ಎಂದು ಕೇಳಿದರಂತೆ.

ಮನೆಯ ಕರ್ಟನ್ ಎಲ್ಲ ಸುಟ್ಟು ಹೋಗಿತ್ತಂತೆ
ನಿಧಿ, 'ಹೌದು, ಅಂದು ನಮ್ಮ ಮನೆಯ ಕರ್ಟನ್ ಎಲ್ಲ ಸುಟ್ಟು ಹೋಗಿತ್ತು' ಎಂದರಂತೆ. ಹೌದು, ಆ ಪಟಾಕಿ ಎಸೆದಿದ್ದುದು ನಾನೇ' ಎಂದರಂತೆ ಆ ನಟ. ಹೀಗೆ ನಿಧಿ ಮನೆಗೆ ಪಟಾಕಿ ಎಸೆದ ನಟ ಮತ್ಯಾರೂ ಅಲ್ಲ ಈಗ ಅಭಿಮಾನಿ ಸಾಗರವನ್ನೇ ಸಂಪಾದಿಸಿರುವ ರಾಕಿಂಗ್ ಸ್ಟಾರ್ ಯಶ್.

ನಕ್ಕು-ನಕ್ಕು ಸುಸ್ತಾದ ಸ್ಪರ್ಧಿಗಳು
ಈ ವಿಷಯವನ್ನು ನಿಧಿ ಸುಬ್ಬಯ್ಯ ಬಿಗ್ಬಾಸ್ ಸ್ಪರ್ಧಿಗಳ ಮುಂದೆ ಹೇಳಿ ನಕ್ಕಿದ್ದಾರೆ. ನಿಧಿ ಹೇಳಿದ ವಿಷಯ ಕೇಳಿ ಬಿಗ್ಬಾಸ್ ಮನೆಯಲ್ಲಿ ಎಲ್ಲರೂ ಬಿದ್ದು-ಬಿದ್ದು ನಕ್ಕಿದ್ದಾರೆ. ಕೆಲವರು ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ. ಯಶ್ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಸಾಕಷ್ಟು ತುಂಟಾಟಗಳನ್ನು ಮಾಡಿದ್ದಾರೆ ಎಂಬುದು ನಿಧಿಯ ಕತೆಯಿಂದ ಖಾತ್ರಿಯಾಗಿದೆ.


Click it and Unblock the Notifications











