45 ವರ್ಷಗಳಿಂದ ಇದ್ದ ದುಶ್ಚಟವನ್ನು ಬಿಗ್ಬಾಸ್ ಮನೆಯಲ್ಲಿ ಬಿಟ್ಟ ಶಂಕರ್ ಅಶ್ವತ್ಥ್
ಕನ್ನಡದ ಮೇರು ನಟ ಕೆಎಸ್ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್ ಅವರು ಬಿಗ್ಬಾಸ್ ಎಂಟನೇ ಸೀಸನ್ನಲ್ಲಿ ಸ್ಪರ್ಧಿಯಾಗಿ ಮನೆಯಲ್ಲಿದ್ದಾರೆ.
Recommended Video
ಬಿಗ್ಬಾಸ್ ಮನೆಯ ಅತ್ಯಂತ ಹಿರಿಯ ಸದಸ್ಯರಾಗಿರುವ ಶಂಕರ್ ಅಶ್ವತ್ಥ್ ಎಲ್ಲ ಟಾಸ್ಕ್ಗಳಲ್ಲಿ ತಮ್ಮ ಶಕ್ತ್ಯಾನುಸಾರವಾಗಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಅನುಭವಿ ಮಾತುಗಳಿಂದ ಇತರ ಸ್ಪರ್ಧಿಗಳಿಗೆ ಬುದ್ಧಿವಾದಗಳನ್ನು ಹೇಳುತ್ತಾ ಮನೆಯಲ್ಲಿ ಹೊಂದಿಕೊಂಡು ಹೋಗುತ್ತಿದ್ದಾರೆ.
ಬಿಗ್ಬಾಸ್ ಸೀಸನ್ 8 ರ ಮೊದಲ ವೀಕೆಂಡ್ ಎಪಿಸೋಡ್ ನಿನ್ನೆ ಶನಿವಾರ ಪ್ರಸಾರವಾಯ್ತು. ಸುದೀಪ್ ಅವರು ನಡೆಸಿಕೊಟ್ಟ ಮೊದಲ 'ಪಂಚಾಯಿತಿ'ಯಲ್ಲಿ ಮನೆಯ ಸದಸ್ಯರನ್ನು ಅವರವರ ಅನುಭವಗಳನ್ನು ಕೇಳಿದರು ಸುದೀಪ್.

45 ವರ್ಷದಿಂದ ಇದ್ದ ದುಶ್ಚಟ ಬಿಟ್ಟೆ: ಶಂಕರ್
ಈ ಸಮಯ ಮಾತನಾಡಿದ ಶಂಕರ್ ಅಶ್ವತ್ಥ್, 'ನಾನು ಈ ಮನೆಯಲ್ಲಿ ಬಹಳ ಆರಾಮವಾಗಿದ್ದೇನೆ. ಕೆಲವರು ಹೇಳಿದ್ದರು, ಬಿಗ್ಬಾಸ್ ಮನೆಗೆ ಹೋದರೆ ಒಳ್ಳೆಯದನ್ನು ಕಲಿಯುತ್ತೀಯ, ಕೆಟ್ಟದನ್ನೂ ಕಲಿಯುತ್ತೀಯ ಎಂದು. ಕಳೆದ 45 ವರ್ಷಗಳಿಂದಲೂ ನನಗೆ ಸಿಗರೇಟು ಸೇದುವ ಅಭ್ಯಾಸವಿತ್ತು. ಇದು ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಆದರೆ ಕಳೆದ ಎರಡು ವಾರದಿಂದಲೂ ನಾನು ಸಿಗರೇಟು ಸೇದಿಲ್ಲ. ಇದರ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ' ಎಂದು ಖುಷಿಯಾಗಿ ಹೇಳಿಕೊಂಡರು ಶಂಕರ್ ಅಶ್ವತ್ಥ್.

ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು
ಬಿಗ್ಬಾಸ್ ಮನೆಗೆ ಬರುವ ಮುನ್ನಾ ಎಲ್ಲ ಸ್ಪರ್ಧಿಗಳನ್ನು ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅದಾದ ಬಳಿಕವಷ್ಟೆ ಅವರನ್ನು ಬಿಗ್ಬಾಸ್ ಮನೆಗೆ ಕರೆತರಲಾಯಿತು. ಹೀಗಾಗಿ ಕಳೆದ ಎರಡು ವಾರದಿಂದಲೂ ಸಿಗರೇಟು ಸೇದಿಲ್ಲವೆಂದು ಹೇಳಿದ್ದಾರೆ ಶಂಕರ್ ಅಶ್ವತ್ಥ್. ಬಿಗ್ಬಾಸ್ ಮನೆಯಲ್ಲಿ ಸ್ಮೋಕಿಂಗ್ ಹೌಸ್ ಇದೆ, ಕೆಲವು ಸದಸ್ಯರು ಅಲ್ಲಿ ಸಿಗರೇಟು ಸೇದುತ್ತಿರುತ್ತಾರೆ. ಆದರೂ ಶಂಕರ್ ಅವರು ಸಿಗರೇಟು ಸೇದುತ್ತಿಲ್ಲ.

ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರ: ಸುದೀಪ್
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, 'ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರ. ನೀವು ಏನು ಮಾಡಬೇಕು, ಹೇಗಿ ಇರಬೇಕು ಎಂದುಕೊಂಡು ಬಿಗ್ಬಾಸ್ ಮನೆಯ ಒಳಗೆ ಬಂದಿದ್ದೀರೋ ಅದನ್ನು ಸಾಧಿಸುವ ರೀತಿಯಲ್ಲಿಯೇ ಆಡುತ್ತಿದ್ದೀರಿ, ಅದನ್ನೇ ಮುಂದುವರೆಸಿ' ಎಂದರು ಸುದೀಪ್.

ಶಂಕರ್ ಅನ್ನು ಉಳಿಸಿದ ಬ್ರೋ ಗೌಡ
ಶಂಕರ್ ಅಶ್ವತ್ಥ್ ಅವರು ಮೊದಲ ದಿನವೇ ನಾಮಿನೇಟ್ ಆಗಿದ್ದರು, ಆದರೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಬ್ರೋ ಗೌಡ ಅವರು ವಿಶೇಷ ಅಧಿಕಾರ ಬಳಸಿ ಶಂಕರ್ ಅಶ್ವತ್ಥ ಅವರನ್ನು ನಾಮಿನೇಷನ್ ಇಂದ ತಪ್ಪಿಸಿದರು.


Click it and Unblock the Notifications











