ಕೆಲಸಕ್ಕೆ ಬಾರದವರಷ್ಟೆ ಬಿಗ್ಬಾಸ್ಗೆ ಹೋಗ್ತಾರೆ: ಅಶ್ನೀರ್ ಗ್ರೋವರ್
ಬಿಗ್ಬಾಸ್ ರಿಯಾಲಿಟಿ ಶೋ, ಭಾರತದ ಅತಿ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಬಿಗ್ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
ಈ ರಿಯಾಲಿಟಿ ಶೋಗೆ ದೊಡ್ಡ ಸಂಖ್ಯೆಯ ವೀಕ್ಷಕ ವರ್ಗವಿದೆ. ಜೊತೆಗೆ ಈ ಶೋ ಅನ್ನು ಟೀಕಿಸುವವರ ಸಂಖ್ಯೆಯೂ ದೊಡ್ಡದಾಗಿದೆ. ಇದೀಗ ಖ್ಯಾತ ಉದ್ಯಮಿ, ಸೆಲೆಬ್ರಿಟಿಯೊಬ್ಬರು ಈ ಶೋ ಅನ್ನು ಶೋನಲ್ಲಿ ಭಾಗವಹಿಸುವವರನ್ನು ಟೀಕಿಸಿದ್ದಾರೆ.
ಭಾರತ್ ಪೇ ಸಂಸ್ಥಾಪಕ, ಖ್ಯಾತ ಉದ್ಯಮಿ ಅಶ್ಮೀರ್ ಗ್ರೋವರ್, ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವವರನ್ನು ಮೂದಲಿಸಿದ್ದಾರೆ.

ಈ ಹಿಂದೆ 'ಶಾರ್ಕ್ ಟ್ಯಾಂಕ್' ಹೆಸರಿನ ರಿಯಾಲಿಟಿ ಶೋನಲ್ಲಿ ಅಶ್ನೀರ್ ಗ್ರೋವರ್ ಭಾಗವಹಿಸಿದ್ದರು. ವಿವಿಧ ನವ್ಯೋದ್ಯಮಿಗಳು ತಮ್ಮ ಬ್ಯುಸಿನೆಸ್ ಐಡಿಯಾಗಳನ್ನು ಅಶ್ನೀರ್ ಗ್ರೋವರ್ ಹಾಗೂ ಇತರೆ ಕೆಲವು ಉದ್ಯಮಿಗಳ ಮುಂದೆ ಪ್ರಸ್ತುತ ಪಡಿಸುತ್ತಿದ್ದರು. ಅವರ ಐಡಿಯಾ ಈ ದೊಡ್ಡ ಬ್ಯುಸಿನೆಸ್ಮ್ಯಾನ್ಗಳಿಗೆ ಇಷ್ಟವಾದರೆ ಇವರು ಉದ್ಯಮದಲ್ಲಿ ಹಣ ತೊಡಗಿಸುತ್ತಿದ್ದರು. ಇದು ರಿಯಾಲಿಟಿ ಶೋನ ರೂಪವಾಗಿತ್ತು.
'ಶಾರ್ಕ್ ಟ್ಯಾಂಕ್' ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ಇದೀಗ ಶಾರ್ಕ್ ಟ್ಯಾಂಕ್ ಎರಡನೇ ಭಾಗ ಪ್ರಸಾರವಾಗುತ್ತಿದ್ದು, ಮೊದಲ ಭಾಗದಲ್ಲಿದ್ದ ಅಶ್ನೀರ್ ಗ್ರೋವರ್ ಅನ್ನು ಶೋನಿಂದ ಕೈಬಿಡಲಾಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಶ್ನೀರ್ ಗ್ರೋವರ್, ''ಅವರಿಗೆ ನನಗೆ ಸಂಭಾವನೆ ನೀಡುವುದು ಮಾತ್ರವೇ ಸಮಸ್ಯೆ ಅಲ್ಲ. ನನ್ನ ಸ್ಟೇಟಸ್ ಗೆ ಆ ಶೋ ಹೊಂದಿಕೆ ಆಗುವುದು ಸಹ ಮುಖ್ಯ ವಿಷಯವಾಗುತ್ತದೆ'' ಎಂದಿದ್ದರು. ಆ ಮೂಲಕ ನಾನು ಆ ಶೋಗಿಂತಲೂ ದೊಡ್ಡವನು ಎಂದು ದಾರ್ಷ್ಟ್ಯದಿಂದಲೇ ಹೇಳಿದ್ದಾರೆ.
ಅದೇ ಸಂದರ್ಶನದಲ್ಲಿ ಬಿಗ್ಬಾಸ್ ಬಗ್ಗೆಯೂ ಮಾತನಾಡಿರುವ ಅಶ್ನೀರ್ ಗ್ರೋವರ್, ''ಬಿಗ್ಬಾಸ್ನಿಂದಲೂ ಅವಕಾಶ ಬಂದಿತ್ತು ಆದರೆ ಬಿಗ್ಬಾಸ್ಗೆ ಕೇವಲ ಕೆಲಸಕ್ಕೆ ಬಾರದವರು, ಜೀವನದಲ್ಲಿ ಸಾಧಿಸಲಾರದೆ ಸೋತವರು ಮಾತ್ರ ಹೋಗುತ್ತಾರೆ. ಹಾಗಾಗಿ ನಾನು ಶೋನಲ್ಲಿ ಭಾಗವಹಿಸುವುದಿಲ್ಲ'' ಎಂದು ಹೇಳಿದೆ ಎಂದಿದ್ದಾರೆ ಅಶ್ನೀರ್ ಗ್ರೋವರ್. ಒಂದೊಮ್ಮೆ ಅವರು ಸಲ್ಮಾನ್ ಖಾನ್ಗಿಂತಲೂ ಹೆಚ್ಚು ಸಂಭಾವನೆ ಕೊಟ್ಟರಷ್ಟೆ ನಾನು ಬಿಗ್ಬಾಸ್ಗೆ ಹೋಗುತ್ತೇನೆ ಎಂದಿದ್ದಾರೆ ಅಶ್ನೀರ್.
'ಶಾರ್ಕ್ ಟ್ಯಾಂಕ್' ಶೋನಲ್ಲಿಯೂ ಸಹ ಅಶ್ನೀರ್ ಗ್ರೋವರ್ ತಮ್ಮ ಬಿಡುಬೀಸು ಮಾತುಗಳಿಂದ ಬಹಳ ಖ್ಯಾತರಾಗಿದ್ದರು. ಅವರಿಗೆ ಐಡಿಯಾ ಇಷ್ಟವಾಗಿಲ್ಲವೆಂದರೆ ಐಡಿಯಾ ಹೇಳಿದವನನ್ನು ಚೆನ್ನಾಗಿ ಬೈಯ್ಯುತ್ತಿದ್ದರು. ಇದೇ ಕಾರಣಕ್ಕೆ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ದರು.


Click it and Unblock the Notifications











