ನನ್ನ ಪಾಲಿನ ಅಲ್ಲಾಹ್ ಜಾಫರ್ ಷರೀಫ್: ದ್ವಾರಕೀಶ್
ನನ್ನ ಪಾಲಿಗೆ ಗಾಢ್ ಫಾದರ್ ಎಂದು ಇದ್ದರೆ ಅದಕ್ಕೆ ಕಾರಣ ಜಾಫರ್ ಷರೀಫ್. ನನ್ನನ್ನು ಬದುಕಿಸಿದ್ದು ಅಲ್ಲಾನೇ. ಆ ಅಲ್ಲಾಹ್ ಬೇರೆ ಯಾರು ಅಲ್ಲ ನಾನು ಕಂಡಂತಹ ಜಾಫರ್ ಷರೀಫ್. ಇಂದು ನಾನು ಜೀವಂತವಾಗಿರಲು ಕಾರಣ ಜಾಫರ್ ಷರೀಫ್ ಎಂದು ತಮ್ಮಿಬ್ಬರ ಸ್ನೇಹ ಸಂಬಂಧವನ್ನು ನೆನಪಿಸಿಕೊಂಡರು.
ಹದಿನೆಂಟು ವರ್ಷಗಳ ಕಾಲ ನಾನು ವನವಾಸ ಅನುಭವಿಸಿದ್ದೀನಿ. ಯಾವುದೇ ಚಿತ್ರ ಮಾಡಿದರೂ ಫ್ಲಾಪ್. ಅಂತಹ ಸಂದರ್ಭದಲ್ಲಿ ನನ್ನ ಆರೋಗ್ಯ ಕೈಕೊಡ್ತು. ಒಂದ್ಸಲ ಏರ್ ಫೋರ್ಟ್ ನಲ್ಲಿ ಬರುತ್ತಿರಬೇಕಾದರೆ ನಡೆಯಲು ಆಗಲಿಲ್ಲ. ಐ ಕುಡ್ ನಾಟ್ ವಾಕ್. ನಡೆಯಕ್ಕೇ ಆಗಲಿಲ್ಲ. ಯಾಕೆ ಹೀಗೆ ಆಯ್ತು ಎಂದು ನೋಡಿದರೆ ಹಾರ್ಟ್ ಪ್ರಾಬ್ಲಂ ಎಂದು ಗೊತ್ತಾಯಿತು.
ಟೆಸ್ಟ್ ಮಾಡಿಸಿದಾಗ ಪಾಸಿಟೀವ್ ಎಂದು ಬಂತು. ಜಾಫರ್ ಷರೀಪ್ ಅವರಿಗೆ ನನ್ನ ಗೆಳೆಯ ವೆಂಕಟೇಶ್ ರಾವ್ ಎಂಬುವವರು ತುಂಬಾ ಆತ್ಮೀಯರಿದ್ದಾರೆ. ಹೋಟೆಲ್ ಏಟ್ರಿಯಾದಲ್ಲಿ ಜಾಫರ್ ಷರೀಫ್ ಸಿಕ್ಕಿದರು. ಏನೋ ನಿನಗೆ ಹಾರ್ಟ್ ಪ್ರಾಬ್ಲಂ ಅಂತೆ ಯಾರು ಹೇಳಿದರು ನಿನಗೆ. ನಾಳೆ ಬೆಳಗ್ಗೆ ನಿನ್ನ ಮನೆಗೆ ಬರ್ತೀನಿ ಎಂದು ಹೇಳಿ ಬಂದರು.

ಎಲ್ಲಿ ಮಾಡಿಸಿಕೊಳ್ತೀಯಾ ಆಪರೇಷನ್, ಬೆಂಗಳೂರು, ಮುಂಬೈ, ಮದ್ರಾಸ್, ಲಂಡನ್, ನ್ಯೂಯಾರ್ಕ್ ಎಲ್ಲಿ ಮಾಡಿಸಿಕೊಳ್ಳುತ್ತೀಯಾ ಹೇಳು ಎಂದರು. ಆ ಕಾಲದಲ್ಲಿ ಆಪರೇಷನ್ ಎಂದರೆ ಎಂಟು ಹತ್ತು ಲಕ್ಷ ಖರ್ಚಾಗುತ್ತಿತ್ತು. ಆಗ ಜಾಫರ್ ಷರೀಪ್ ಮದ್ರಾಸ್ ಗೆ ಕರೆದುಕೊಂಡುಹೋಗಿ ನನ್ನ ಜೇಬಿಂದ ನಯಾಪೈಸೆ ಖರ್ಚು ಆಗದಂತೆ ಚಿಕಿತ್ಸೆ ಕೊಡಿಸಿದರು.
ಹದಿನೆಂಟು ವರ್ಷಗಳ ಬಳಿಕ ನಾನು ಎದ್ದು ಬಂದದ್ದು ವಿಷ್ಣುವರ್ಧನನಿಂದ. ಈಗ ಅವನು ನಡೆದುಕೊಂಡು ಬರಬೇಕಾಗಿತ್ತು ಈ ಕಾರ್ಯಕ್ರಮಕ್ಕೆ ಎಂದು ಹೇಳಬೇಕಾದರೆ ಅವರು ಭಾವುಕರಾದರು. ಸತತ ಸೋಲಿನಿಂದ ಕಂಗೆಟ್ಟಿದ್ದ ನನ್ನನ್ನು ಆಪ್ತಮಿತ್ರ ಚಿತ್ರ ಮೇಲೆತ್ತಿತು. ಆಗಲೇ ನನಗೆ ಬ್ರೇಕ್ ಸಿಕ್ಕಿದ್ದು ಎಂದರು.
ಒಂದು ಒಳ್ಳೆ ಸಿನಿಮಾ ಮಾಡಬೇಕು ಡೇಟ್ ಕೊಡೋ ಕೊಡೋ ಎಂದು ವಿಷ್ಣುವರ್ಧನನ್ನ್ನು ಕೇಳುತ್ತಿದ್ದೆ. ಪಿ ವಾಸುಗೆ, ರಮೇಶ್ ಗೆ, ವಿಷ್ಣುಗೆ ಎಲ್ಲರಿಗೂ ಒಂದು ಒಳ್ಳೆ ಸಿನಿಮಾ ಕೊಡಬೇಕು ಎಂಬ ತುಡಿತ ಇತ್ತು. ಆಗಲೇ ಈ ಆಪ್ತಮಿತ್ರ ಸಿಕ್ಕಿದ್ದು.
ಮಾಮ ಈ ಸಿನಿಮಾ ತುಂಬಾ ಚೆನ್ನಾಗಿ ಹೋಗುತ್ತದೆ. ನಿಮಗೆಲ್ಲರಿಗಿಂತಲೂ ಹೆಚ್ಚಾಗಿ ಆ ಚಿತ್ರದ ಬಗ್ಗೆ ಕಾನ್ಫಿಡೆನ್ಸ್ ಇದ್ದದ್ದು ಅವಳಿಗೆ ಮಾತ್ರ ಎಂದು ವಿಮಾನ ಅಪಘಾತದಲ್ಲಿ ದುರಂತ ಸಾವಪ್ಪಿದ ನಟಿ ಸೌಂದರ್ಯ ಅವರನ್ನು ನೆನೆದರು.
ಯಾವಾಗ ನಾನು ವಿಷ್ಣು ಜಗಳ ಆಡಿ ಸಿನಿಮಾ ಮಾಡಿದ್ದೇವೋ ಆಗೆಲ್ಲಾ ಹಿಟ್ ಆಗಿವೆ. ನನ್ನ ಮೇಲೆ ಅವನಿಗೆ ಅತಿಯಾದ ಪ್ರೀತಿ ಇತ್ತು. ಇಂದು ನಾನು ಏನೇ ಹೇಳಿದರು ಜನ ನಂಬದೇ ಇರಬಹುದು. ನಾನು ನಿರ್ದೇಶನಕ್ಕೆ ಬಂದಂದ್ದೇ ಅವನಿಂದ ಎಂದರು.
ರಾಜ್ ಕುಮಾರ್ ಇಲ್ಲದೆ ಇರುವುದೇ, ವಿಷ್ಣು ಇಲ್ಲದೆ ಇರುವುದು, ಪತ್ರಕರ್ತ ವಿಜಯ್ ಸಾರಥಿ ಇಲ್ಲದೆ ಇರುವುದೇ ದೊಡ್ಡ ನಷ್ಟ. ನಾನು ಯಾರ ಜೊತೆಗೆ ನನ್ನ ಭಾವನೆಗಳನ್ನು, ಸಿಹಿ ಖುಷಿ ಹಂಚಿಕೊಳ್ಳುವುದು ಎಂದು ಬೇಸರಿಸಿಕೊಂಡರು. ವಯಸ್ಸು ಆಗುತ್ತಾ ಆಗುತ್ತಾ ಲೋನ್ ಲಿನೆಸ್ ಹೆಚ್ಚಾಗುತ್ತಿದೆ ಎಂದು ಹೇಳಿದರು. [ಪ್ರಚಂಡ ಕುಳ್ಳ ದ್ವಾರಕೀಶ್ ಮೋಸಂಬಿ ಮಾರಿದ ಕಥೆ]
ತಾವು ರಾಜಕೀಯಕ್ಕೆ ಇಳಿದಿದ್ದು, ಚುನಾವಣೆಗೆ ಸ್ಪರ್ಧಿಸಿ ಸೋತಿದ್ದು, ಚಪ್ಪಾಳೆ ಹೊಡೆಯುವವರು ಶಿಳ್ಳೆ ಹಾಕುವವರು, ಆಟೋಗ್ರಾಫ್ ತೆಗೆದುಕೊಳ್ಳುವರೆಲ್ಲಾ ಓಟು ಹಾಕ್ತಾರೆ ಎಂಬುದು ಸುಳ್ಳು. ಒಂದು ಊರಿನಲ್ಲಿ ನನ್ನನ್ನು ನೋಡಲು ಆರು ಸಾವಿರ ಮಂದಿ ಬಂದಿದ್ದರು. ಖಂಡಿತ ಅಷ್ಟೂ ಓಟು ನನಗೆ ಬೀಳುತ್ತದೆ ಎಂದುಕೊಂಡಿದ್ದೆ. ಕೌಂಟಿಂಗ್ ದಿನ ನೋಡಿದರೆ ಆ ಊರಿನ ಆರು ಮತವೂ ನನಗೆ ಬಿದ್ದಿರಲಿಲ್ಲ. ಅಲ್ಲಿಗೆ ರಾಜಕೀಯವೇ ಬೇರೆ ಚಿತ್ರರಂಗವೇ ಬೇರೆ ಎಂಬುದು ತಮಗೆ ಗೊತ್ತಾಯಿತು ಎಂದರು. (2004ರಲ್ಲಿ ದ್ವಾರಕೀಶ್ ಅವರು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು)


Click it and Unblock the Notifications











