ಕನ್ನಡದ ಕೋಟ್ಯಧಿಪತಿಗೆ ಕ್ರೇಜಿಸ್ಟಾರ್ ರವಿಚಂದ್ರನ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಗೇಮ್ ಶೋನಲ್ಲಿ ರವಿಚಂದ್ರನ್ ಭಾಗವಹಿಸಲಿದ್ದಾರೆ. ಈಗಾಗಲೆ ರವಿಚಂದ್ರನ್ ಅವರು ಚೆನ್ನೈಗೆ ಹೋಗಿ 'ಕೋಟ್ಯಧಿಪತಿ' ಚಿತ್ರೀಕರಣದಲ್ಲಿ ಭಾಗವಹಿಸಿ ಬಂದಿದ್ದಾರೆ.
ಈ ವಿಶೇಷ ಸಂಚಿಕೆಯ ಪ್ರಸಾರ ಶೀಘ್ರದಲ್ಲೇ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆದರೆ ದಿನಾಂಕ ಯಾವಾಗ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಹೊರಬಿದ್ದಿಲ್ಲ. 'ಕನ್ನಡದ ಕೋಟ್ಯಧಿಪತಿ' ಶೋನಲ್ಲಿ ಭಾಗವಹಿಸುತ್ತಿರುವ ಮೂರನೇ ಸೆಲೆಬ್ರಿಟಿ ರವಿಚಂದ್ರನ್.
ಈ ಹಿಂದೆ ಗೋಲ್ಡನ್ ಗರ್ಲ್ ರಮ್ಯಾ ಸಹ ಕೋಟ್ಯಧಿಪತಿ ಶೋನಲ್ಲಿ ಭಾಗವಹಿಸಿದ್ದರು. ಅವರು ರು.3,20,000 (ಮೂರು ಲಕ್ಷ ಇಪ್ಪತ್ತು ಸಾವಿರ ರುಪಾಯಿ) ಗೆದ್ದಿದ್ದರು. ಅವರು ಇನ್ನೂ ಅಧಿಕ ಮೊತ್ತದ ಬಹುಮಾನವನ್ನು ಗೆಲ್ಲಬಹುದಾಗಿತ್ತು. ಆದರೆ ಅವರಿಗೆ ರವಾ ಇಡ್ಲಿ ಕೈಕೊಟ್ಟಿತ್ತು. ಮಸಾಲೆ ದೋಸೆ ಮೋಸ ಮಾಡಿತ್ತು.
ಇನ್ನು ಕೋಟ್ಯಧಿಪತಿ ಶೋನಲ್ಲಿ ಭಾಗವಹಿಸಿದ್ದ ಎರಡನೇ ಸೆಲೆಬ್ರಿಟಿ ಹಿರಿಯ ತಾರೆ ಲಕ್ಷ್ಮಿ. ಅಣ್ಣಾವ್ರ 84ನೇ ಹುಟ್ಟುಹಬ್ಬದ ನಿಮಿತ್ತ ಲಕ್ಷ್ಮಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಶೋನಲ್ಲಿ ಗೆದ್ದ ಹಣವನ್ನು ಅವರು ಮಾತ್ರೋಶಿಕ್ಷಣ ಸಂಸ್ಥೆಗೆ ದೇಣಿಯಾಗಿ ನೀಡಿದ್ದಾರೆ.
'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಸೋಮವಾರದಿಂದ ಗುರುವಾರದ ತನಕ ಪ್ರತಿ ರಾತ್ರಿ 8 ರಿಂದ 9.30ರ ತನಕ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಈ ಗೇಮ್ ಶೋನಲ್ಲಿ ಒಟ್ಟು ರು.1 ಕೋಟಿ ಬಹುಮಾನ ಗೆಲ್ಲುವ ಅವಕಾಶವಿದೆ.
ಹೇಳಿಕೇಳಿ ರವಿಚಂದ್ರನ್ ಸಖತ್ ಜಾಲಿ ಆಸಾಮಿ. ಈ ಹಿಂದೊಮ್ಮೆ ಪುನೀತ್ ಜೊತೆ ಮಾತನಾಡುತ್ತಾ ರಮ್ಯಾಗೆ ಮಾತು ಮಾತಿನಲ್ಲೇ ಕಣ್ಣು ಹೊಡೆದದ್ದು ಎಲ್ಲಾ ನೋಡ್ದೆ ಎಂದು ತಮಾಷೆಯಾಗಿ ರೇಗಿಸಿದ್ದರು. ಈಗ ಸ್ವತಃ ಅವರೇ ಶೋನಲ್ಲಿ ಭಾಗವಹಿಸುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಏತನ್ಮಧ್ಯೆ ರವಿಚಂದ್ರನ್ ಅವರ ಹೊಸ ಚಿತ್ರ 'ಆಸಾಮಿ' ಅವರ 52ನೇ ಹುಟ್ಟುಹಬ್ಬದ ನಿಮಿತ್ತ ಸೆಟ್ಟೇರಿದೆ. ಈ ಚಿತ್ರವನ್ನು ರವಿ ಅವರ ಮಗ ಮನೋರಂಜನ್ ಅವರು ಎನ್ ಎಸ್ ರಾಜ್ ಕುಮಾರ್ ಹಾಗೂ ಗೋವಿಂದು ಜೊತೆ ಕೈಜೋಡಿಸಿ ನಿರ್ಮಿಸುತ್ತಿದ್ದಾರೆ.
ತಮಿಳಿನ ಹಿಟ್ ಚಿತ್ರ 'ಮೊದಲ್ ಮರ್ಯಾದೆ' ರೀಮೇಕ್ ಇದಾಗಿದೆ. ಮೂಲಚಿತ್ರದಲ್ಲಿ ಶಿವಾಜಿ ಗಣೇಶನ್ ಅಭಿನಯಿಸಿದ್ದರು. 'ಆಸಾಮಿ' ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನವನ್ನೂ ರವಿಚಂದ್ರನ್ ಮಾಡಲಿದ್ದಾರೆ. 'ಕನ್ನಡದ ಕೋಟ್ಯಧಿಪತಿ'ಯಲ್ಲಿ ರವಿಚಂದ್ರನ್ ಎಷ್ಟು ಹಣ ಗೆದ್ದಿದ್ದಾರೆ ಎಂಬ ಬಗ್ಗೆ ನಿಮ್ಮಂತೆ ನಮಗೂ ಕುತೂಹಲ ಇದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











