ಮದುವೆಯಲ್ಲಿ ಸಿಕ್ಕ 1000 ರೂ. ಗಿಫ್ಟ್ ನೋಡಿ ತಲೆಕೆಡೆಸಿಕೊಂಡಿದ್ದೇಕೆ ನಿರ್ದೇಶಕ ಸೀತಾರಾಮ್?
ಖ್ಯಾತ ಧಾರಾವಾಹಿ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರಿಗೆ ಇಂದು (ಆಗಸ್ಟ್ 28) ಮದುವೆ ವಾರ್ಷಿಕೋತ್ಸವದ ಸಂಭ್ರಮ. ಸೀತಾರಾಮ್ ಪತ್ನಿ ಗೀತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುದಿನ. ಸುಪ್ರಸಿದ್ಧ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರ ರಂಜಿಸಿರುವ ಖ್ಯಾತ ನಿರ್ದೇಶಕ ಸೀತಾರಾಮ್ ಅವರಿಗೆ ಅಭಿಮಾನಿಗಳು ಮದುವೆ ವಾರ್ಷಿಕೋತ್ಸವದ ಶುಭಾಶಯ ತಿಳಿಸುತ್ತಿದ್ದಾರೆ.
ಕನ್ನಡ ಧಾರಾವಾಹಿ ಲೋಕಕ್ಕೆ ಹೊಸ ಆಯಾಮ ನೀಡಿದ ನಿರ್ದೇಶಕ ಟಿ.ಎನ್ ಸೀತಾರಾಮ್. ಮನ್ವಂತರ, ಮಾಯಾಮೃಗ, ಮುಕ್ತ ಮುಕ್ತ, ಮಹಾ ಪರ್ವ ಅಂತಹ ಅದ್ಭುತ ಧಾರಾವಾಹಿಗಳನ್ನು ಕಿರುತೆರೆ ನೀಡಿದ್ದಾರೆ. ಇದೀಗ ಮತ್ತೆ ಮನ್ವಂತರ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲು ಬರ್ತಿದ್ದಾರೆ. ಈ ನಡುವೆ ಸೀತಾರಾಮ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಮದುವೆ ದಿನ ನಡೆದ ಇಂಟ್ರಸ್ಟಿಂಗ್ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ.
"ಮತ್ತೆ ಹುಟ್ಟಿದರೆ ಬದಲಾಯಿಸದೆ ಇಟ್ಟುಕೊಳ್ಳ ಬಯಸುವ ಪುಟಗಳಲ್ಲಿ ಇದೂ ಒಂದು" ಎಂದು ಬರೆದುಕೊಂಡಿರುವ ಸೀತಾರಾಮ್, ಮದುವೆ ದಿನ ಯಾರೋ 1000 ರೂ. ಉಡುಗೊರೆ ಕೊಟ್ಟ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಬೇಡ ಎಂದರೂ ಉಡುಗೊರೆ ಕೊಟ್ಟುಹೋಗಿದ್ದ ಬಗ್ಗೆ ವಿವರಿಸಿರುವ ನಿರ್ದೇಶಕರು 'ಉಡುಗೊರೆ ಬೇಡವೆಂದರೂ ಕೆಲವರು ಕವರುಗಳನ್ನು ಜೇಬಿಗೆ ತುರುಕಿದ್ದರು. ಅದರಲ್ಲಿ ಒಂದು ಕವರಿನಲ್ಲಿ ಒಂದು ಸಾವಿರವಿತ್ತು. ಇಂದಿನ ಐವತ್ತು ಸಾವಿರಕ್ಕೆ ಸಮ. ಯಾರು ಕೊಟ್ಟರೆಂದು ಬರೆದಿರಲಿಲ್ಲ. ಬಹಳ ದಿನ ಯಾರು ಕೊಟ್ಟಿರ ಬಹುದೆಂದು ತಲೆ ಕೆಡಿಸಿಕೊಂಡು, ವಾಪಸ್ ಕೊಡಬೇಕಾಗಬಹುದೆಂದು ಹೆದರಿ ಹಾಗೇ ಗೌರಿಬಿದನೂರಿನ ದೇವರ ಮನೆಯಲ್ಲಿ ಇಟ್ಟಿದ್ದೆ' ಎಂದು ಮದುವೆ ಇಂಟ್ರಸ್ಟಿಂಗ್ ಘಟನೆಯನ್ನು ರಿವೀಲ್ ಮಾಡಿದ್ದಾರೆ. ಮುಂದೆ ಓದಿ...

ಸೀತಾರಾಮ್ ಪೋಸ್ಟ್
"ಇಂದಿನಂತೆ ಅಂದೂ ಹೀಗೇ. ಬೆಳಗಿನ ವೇಳೆಗೆ ಬರಿ ಮೋಡ. ಹತ್ತು ಗಂಟೆಯ ವೇಳೆಗೆ ಮೋಡಗಳು ಚದುರಿ ಶುಭ್ರ ಆಕಾಶವಾಯಿತು. ಬೆಂಗಳೂರು ನಗರಕ್ಕೆ ಸೇರಿರಲಿಲ್ಲ ಆಗ. ಜಯನಗರದ ಕಾಂಪ್ಲೆಕ್ಸ್ ನಿಂದ ಎಷ್ಟೋ ಮೈಲಿ. ನಿರ್ಜನ ಪ್ರದೇಶದ ದೇವಸ್ಥಾನ. ನರಸಿಂಹ ಎಂದು ನನ್ನ ಸ್ನೇಹಿತ. ನಂತರ ಚಿತ್ರ ಸಾಹಿತಿಯಾದ. ಅವನೊಂದು ಸರಕು ಸಾಗಣೆಯ ವ್ಯಾನ್ ಇಟ್ಟಿದ್ದ. ಗೌರಿಬಿದನೂರಿನಿಂದ ರಾಮನಗರಕ್ಕೆ ರೇಷ್ಮೆಗೂಡು ಸಾಗಿಸುವ ವ್ಯಾನ್. ಅದರಲ್ಲಿ ನಮ್ಮನ್ನೆಲ್ಲಾ ಅಲ್ಲಿ ಬಿಟ್ಟು ರಾಮನಗರಕ್ಕೆ ಹೊರಟು ಹೋಗಿದ್ದ. ಮದುವೆಗೆ ಇರು ಅಂದರೆ ಇರಲಿಲ್ಲ" ಎಂದಿದ್ದಾರೆ.

ಸರಳ ಮದುವೆ ನನ್ನ ಆಗ್ರಹವಾಗಿತ್ತು- ಸೀತಾರಾಮ್
"ಇನ್ನು ಮದುವೆ ಆಗಲಾರೆ ಎಂಬ ಎಷ್ಟೋ ದಿನದ ನಿಲುವು ಬದಲಾದ ದಿನ. ಹೆಚ್ಚು ಜನಗಳಿಲ್ಲದ ದೂರದ ಜಾಗದಲ್ಲಿ ಮದುವೆಯಾಗಬೇಕು. ಸೂಟು, ಬೂಟು ಉಂಗುರ, ಯಾವ ಆಡಂಬರವೂ ಇರಬಾರದು. ಮದುವೆಗೆ ಹೆಚ್ಚು ಜನ ಬರಬಾರದು. ಮದುವೆ ಅತಿ ಸರಳವಾಗಿ ನಡೆಯ ಬೇಕು ಎಂಬುದಷ್ಟೇ ನನ್ನ ಆಗ್ರಹವಾಗಿತ್ತು. ಅವರ ಕಡೆಯವರಿಗೆ ಒಳಗೊಳಗೇ ಸ್ವಲ್ಪ ದಿಗಿಲು. ಜನ ಬರಬಾರದು, ದೂರದ ಜಾಗದಲ್ಲಿ ಸರಳವಾಗಿ ಮಾಡಬೇಕು ಎಂದರೆ ಯಾವುದೋ ಸಂಗತಿ ಮುಚ್ಚಿಟ್ಟುಕೊಳ್ಳಲು ಇರಬಹುದೇ ಎಂಬ ಸಣ್ಣ ಅನುಮಾನ ಅವರಿಗೆ" ಎಂದು ಬರೆದುಕೊಂಡಿದ್ದಾರೆ.

ಅಂದು ಜೇಬಿನಲ್ಲಿ ಇದ್ದಿದ್ದು 570 ರೂ.
"ನನ್ನ ಜೇಬಿನಲ್ಲಿ ಇಡಿಯ ಖರ್ಚಿಗೆ ಉಳಿದಿದ್ದುದು ಐನೂರ ಎಪ್ಪತ್ತು ರೂಪಾಯಿ. ವಧುವನ್ನೂ ಕರೆದುಕೊಂಡು ಊರು ತಲುಪುವುದು ಹೇಗೆಂಬ ಚಿಂತೆ. ಮದುವೆಯ ಸಡಗರದಲ್ಲೂ ಆತಂಕದಲ್ಲಿ ಇದ್ದೆ. ಮದುವೆಗೆ ಹೆಚ್ಚು ಜನ ಬರಬಾರದೆಂಬ ಆಶಯ ವಿದ್ದರೂ ಹತ್ತಿರದ ಜನ ಬಂದಿದ್ದರು. ಅಂದು ಬರಿಯ ಗೆಳೆಯರಾಗಿದ್ದು ನಂತರದ ದಿನಗಳಲ್ಲಿ ಎಂ.ಎಲ್.ಎ, ಮಂತ್ರಿ ಗಳಾದವರು, ಸಿನಿಮಾ ನಟರಾದವರು, ಖ್ಯಾತ ಪತ್ರಕರ್ತರು, ಮುಂತಾದ ಕೆಲವು ಜನ ಬಂದಿದ್ದರು.

1000 ರೂ. ನೋಡಿ ತಲೆಕೆಡಿಸಿಕೊಂಡಿದ್ದ ಸೀತಾರಾಮ್
"ದುಡ್ಡು ಕಡಿಮೆಯಾದರೆ ತಾನು ಸ್ವಲ್ಪ ಕೊಡುತ್ತೇನೆಂದು ಗೆಳೆಯ ಕಿಟ್ಟಿ ಧೈರ್ಯ ಹೇಳುತ್ತಿದ್ದರು. ಮಧ್ಯಾಹ್ನ ಸರಳ ಊಟದ ನಂತರ ನರಸಿಂಹ ರಾಮನಗರದಿಂದ ವ್ಯಾನ್ ತಂದರು. ಅದರಲ್ಲಿ ಎಲ್ಲರೂ ಗೌರಿಬಿದನೂರಿಗೆ ವಾಪಸ್. ನಾನು ಗೀತಾ ಮಾತ್ರ ಮಲ್ಲೇಶ್ವರಂ ನಲ್ಲಿದ್ದ ಕಿಟ್ಟಿ ಮನೆಗೆ ಬಂದೆವು. ಉಡುಗೊರೆ ಬೇಡವೆಂದರೂ ಕೆಲವರು ಕವರುಗಳನ್ನು ಜೇಬಿಗೆ ತುರುಕಿದ್ದರು. ಅದರಲ್ಲಿ ಒಂದು ಕವರಿನಲ್ಲಿ ಒಂದು ಸಾವಿರವಿತ್ತು. ಇಂದಿನ ಐವತ್ತು ಸಾವಿರಕ್ಕೆ ಸಮ. ಯಾರು ಕೊಟ್ಟರೆಂದು ಬರೆದಿರಲಿಲ್ಲ. ಬಹಳ ದಿನ ಯಾರು ಕೊಟ್ಟಿರ ಬಹುದೆಂದು ತಲೆ ಕೆಡಿಸಿಕೊಂಡು, ವಾಪಸ್ ಕೊಡಬೇಕಾಗಬಹುದೆಂದು ಹೆದರಿ ಹಾಗೇ ಗೌರಿಬಿದನೂರಿನ ದೇವರ ಮನೆಯಲ್ಲಿ ಇಟ್ಟಿದ್ದೆ. ಮತ್ತೆ ಹುಟ್ಟಿದರೆ ಬದಲಾಯಿಸದೆ ಇಟ್ಟುಕೊಳ್ಳ ಬಯಸುವ ಪುಟಗಳಲ್ಲಿ ಇದೂ ಒಂದು"


Click it and Unblock the Notifications











