ಶತಕ ಪೂರೈಸಿದ ಟಿಎನ್ ಸೀತಾರಾಮ್ ಸೀರಿಯಲ್
ಸೂಕ್ಷ್ಮ ಮನಸ್ಸಿನ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ಗೌರಿಬಿದನೂರು ಸೀತಾರಾಮ್ ಅವರ ಧಾರಾವಾಹಿಗಳು ಸೆಂಚುರಿ ಪೂರೈಸುವುದು ದೊಡ್ಡ ಮಾತಲ್ಲ. ಏಕೆಂದರೆ ಅವರ ನಿರ್ದೇಶನದಲ್ಲಿ ಬಂದಂತಹ ಹಲವಾರು ಧಾರಾವಾಹಿಗಳು ದ್ವಿಶತಕ, ತ್ರಿಶಕ ಪೂರೈಸಿ ಮುನ್ನುಗ್ಗಿದ ಮೆಗಾ ಸೀರಿಯಲ್ ಗಳು.
ಈಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಮಹಾಪರ್ವ' ಧಾರಾವಾಹಿಯೂ ನೂರು ಸಂಚಿಕೆಗಳನ್ನು ಪೂರೈಸಿದೆ. ಈ ಒಂದು ಸಂದರ್ಭದಲ್ಲಿ ಧಾರಾವಾಹಿ ತಂಡ ಕೇಕ್ ಕಟ್ ಮಾಡಿ ಸಿಹಿ ಹಂಚಿಕೊಂಡು ಸಂಭ್ರಮಿಸಿದೆ. ಮಾಳವಿಕಾ ಅವಿನಾಶ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆ ಸಂಭ್ರಮದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಸೀತಾರಾಮ್ ಅವರ ಧಾರಾವಾಹಿಗಳಲ್ಲಿನ ಕಥಾವಸ್ತು ಮಧ್ಯಮವರ್ಗದ ಜನರ ಸಮಸ್ಯೆಗಳನ್ನು ಪ್ರಮುಖವಾಗಿ ಬಿಂಬಿಸುವಂತಿರುತ್ತವೆ. ಮಹಾಪರ್ವ ಧಾರಾವಾಹಿಯೂ ಇದಕ್ಕೆ ಭಿನ್ನವಾಗಿಲ್ಲ. ವೈರುಧ್ಯಗಳ ನಡುವೆ ಬದುಕುತ್ತಿರುವ ಮನುಷ್ಯನ ಜೀವನ ಕುರಿತಾಗಿ ಮಹಾಪರ್ವ ಮೂಡಿಬರುತ್ತಿದೆ.
ಮಧ್ಯಮವರ್ಗದ ಜನರ ಅಸಾಹಯಕ ಸ್ಥಿತಿಗೆ ಕೈಗನ್ನಡಿ ಹಿಡಿದಂತಿದ್ದ 'ಮಾಯಾಮೃಗ'ದಿಂದ ಕರ್ನಾಟಕದ ಕಿರುತೆರೆ ವೀಕ್ಷಕರ ನೆಚ್ಚಿನ ನಿರ್ದೇಶಕರಾಗಿ ಹೊರಹೊಮ್ಮಿದ ಟಿ.ಎನ್.ಸೀತಾರಾಂ ಆನಂತರ ರೈತರ ಸಮಸ್ಯೆಗಳು, ರಾಜಕೀಯ ಚದುರಂಗದಾಟ ಇಂತಹ ಸಮಾಜದ ಮೇಲೆ ಬೆಳಕು ಚೆಲ್ಲುವಂತಹ ನೈಜತೆಗೆ ಹತ್ತಿರವಾದ ವಿಷಯಗಳನ್ನಿಟ್ಟುಕೊಂಡು ಮುಕ್ತ ಹಾಗೂ ಮುಕ್ತಮುಕ್ತ ಧಾರಾವಾಹಿಗಳನ್ನು ನಿರ್ಮಿಸಿದ್ದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











