ಈಟಿವಿ ಮೆಗಾ ಧಾರಾವಾಹಿ 'ಮುಕ್ತ ಮುಕ್ತ'ಗೆ ತೆರೆ

ಸತತ ಮೂರು ವರ್ಷಗಳ ಕಾಲ ಪ್ರಸಾರವಾಗುವ ಮೂಲಕ ದಾಖಲೆ ನಿರ್ಮಿಸಿದೆ ಮುಕ್ತ ಮುಕ್ತ ಧಾರಾವಾಹಿ. ಶಾಂಭವಿ ಟೀಚರ್, ಕಲ್ಯಾಣಿ, ಶಶಿ, ಶಂಕರಮೂರ್ತಿ, ನಿರ್ಮಲಾ ಕೊಂಡಹಳ್ಳಿ, ಮಂಗಳತ್ತೆ, ಮಿಶ್ರ, ದೇಶಪಾಂಡೆ ಸೇರಿದಂತೆ ಸಿಎಸ್ ಪಿ ಪಾತ್ರದಲ್ಲಿ ಸ್ವತಃ ಸೀತಾರಾಮ್ ತನ್ನ ವೀಕ್ಷಕ ಬಳಗಕ್ಕೆ ಅಚ್ಚಳಿಯದ ನೆನಪು.
ಮುಕ್ತ ಮುಕ್ತ ಧಾರಾವಾಹಿ ಬಗ್ಗೆ ಸೀತಾರಾಮ್ ಅವರು ಮಾತನಾಡುತ್ತಾ, "ಇದೇ ಜ.25ಕ್ಕೆ ನನ್ನ ಮುಕ್ತ ಮುಕ್ತ ಮುಗಿಯುತ್ತಿದೆ. ಎಲ್ಲರೂ ಆನಂದದ ನಿಟ್ಟುಸಿರು ಬಿಡಬಹುದು" ಎಂದಿದ್ದಾರೆ. ಅಂದಹಾಗೆ ಇದೇ ಜ.25ಕ್ಕೆ ಮುಕ್ತ ಮುಕ್ತ ಧಾರಾವಾಹಿ 1204 ಸಂಚಿಕೆಗಳನ್ನು ಪೂರೈಸಲಿದೆ.
ಮುಖ್ಯವಾಗಿ ಸೀತಾರಾಮ್ ಅವರ ಧಾರಾವಾಹಿಗಳ ಕೇಂದ್ರ ಬಿಂದು ಕೋರ್ಟ್ ಸೀನ್ ಗಳು. 'ಮುಕ್ತ ಮುಕ್ತ' ಕೂಡ ಇದಕ್ಕೆ ಹೊರತಾಗಿರಲಿಲ್ಲ. ಕೋರ್ಟ್ ಸೀನ್ ಗಳನ್ನು ವಾರಗಟ್ಟಲೆ ಎಳೆದು, ಅಲ್ಲಿ ವಾದ ವಿವಾದ ಚರ್ಚೆಗಳು ಹೇಗೆ ನಡೆಯುತ್ತವೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನೋಡುಗರ ಕುತೂಹಲ ಕಾದಿರಿಸಿಕೊಂಡು ಬಂದಿದ್ದರು.
'ಮುಕ್ತ ಮುಕ್ತ' ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈಟಿವಿ ಕನ್ನಡ ಈಗ ಹೊಸ ಧಾರಾವಾಹಿಯನ್ನು ಆರಂಭಿಸುತ್ತಿದೆ. ಜ.28ರಿಂದ 'ಪವಿತ್ರ ಬಂಧನ' ಧಾರಾವಾಹಿ ಆರಂಭವಾಗಲಿದೆ.
ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ರಾತ್ರಿ 9.30ರಿಂದ 10ರ ತನಕ ಈ ಧಾರಾವಾಹಿಯನ್ನು ವೀಕ್ಷಿಸಬಹುದು. ಮಹಿಳೆಯರಿಗೆ ಇಷ್ಟವಾಗುವಂತಹ ಕೌಟುಂಬಿಕ ಕಥಾಹಂದರದ ಧಾರಾವಾಹಿ ಇದಾಗಿದೆ.
ಕಾರ್ತಿಕ್ ಹಾಗೂ ರವಿ ಬಸಪ್ಪನದೊಡ್ಡಿ ನಿರ್ದೇಶನದ ಈ ಧಾರಾವಾಹಿಯಲ್ಲಿ ನಟ ಕಲ್ಯಾಣ್ ಕುಮಾರ್ ಅವರ ಪುತ್ರ ಭರತ್ ಅಭಿನಯಿಸಿದ್ದಾರೆ. ಇವರ ಜೊತೆಗೆ ನಟಿ ಮೇಘನಾ ಹಾಗೂ ರೇಖಾ ವಿ ಕುಮಾರ್ ಪೋಷಕ ಪಾತ್ರಗಳಲ್ಲಿದ್ದಾರೆ. ದಟ್ಸ್ ಕನ್ನಡ ಕಾಮೆಂಟ್ ವಿಭಾಗ ಮುಕ್ತ ಮುಕ್ತ! (ಒನ್ಇಂಡಿಯಾ ಕನ್ನಡ)


Click it and Unblock the Notifications











