ಹೊಸ ಸುದ್ದಿ ಚಾನಲ್ ಈಟಿವಿ ನ್ಯೂಸ್ ಕನ್ನಡ ಆರಂಭ
ಸಪ್ತ ಕೋಟಿ ಕನ್ನಡಿಗರ ಮುಂದೆ ಮತ್ತೊಂದು ಹೊಸ ಕನ್ನಡ ನ್ಯೂಸ್ ಚಾನಲ್ ಬಂದಿದೆ. ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದಂತಹ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಮನೆಮಾತಿರುವ ವಾಹಿನಿ ಈಟಿವಿ. ಇದೀಗ ಇದೇ ಬಳಗಕ್ಕೆ ಸೇರಿದ 'ಈಟಿವಿ ನ್ಯೂಸ್ ಕನ್ನಡ' ಚಾನಲ್ ಗೆ ಇಂದು (ಮಾರ್ಚ್.19) ಚಾಲನೆ ನೀಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಚಾನಲ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು. ಈಗ ಎಲ್ಲಾ ಚಾನಲ್ ಗಳು ಜನಕ್ಕೆ ಉಪಯುಕ್ತ ಕಾರ್ಯಕ್ರಮಗಳನ್ನು ಕೊಡುವ ಬದಲು ಟಿಆರ್ ಪಿ ಹಿಂದೆ ಬಿದ್ದಿವೆ. ಸುದ್ದಿಯನ್ನು ಕೊಡುವಾಗ ವೈಯಕ್ತಿಕ ಹಿತ ಇರಬಾರದು, ಜನರ ಹಿತ ಇರಬೇಕು. ವೈಯಕ್ತಿಕ ಹಿತ ಇದ್ದರೆ ಸಮಾಜಕ್ಕೂ ಹಿತವಲ್ಲ, ನಾಡಿಗೂ ಹಿತವಲ್ಲ. ಬಡವರ ಹಾಗೂ ಶೋಷಿತರ ಪರ ದನಿಯಾಗಿ ನಿಮ್ಮ ವಾಹಿನಿ ಕಾರ್ಯನಿರ್ವಹಿಸಲಿ, ಮುಕ್ತ ಹಾಗೂ ನಿರ್ಭೀತ ವರದಿಗಾರಿಕೆ ಕಂಡು ಬರಲಿ ಎಂದು ಹಾರೈಸಿದರು. [ಸುದೀಪ್ ಕನ್ನಡದ ಗಾಡ್ ಫಾದರ್ ಆದ ವರ್ಷವಿದು]

TV18 Broadcast Ltdನ ಈಟಿವಿ ಗ್ರೂಪ್ ಆರಂಭಿಸುತ್ತಿರುವ ಎರಡನೇ ಸುದ್ದಿ ವಾಹಿನಿ ಇದು. ಈಟಿವಿ ನ್ಯೂಸ್ ಬಾಂಗ್ಲಾ ಚಾನಲ್ ಮಾರ್ಚ್ 10ರಂದು ಆರಂಭವಾಗಿದೆ. ಇದೀಗ ಈಟಿವಿ ನ್ಯೂಸ್ ಕನ್ನಡ ಆರಂಭಿಸಲಾಯಿತು. ಮುಂಬರುವ ದಿನಗಳಲ್ಲಿ ಗುಜರಾತಿ, ಹರ್ಯಾಣ ಹಾಗೂ ಹಿಮಾಚಲ ಪ್ರದೇಶದ ಪ್ರಾದೇಶಿಕ ಸುದ್ದಿ ವಾಹಿನಿಗಳನ್ನು ಆರಂಭಿಸಲು ಈಟಿವಿ ಬಳಗ ಸಿದ್ಧವಾಗುತ್ತಿದೆ.
ಈಟಿವಿ ನ್ಯೂಸ್ ಕನ್ನಡಕ್ಕೆ ಜಿ.ಎನ್.ಮೋಹನ್ ಅವರು ಸಂಪಾದಕರಾಗಿ ಹಾಗೂ ಎಸ್ ದಿವಾಕರ್ ಅವರು ನ್ಯಾಶನಲ್ ಅಡ್ವರ್ಟೈಸಿಂಗ್ ಸೇಲ್ಸ್ ಹೆಡ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈಟಿವಿ ಮನರಂಜನಾ ವಾಹಿನಿಗೆ ಮ್ಯಾನೇಜರ್ ಆಗಿದ್ದ ಆರ್ ಸುಬ್ಬ ರಾವ್ ಅವರನ್ನು ಈಟಿವಿ ನ್ಯೂಸ್ ಕನ್ನಡಕ್ಕೆ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











