ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಭೀಮಾ ತೀರದಲ್ಲಿ
ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ಕೃತಿಚೌರ್ಯದ ವಿವಾದಕ್ಕೆ ಒಳಗಾಗಿ ಚಿತ್ರೋದ್ಯಮದ ಗಮನಸೆಳೆದಿತ್ತು. ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ಅಣಜಿ ನಾಗರಾಜ್ ನಿರ್ಮಿಸಿದ ಚಿತ್ರ ಇದಾಗಿದೆ.
ದುನಿಯಾ ವಿಜಯ್ ಹಾಗೂ ಪ್ರಣೀತಾ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದರು. ಭೀಮಾ ತೀರದಲ್ಲಿ ಎಂಬ ಶೀರ್ಷಿಕೆಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಚಿತ್ರಕ್ಕೆ ಚಂದಪ್ಪ ಎಂದು ಹೆಸರಿಡಲಾಗಿತ್ತು.
ಆದರೆ ಜೀ ಕನ್ನಡದಲ್ಲಿ ಹಳೆಯ ಹೆಸರಿನಲ್ಲೇ (ಭೀಮಾ ತೀರದಲ್ಲಿ)ಚಿತ್ರ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ದುನಿಯಾ ವಿಜಿ ಈವರೆಗೆ ಮಾಡದೇ ಇರುವ ಮತ್ತು ಮಾಡಲೇ ಬೇಕಿದ್ದ ಪಾತ್ರವನ್ನು ಭೀಮಾ ತೀರದಲ್ಲಿ ಮಾಡಿದ್ದಾರೆ ಎನ್ನುವುದು ದಂಡುಪಾಳ್ಯದ ಹಂತಕರ ಆಣೆಗೂ ಸತ್ಯ ಎನ್ನುತ್ತದೆ ನಮ್ಮ ಚಿತ್ರ ವಿಮರ್ಶೆ.
ನಾಗಾಲೋಟದಲ್ಲಿ ಸಾಗುವ ಚಿತ್ರಕಥೆಯೇ ಇಡೀ ಚಿತ್ರದ ಜೀವಾಳ. ಇಲ್ಲಿಯೂ ಓಂ ಅದೇ ವೇಗ ಕಾಯ್ದುಕೊಂಡು ಹೋಗಿದ್ದಾರೆ. ಜೊತೆಗೆ ಅಲ್ಲಲ್ಲಿ ಹೊಡೆದಾಟಗಳು-ಬಡಿದಾಟಗಳು-ಅರಚಾಟಗಳು-ದೊಂಬರಾಟಗಳು ಇಲ್ಲದಿದ್ದರೆ ಅದು ಹೇಗೆ ಓಂ ಪ್ರಕಾಶ್ ಚಿತ್ರವಾದೀತು?! ಇಲ್ಲಿ ಸಣ್ಣ ವ್ಯತ್ಯಾಸವೆಂದರೆ ಹೆಚ್ಚಿನ ಕಡೆಗಳಲ್ಲಿ ಕುದುರೆಗಳನ್ನು ಬಳಸಿರುವುದು.
ಚಿತ್ರದ ಬಗ್ಗೆ ನಾವು ಎಲ್ಲವನ್ನೂ ಇಲ್ಲಿಯೇ ಹೇಳಿದರೆ ಏನು ಚೆಂದ ಹೇಳಿ? ಸಾಧ್ಯವಾದರೆ ಶನಿವಾರ ಬಿಡುವು ಮಾಡಿಕೊಂಡು ಚಿತ್ರ ನೋಡಿ. ಒಮ್ಮೆ ನೋಡಿದ್ದರೆ ಮತ್ತೊಮ್ಮೆ ನೋಡುವಂತಹ ಚಿತ್ರವಿದು. (ಒನ್ಇಂಡಿಯಾ ಕನ್ನಡ)


Click it and Unblock the Notifications












