ಹಿಂದೂ ಭಾವನೆಗೆ ಧಕ್ಕೆ ತಂದ ಆರೋಪ; ಅಮಿತಾಬ್ ಬಚ್ಚನ್ ವಿರುದ್ಧ FIR
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ ಪತಿ 12'ರಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಸಂಬಂಧಿಸಿದಂತೆ ಲಖನೌ ಪೊಲೀಸ್ ಸ್ಟೇಷನ್ ನಲ್ಲಿ ಅಮಿತಾಬ್ ಮತ್ತು ಸೋನಿ ಟಿವಿಯ ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಸೋಮವಾರ 'ಕೌನ್ ಬನೇಗಾ ಕರೋಡ್ ಪತಿ 12'ರ ಕರ್ಮವೀರ್ ವಿಶೇಷ ಸಂಚಿಕೆಯಲ್ಲಿ ಕೇಳಲಾದ ಪ್ರಶ್ನೆಯೊಂದು ಹಿಂದೂ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಮಹಾರಾಷ್ಟ್ರ ಬಿಜೆಪಿ ಶಾಸಕ ಅಭಿಮನ್ಯು ಪವಾರ್ ದೂರು ದಾಖಲಿಸಿದ್ದಾರೆ.
ಸೋಮವಾರದ ಎಪಿಸೋಡ್ ನಲ್ಲಿ ನಟ ಅನೂಪ್ ಸೋನಿ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಹಾಟ್ ಸೀಟಿನಲ್ಲಿದ್ದರು. 6,40,000 ನಗದು ಪ್ರಶ್ನೆ ವಿವಾದ ಸೃಷ್ಟಿ ಮಾಡಿದೆ.

ಪ್ರಶ್ನೆ ಹೀಗಿದೆ: 1927ರ ಡಿಸೆಂಬರ್ 25ರಂದು ಡಾ.ಬಿ ಆರ್ ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿ ಸುಟ್ಟುಹಾಕಿದ್ದರು?
ಆಯ್ಕೆಗಳು: ಎ) ವಿಷ್ಣು ಪುರಾಣ, ಬಿ) ಭಗವದ್ಗೀತೆ, ಸಿ) ಖಗ್ವೇದ, ಡಿ) ಮನುಸ್ಮೃತಿ
ಉತ್ತರ: ಮನುಸ್ಮೃತಿ. ಈ ಬಗ್ಗೆ ವಿವರಿಸಿದ ಅಮಿತಾಬ್ ಡಾ.ಅಂಬೇಡ್ಕರ್ ಪ್ರಾಚೀನ ಹಿಂದೂ ಪಠ್ಯದ ಪ್ರತಿಗಳನ್ನು ಖಂಡಿಸಿ ಸುಟ್ಟುಹಾಕಿದರು ಎಂದು ವಿವರಿಸಿದರು. 'ಇಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮಾತ್ರ ಆಯ್ಕೆಯಲ್ಲಿ ನೀಡಲಾಗಿದೆ. ಈ ಪ್ರಶ್ನೆ ಹಿಂದಿನ ಉದ್ದೇಶ ಹಿಂದೂಗಳ ಭಾವನೆಗಳನ್ನು ನೋಯಿಸುವುದು ಎಂಬುದು ಸ್ಪಷ್ಟವಾಗಿದೆ' ಎನ್ನುವ ಆರೋಪ ಕೇಳಿಬಂದಿದೆ.
ಈ ಪ್ರಶ್ನೆ ಹಿಂದೂ ಧಾರ್ಮಿಕ ಗ್ರಂಥಗಳನ್ನು ಸುಡುವ ಉದ್ದೇಶವನ್ನು ಹೊಂದಿದೆ ಮತ್ತು ಹಿಂದೂಗಳು ಹಾಗೂ ಬೌದ್ಧ ಧರ್ಮದ ಅನುಯಾಯಿಗಳ ನಡುವೆ ಧ್ವೇಷ ಉಂಟುಮಾಡುವ ಸಂದೇಶ ಹರಡುತ್ತಿದೆ ಎಂದು ಅಭಿಮನ್ಯು ಪವಾರ್ ದೂರಿದ್ದಾರೆ.


Click it and Unblock the Notifications











