ನಿಮ್ದುಕೆ ಜೀ ಕನ್ನಡದಲ್ಲಿ 'ಗೋವಿಂದಾಯ ನಮಃ'

ಇಷ್ಟಕ್ಕೂ 'ಗೋವಿಂದಾಯ ನಮಃ' ಪ್ರಸಾರವಾಗುತ್ತಿರುವುದು ಕನ್ನಡಿಗರ ಕಣ್ಮಣಿ ಜೀ ಕನ್ನಡ ವಾಹಿನಿಯಲ್ಲಿ. ಜೂನ್ 30ರಂದು ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಜುಲೈ 1ರಂದು ಮಧ್ಯಾಹ್ನ 1ಕ್ಕೆ 'ಗೋವಿಂದಾಯ ನಮಃ' ಮರುಪ್ರಸಾರವಾಗಲಿದೆ.
ಈ ಚಿತ್ರದಲ್ಲಿನ "ಪ್ಯಾರ್ಗೆ ಆಗ್ಬಿಟ್ಟೈತೆ..'" ಎಂಬ ಹಾಡು ಪಡ್ಡೆಗಳ ಪಾಲಿನ ಭಕ್ತಿಗೀತೆಯಾಗಿದೆ. ಏತನ್ಮಧ್ಯೆ 'ಗೋವಿಂದ' ಜುಲೈ 6, 2012ಕ್ಕೆ ಸೆಂಚುರಿ ಪೂರೈಸಲಿದ್ದಾನೆ. "ಈ ವರ್ಷದ ಎಲ್ರಿಗೆ ಪ್ಯಾರ್ಗೆ ಆಗ್ಬಿಟ್ಟೈತೆ ಪಿಕ್ಚರು! ಗೋವಿಂದಾಯ ನಮಃ. ನಿಮ್ದುಕೆ ಜೀ ಕನ್ನಡದಲ್ಲಿ ಜಲ್ದಿ ಬರ್ತೈತೆ" ಎಂಬ ಜಾಹೀರಾತು ಜೀ ಕನ್ನಡ ವೀಕ್ಷಕರನ್ನು ಸೆಳೆಯುತ್ತಿದೆ.
ಪವನ್ ಒಡೆಯರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಲೋ ಬಜೆಟ್ ಚಿತ್ರ ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡಿ ಚಿತ್ರೋದ್ಯಮವನ್ನು ಚಕಿತಗೊಳಿಸಿದೆ. ಕೇವಲ ಕರ್ನಾಟದಕದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಗೋವಿಂದ ಪ್ಯಾರ್ಗೆ ಆಗ್ಬಿಟ್ಟ. ದೆಹಲಿ, ಗೋವಾ, ಹೈದರಾಬಾದ್ ಸೇರಿದಂತೆ ಮುಂಬೈ ಹಾಗೂ ಚೆನ್ನೈನ ಪಿವಿಆರ್ಗಳಲ್ಲಿ ಗೋವಿಂದನಿಗೆ ಒಳ್ಳೆಯ ಕಲೆಕ್ಷನ್ ಆದ ಬಗ್ಗೆಯೂ ಸುದ್ದಿ ಇದೆ.
ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದಾಗಲೆ ಗೋವಿಂದನ ಮೇಲೆ ಕತೆ ಕದ್ದ ಆರೋಪ ಬಂದಿತ್ತು. ತಮ್ಮ ಚಿತ್ರ 'ಅವ್ನಂದ್ರೆ ಅವ್ನೆ' ಕತೆಯನ್ನು ಕದ್ದು 'ಗೋವಿಂದಾಯ ನಮಃ' ಚಿತ್ರ ಮಾಡಿದ್ದಾರೆ ಎಂದು ವೇಣುಗೋಪಾಲ ಎಂಬುವವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
ಈ ಸಂಬಂಧ ಚಲನಚಿತ್ರ ನಿರ್ದೇಶಕರ ಸಂಘ ಎರಡೂ ಚಿತ್ರಗಳನ್ನು ವೀಕ್ಷಿಸಿ, 'ಗೋವಿಂದಾಯ ನಮಃ' ಚಿತ್ರದ ಕತೆ ಕದ್ದ ಕತೆಯಲ್ಲ. ಈ ಚಿತ್ರಕ್ಕೂ 'ಅವ್ನಂದ್ರೆ ಅವನೇ' ಚಿತ್ರಕ್ಕೂ ಸುತಾರಾಂ ಸಂಬಂಧವಿಲ್ಲ ಎಂದು ಟಿಕೆಟ್ ಕೊಟ್ಟು ಮಂಗಳೂರು ಬಸ್ಸು ಹತ್ತಿಸಿದ್ದು ಹಳೆಯಕತೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











