'ಕೋಟ್ಯಾಧಿಪತಿ' ಶೀರ್ಷಿಕೆ ಸರಿ ಎಂದ ಗುರುಪ್ರಸಾದ್

'ಕೋಟ್ಯಾಧಿಪತಿ' ಶೋಗೆ ಸಂಭಾಷಣೆ ಬರೆಯುತ್ತಿರುವುದು ಗುರುಪ್ರಸಾದ್ ಎಂಬುದು ಎಲ್ಲರಿಗೂ ಗೊತ್ತೇ ಇದೆ ಎಂದು ಭಾವಿಸುತ್ತೇವೆ. ಅವರು 'ಕೋಟ್ಯಾಧಿಪತಿ' ಶೀರ್ಷಿಕೆಯಲ್ಲಿ ಇಣುಕಿರುವ ವ್ಯಾಕರಣ ದೋಷದ ಬಗ್ಗೆ ಮಾತನಾಡುತ್ತಾ, 'ಕೋಟ್ಯಾಧಿಪತಿ' ಶೀರ್ಷಿಕೆಯೇ ಸರಿ ಎಂದಿದ್ದಾರೆ.
ಈ ಮೂಲಕ ಹಲವಾರು ದಿನಗಳಿಂದ ಕೇಳಿಬರುತ್ತಿದ್ದ ಶೀರ್ಷಿಕೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. 'ಕೋಟ್ಯಾಧಿಪತಿ' ಶೀರ್ಷಿಕೆಯೇ ಸರಿ ಎಂದು ಅವರು ತಿಳಿಸಿದ್ದಾರೆ. ಆದರೆ ಇದು ಖಂಡಿತ ಭಂಡವಾದವಂತೂ ಅಲ್ಲ.
'ಕೋಟ್ಯಾಧಿಪತಿ' ಪದಪ್ರಯೋಗ ತಪ್ಪು ಎಂದು ಹಲವರು ಪತ್ರ ಬರೆದು ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಜಿಜ್ಞಾಸೆ ನಡೆಸಿದ್ದಾರೆ. ಪಂಡಿತರು, ಸಾಹಿತಿಗಳ ಜೊತೆ ಚರ್ಚಿಸಿದ್ದಾರೆ. ವ್ಯಾಕರಣ ತಜ್ಞರ ಜೊತೆಗೂ ಮಾತನಾಡಿದ್ದಾರೆ. ಕಡೆಗೆ ವ್ಯಾಕರಣ ತಜ್ಞ ಹಾಗೂ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಸಲಹೆಯನ್ನೂ ಕೇಳಿದ್ದಾರೆ. ಅವರು ಹೇಳಿದ್ದೇನೆಂದರೆ...
ವ್ಯಾಕರಣ ಪ್ರಕಾರ 'ಕೋಟ್ಯಧಿಪತಿ' ಸರಿ. ಆದರೆ ಆಡುಭಾಷೆಯಲ್ಲಿ 'ಕೋಟ್ಯಾಧಿಪತಿ' ಎಂದು ಕರೆಯುತ್ತಿದ್ದಾರೆ. ಹಾಗಾಗಿ ಎರಡರಲ್ಲಿ ಯಾವ ಪದ ಬಳಸಿದರೂ ತಪ್ಪಲ್ಲ ಎಂದಿದ್ದಾರೆ. ಹಾಗಾಗಿ ರೂಢಿಮೂಲವಾದ 'ಕೋಟ್ಯಾಧಿಪತಿ' ಶೀರ್ಷಿಕೆಯನ್ನೇ ಬಳಸುತ್ತಿದ್ದೇವೆ ಎಂದಿದ್ದಾರೆ.
ಕೋಟಿ' ಮತ್ತು 'ಅಧಿಪತಿ' ಎಂಬ ಎರಡು ಪದಗಳನ್ನು ಕೂಡಿಸಿ ಬರೆದರೆ 'ಕೋಟ್ಯಧಿಪತಿ' ಎಂದಾಗುತ್ತದೆಯೇ ಹೊರತು 'ಕೋಟ್ಯಾಧಿಪತಿ' ಅಲ್ಲ. ಇನ್ನು 'ಕೋಟ್ಯಧಿಪತಿ' ಪದವನ್ನು ಸಂಧಿ ಮಾಡಿದಾಗ ಯಣ್ ಸಂಧಿಯಾಗುತ್ತದೆ ಎಂಬ ವಾದ ಕೇಳಿಬಂದಿತ್ತು.
ಇದಕ್ಕೆ ಇನ್ನೊಂದೆರಡು ಉದಾಹರಣೆಗಳನ್ನೂ ಕೊಡಲಾಗಿತ್ತು. ಅತಿ + ಅಂತ್ಯ =ಅತ್ಯಂತ ಹಾಗೆಯೇ ಮನು + ಅಂತರ= ಮನ್ವಂತರ. ಆದರೆ 'ಲಕ್ಷಾಧಿಪತಿ' ಪದವನ್ನು ಬಿಡಿಸಿ ಬರೆದಾಗ ಲಕ್ಷ + ಅಧಿಪತಿ = ಲಕ್ಷಾಧಿಪತಿ (ಸವರ್ಣದೀರ್ಘ ಸಂಧಿ) ಆಗುತ್ತದೆ.
ಕೋಟ್ಯಂತರ ವೀಕ್ಷಕರು ನೋಡುವ ಕೋಟ್ಯಾಧಿಪತಿ ಶೀರ್ಷಿಕೆ ವಿವಾದಕ್ಕೆ 'ಮಠ' ಗುರುಪ್ರಸಾದ್ ಸಮರ್ಥನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ. ವ್ಯಾಕರಣ ಪರವಾಗಿ ಅಲ್ಲದೆ ರೂಢಿಗತವಾಗಿ ಬಳಕೆಯಲ್ಲಿರುವ ಪದವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಅಷ್ಟೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











