ಇಷ್ಟವಿಲ್ಲದೇ ಧರ್ಮಾಧಿಕಾರಿ ಪಟ್ಟ ಅಲಂಕರಿಸಿದ ವೀರೇಂದ್ರ ಹೆಗ್ಗಡೆ ಕಾರಣವೇನು?
Recommended Video
ಧರ್ಮಸ್ಥಳದ ಧರ್ಮಾಧಿಕಾರಿ ರತ್ನವರ್ಮಾ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ಅವರ ಜೇಷ್ಠ ಪುತ್ರನಾಗಿ ಜನಿಸಿದವರು ವೀರೇಂದ್ರ ಕುಮಾರ್. 24 ನವೆಂಬರ್ 1948ರಲ್ಲಿ ಹುಟ್ಟಿದರು. ಆಗಷ್ಟೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಚಿಕ್ಕ ವ್ಸಯಸಿನಿಂದಲೂ ಅಪ್ಪನ ಪ್ರೀತಿಯ ಮಗನಾಗಿ ಬೆಳೆದ ವೀರೇಂದ್ರ ಕುಮಾರ್ ಬೆಂಗಳೂರಿನ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.
ಬಾಲ್ಯದಿಂದಲೇ ಕಾರಿನ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದ ಇವರಿಗೆ ಫೋಟೋಗ್ರಫಿ ಕೂಡ ಅಚ್ಚುಮೆಚ್ಚು. ತಾನಾಯ್ತು, ತನ್ನ ಶಿಕ್ಷಣ ಆಯ್ತು ಎಂದು ಆಟವಾಡಿಕೊಂಡು ಬೆಳೆಯುತ್ತಿದ್ದ ವೀರೇಂದ್ರ ಕುಮಾರ್ ಅವರು, ಅತಿ ಚಿಕ್ಕವಯಸ್ಸಿನಲ್ಲೇ ಧರ್ಮಸ್ಥಳದ ಧರ್ಮಾಧಿಕಾರಿ ಆಗ್ತಾರೆ ಎಂಬುದು ಯಾರೊಬ್ಬರಿಗೂ ಗೊತ್ತಿರಲಿಲ್ಲ.
ಓದಬೇಕು ಎಂಬ ಆಸೆ, ಆರಾಮಾಗಿದ್ದ ಜೀವನವನ್ನ ಬಿಟ್ಟು ಅತಿ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳಲು ವೀರೇಂದ್ರ ಅವರಿಗೆ ಇಷ್ಟವಿರಲಿಲ್ಲ. ಆದ್ರೆ, ಸಮಯ, ಸಂದರ್ಭ 19ನೇ ವಯಸ್ಸಿನಲ್ಲೇ ಧರ್ಮಸ್ಥಳದ ಚುಕ್ಕಾಣಿ ಹಿಡಿಯುವಂತೆ ಮಾಡಿತು. ಅಷ್ಟಕ್ಕೂ, ವೀರೇಂದ್ರ ಕುಮಾರ್ ವೀರೇಂದ್ರ ಹೆಗ್ಗಡೆ ಆಗಿದ್ದು ಹೇಗೆ? ಯಾವ ಸಂದರ್ಭದಲ್ಲಿ ಈ ಮಹತ್ವದ ಸ್ಥಾನವನ್ನ ಅಲಂಕರಿಸಿದರು? ಮುಂದೆ ಓದಿ....

49 ವರ್ಷದಲ್ಲಿ ತಂದೆ ಆರೋಗ್ಯ ಕೆಟ್ಟಿತು
19 ವರ್ಷದ ವೀರೇಂದ್ರ ಅವರು ಬೆಂಗಳೂರಿನಲ್ಲಿ ಓದುತ್ತಿದ್ದರು. ಆಗ ಅವರ ತಂದೆಗೆ 49 ವರ್ಷ ವಯಸ್ಸು. ಆಗ ಇದ್ದಕ್ಕಿಂದ್ದಂತೆ ತಂದೆಯವರು ಆರೋಗ್ಯ ಕೆಡುತ್ತೆ. ಅನಾರೋಗ್ಯ ಹೆಚ್ಚಾಗುತ್ತೆ. 'ತಂದೆಯವರಿಗೆ ಮೊದಲೇ ಜ್ಯೋತಿಷ್ಯಗಳೊಬ್ಬರು ನಿಮಗೆ ಕಂಟಕ ಇದೆ ಎಂದು ಹೇಳಿದ್ದರಂತೆ. ಜೋತಿಷ್ಯವನ್ನ ನಂಬುತ್ತಿದ್ದ ತಂದೆವರಿಗೆ ಹೇಳಿದಂತೆ ಅನಾರೋಗ್ಯವೂ ಕಾಡಿತು' ಎಂದು ಹಳೆಯದನ್ನ ನೆನಪಿಸಿಕೊಂಡರು.

ಲೆಕ್ಕಾಚಾರ, ಆಡಳಿತ ಹೇಳಿಕೊಟ್ಟರು
'ತಮಗೆ ಅನಾರೋಗ್ಯ ಇದ್ದ ಸಮಯದಲ್ಲೇ ತನಗೆ ಕೆಲವು ವಿಷ್ಯಗಳ ಬಗ್ಗೆ ಹೇಳಿಕೊಡಲು ಶುರು ಮಾಡಿದರು. ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವುದು, ಅಲ್ಲಿ ಮಾತನಾಡುವುದು ಹೇಗೆ ಎಂದು ಹೇಳಿಕೊಡುವುದು ಮಾಡಿದರು. ದಾಖಲೆಗಳು, ಲೆಕ್ಕ ಹೇಗೆ ಇಡಬೇಕು ಎನ್ನುವುದನ್ನ ಟ್ರೈನಿಂಗ್ ಕೊಟ್ಟರು. ಇದೆಲ್ಲ ನನಗೆ ಆಸಕ್ತಿಯೇ ಇರಲಿಲ್ಲ. ಈ ನಡುವೆ ಉತ್ತರ ಭಾರತಕ್ಕೆ ಯಾತ್ರೆಗೆ ಹೋಗಬೇಕು ಎಂದು ನಿರ್ಧರಿಸಿ ಎಲ್ಲರೂ ಹೋದೆವು. ಆದ್ರೆ, ಮುಂಬೈಗೆ ಹೋದ ಬಳಿಕ ತಂದೆ ಅವರ ಆರೋಗ್ಯ ತೀವ್ರವಾಗಿ ಹದೆಗೆಟ್ಟಿತ್ತು. ನಂತರ ಅಲ್ಲಿಂದ ವಾಪಸ್ ಆದೆವು'

ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ
'ತಂದೆಯವರ ಆರೋಗ್ಯ ಕೈಮೀರುತ್ತಿತ್ತು. ಮಣಿಪಾಲ್ ನಲ್ಲಿ ಚಿಕಿತ್ಸೆ ಕೊಡಿಸಿದೆವು. ಆದ್ರೆ, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕೂ ಮುಂಚೆಯೇ ಜ್ಯೋತಿಷ್ಯರೊಬ್ಬರು ನಿಮ್ಮ ಜಾತಕ ಈಗ ಬಹಳ ಬಲವಾಗುತ್ತಿದೆ ಎಂದಿದ್ದರು. ನಾನು ಆಗ ತಲೆ ಚಚ್ಚಿಕೊಂಡೆ. ನನಗೆ ಯಾಕೆ ಈ ಎಲ್ಲ ಜವಾಬ್ದಾರಿ. ನಾನು ಓದಬೇಕು, ಲಾ ಮಾಡಬೇಕು ಎಂಬ ಆಸೆ. ಅಂತಿಮವಾಗಿ ಅದ್ಯಾವುದು ಆಗಲಿಲ್ಲ'

ಮನಸ್ಸಿನಲ್ಲಿ ಬೇಡ, ಆದ್ರೆ ಅನಿವಾರ್ಯ
'ನನಗೆ ಈ ಜವಾಬ್ದಾರಿ ತೆಗೆದುಕೊಳ್ಳುವುದು ಇಷ್ಟವಿರಲಿಲ್ಲ. ಆಸಕ್ತಿಯೂ ಇರಲಿಲ್ಲ. ಇದೊಂದು ರೀತಿ ವೈರಾಗ್ಯ ಎಂದು ಅಂದುಕೊಂಡಿದ್ದೆ. ಆದ್ರೆ, ಅನಿವಾರ್ಯವಾಗಿ ಪೀಠ ಅಲಂಕರಿಸಬೇಕಾಯಿತು. ಸುಮಾರು ಆರು ತಿಂಗಳ ಕಾಲ ನನ್ನ ತಂದೆಯವರು ನನಗೆ ತರಬೇತಿ ನೀಡಿದ್ದರು. ಅವರ ಕೊನೆಯ ದಿನಗಳಲ್ಲಿ ನಾನು ಅವರ ಜೊತೆಯಲ್ಲೆ ಇದ್ದೆ'

1968 ಅಕ್ಟೋಬರ್ 24ರಂದು ಪಟ್ಟಾಭಿಷೇಕ
'1968 ಅಕ್ಟೋಬರ್ 12 ರಂದು ನನ್ನ ತಂದೆ ಇಹಲೋಕ ತ್ಯಜಿಸಿದರು. ಅಕ್ಟೋಬರ್ 24ರಲ್ಲಿ ನನಗೆ ಪಟ್ಟಾಭಿಷೇಕ ಆಯಿತು. ಆಗ ನನಗೆ 19 ವರ್ಷ ವಯಸ್ಸು. ಕೈಯಲ್ಲಿ ಪಟ್ಟದ ಕತ್ತಿಯನ್ನ ಕೊಟ್ಟು, ವೀರೇಂದ್ರ ಕುಮಾರ್ ಅಂತಿದ್ದ ಹೆಸರನ್ನ ವೀರೇಂದ್ರ ಹೆಗ್ಗಡೆ ಎಂದು ಮರುನಾಮಕರಣ ಮಾಡಲಾಯಿತು'

21ನೇ ಧರ್ಮಾಧಿಕಾರಿ
'21ನೇ ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನ ನನ್ನ ತಲೆಯಲ್ಲಿ ಶೂನ್ಯ. ಏನೂ ಗೊತ್ತಿರಲಿಲ್ಲ. ಅಲ್ಲಿನ ಪುರೋಹಿತ ವರ್ಗ, ಸಿಬ್ಬಂದಿ ಹೇಳಿದ್ದನ್ನ ಯಾಂತ್ರಿಕವಾಗಿ ಮಾಡುತ್ತಿದ್ದೆ. ತಂದೆಯವರನ್ನ ಕಳೆದುಕೊಂಡ ನೋವು, ಈ ಅಧಿಕಾರ, ಈ ಪಟ್ಟ ಯಾಕೆ ಎಂಬ ಯೋಚನೆ. ನನಗೆ ನಮಸ್ಕಾರ ಮಾಡಲು ಶುರು ಮಾಡಿದರು, ಆಗ ಅಂದುಕೊಂಡೆ ನನಗಲ್ಲ ಮಂಜುನಾಥ ಸ್ವಾಮಿಗೆ ಅಂತ ನಿರ್ಧಾರ ಮಾಡಿದೆ. ಆಗಿಂದ ಇಲ್ಲಿಯವರೆಗೂ ಹಾಗೆ ನಡೆದುಕೊಂಡು ಬಂದಿದ್ದೀನಿ' ಎಂದು ಹಂಚಿಕೊಂಡರು.


Click it and Unblock the Notifications











