ಜೂ17 ರಿಂದ ಹೊಸ ರೂಪದಲ್ಲಿ ಕನ್ನಡದ ಕೋಟ್ಯಾಧಿಪತಿ
ಕಿರುತೆರೆಗೆ ವಿನೂತನ ಪರಿಕಲ್ಪನೆಗಳನ್ನು ಪರಿಚಯಿಸಿ ವೀಕ್ಷಕರಿಂದ ಮೆಚ್ಚುಗೆ ಗಳಿಸಿದ ಸ್ಟಾರ್ ನೆಟ್ವರ್ಕಿನ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಪುನೀತ್ ರಾಜಕುಮಾರ್ ಅರ್ಪಿಸುವ ಕನ್ನಡದ ಕೋಟ್ಯಾಧಿಪತಿಯಲ್ಲಿ ಮತ್ತೆ ಮಕ್ಕಳ ವಿಶೇಷ ಸಂಚಿಕೆಗಳು ಪ್ರಾರಂಭವಾಗುತ್ತಿದೆ.
ಈ "ಜೂನಿಯರ್ ಕನ್ನಡದ ಕೋಟ್ಯಾಧಿಪತಿ" ಈ ವಿಶೇಷ ಸಂಚಿಕೆಗಳು ಇದೇ ಜೂನ್ 17 ರಿಂದ ಪ್ರತಿ ಸೋಮವಾರದಿಂದ ಗುರುವಾರ ರಾತ್ರಿ 8-30 ಕ್ಕೆ ಪ್ರಸಾರವಾಗಲಿವೆ. ಕರ್ನಾಟಕದಾದ್ಯಂತ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರಿ, ಆಂಗ್ಲ ಮಾಧ್ಯಮ, ಗ್ರಾಮೀಣ ಪ್ರದೇಶದ ನಾನಾ ಶಾಲೆಗಳಿಂದ ಸಾಕಷ್ಟು ಮಕ್ಕಳು ಬಂದಿದ್ದರು.
ಒಂದು ಶಾಲೆಯಿಂದ 08-13 ವರ್ಷದೊಳಗಿನ ಅರ್ಹ 2 ಮಕ್ಕಳನ್ನು ಕಾರ್ಯಕ್ರಮಕ್ಕೆ ಆಯಾ ಶಾಲೆಯ ಪ್ರಾಂಶುಪಾಲರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ನಂತರ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಆಡಿಷನ್ ನಡೆಸಲಾಯಿತು.
ಈ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಶಾಲೆಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮದ ಪಾಸ್ಟೆಸ್ಟ್ ಫಿಂಗರ್ ಸುತ್ತಿಗೆ ಕಳುಹಿಸಲಾಗುತ್ತದೆ. ಈ ಮೊದಲಿರುವ ಕಾರ್ಯಕ್ರಮದ ನಿಯಮಗಳೇ ಮಕ್ಕಳ ವಿಶೇಷ ಸಂಚಿಕೆಗಳಿಗೂ ಅನ್ವಯವಾಗುತ್ತವೆ.

ಹೊಸ ರೂಪದಲ್ಲಿ ಕೋಟ್ಯಾಧಿಪತಿ
ಕಳೆದ ಸರಣಿಯಲ್ಲಿ ಪುಟಾಣಿಗಳೊಂದಿಗೆ ಬೆರೆತು, ಆಟ ಆಡಿಸಿ, ನಕ್ಕು ನಗಿಸಿ ಮಕ್ಕಳೊಂದಿಗೆ ಮಗುವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿರುವುದು ಶ್ಲಾಘನೀಯ.

ಮಕ್ಕಳೊಂದಿಗೆ ಪುನೀತ್
ಈಗ ಮತ್ತೆ ಮಕ್ಕಳು ಈ ಕಾರ್ಯಕ್ರಮಕ್ಕೆ ಬರುತ್ತಿರುವುದರಿಂದ ಕಳೆದ ಸರಣಿಯಲ್ಲಿದ್ದ ಸವಾಲಿಗಿಂತ ಈ ಬಾರಿ ಮಕ್ಕಳನ್ನು ಮತ್ತಷ್ಟು ರಂಜಿಸಿ ಹೇಗೆ ಕೋಟಿ ಆಟ ಆಡುತ್ತಾರೆ, ಮಕ್ಕಳ ಮುಗ್ಧತೆಯ, ತರಲೆ ಪ್ರಶ್ನೆಗಳಿಗೆ ಅವರ ಪ್ರತಿಕ್ರೀಯೆ ಹೇಗಿರುತ್ತ್ತದೆಂಬುದು ಕಾರ್ಯಕ್ರಮದ ಆಕರ್ಷಣೆ.

ಜೂನಿಯರ್ ಕೋಟ್ಯಾಧಿಪತಿ
"ಬದುಕನ್ನೇ ಬದಲಿಸುವ ಪ್ರಶ್ನೆಗಳು" ಎಂಬ ಟ್ಯಾಗ್ ಲೈನ್ ನೊಂದಿಗೆ ಮೂಡಿಬರುತ್ತಿರುವ ಈ ಕಾರ್ಯಕ್ರಮ ಸಾಕಷ್ಟು ಜನರ ಕನಸನ್ನು ನನಸಾಗಿಸಿ ಬದುಕನ್ನು ಬದಲಾಯಿಸಲಿದೆ. ಈ ಗೇಮ್ ಶೋನಲ್ಲಿ ಮಕ್ಕಳ ವಿಶೇಷ ಸಂಚಿಕೆಯನ್ನು ನಿರ್ಮಿಸುತ್ತಿರುವುದು ಅತ್ಯಂತ ವಿಶೇಷ. ಪುಟಾಣಿ ಮಕ್ಕಳು, ತರಲೆ, ಮುಗ್ದ ಮಕ್ಕಳು ಕೋಟಿ ಗೆಲ್ತಾರಾ? ಎಂಬುದನ್ನು ಕಾದು ನೋಡಬೇಕಾಗಿದೆ.

ಪವರ್ ಸ್ಟಾರ್ ಅಪ್ಪು ಜೊತೆ ಜ್ಯೂನಿಯರ್ ಗಳು
ಸುವರ್ಣ ವಾಹಿನಿಯ ಬಿಸಿನೆಸ್ ಹೆಡ್ ಆದ ಅನೂಪ್ ಚಂದ್ರಶೇಖರನ್ ಹೇಳುವ ಹಾಗೆ, "ಜೂನಿಯರ್ ಕನ್ನಡದ ಕೋಟ್ಯಾಧಿಪತಿಯನ್ನು" ಈ ಸರಣಿಯಲ್ಲಿಯೂ ನಿರ್ಮಿಸುತ್ತಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ನಮ್ಮ ಅಪ್ಪು ಮಕ್ಕಳ ಮುಗ್ಧ ಮನಸುಗಳನ್ನು ಸೂಕ್ಷ್ಮತೆಯಿಂದಲೇ ನಿಭಾಯಿಸಬಲ್ಲರು.

ಜೂ 17ರಿಂದ ಜ್ಯೂ. ಕೋಟ್ಯಾಧಿಪತಿ
ಕಳೆದ ಸಂಚಿಕೆಯಲ್ಲಿ ಪುನೀತ್ ಮಕ್ಕಳೊಂದಿಗೆ ಬೆರೆತು ಆಟವಾಡಿದ ರೀತಿ ಮರೆಯಲಾರದಂತಹುವುದು. ಪ್ರಾರಂಭದಿಂದಲೂ ಪ್ರೊಮೋಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಇಲ್ಲಿ ಗೆದ್ದ ಮೊತ್ತವನ್ನು ಆ ಮಕ್ಕಳ ತಮ್ಮ ಭವಿಷ್ಯ ರೂಪಿಸಲು ಅನೂಕೂಲವಾಗಲಿ ಎಂಬುದು ನಮ್ಮ ಆಶಯ ಎನ್ನುವುದು ಅನೂಪ್ ಚಂದ್ರಶೇಖರನ್ ಅಭಿಮತ.


Click it and Unblock the Notifications











