ಬುಲೆಟ್ ಪ್ರಕಾಶ್ ರವರ 'ಶಾಂತಿ ಕ್ರಾಂತಿ'ಯ ಕಥೆ ಕೇಳಿದ್ದೀರಾ.?
ಚಿಕ್ಕ ವಯಸ್ಸಿನಲ್ಲಿಯೇ ನಟ ಬುಲೆಟ್ ಪ್ರಕಾಶ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. 1991 ರಲ್ಲಿ ತೆರೆಕಂಡ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ 'ಪುಟ್ಟ ಬಾಲಕ' ಬುಲೆಟ್ ಪ್ರಕಾಶ್ ಕಾಣಿಸಿಕೊಂಡಿದ್ದರು.
ಹಾಗಂತ, 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಅವರು ಗುರುತಿಸಿಕೊಳ್ಳುವಂತಹ ಪಾತ್ರವನ್ನೇನು ನಿರ್ವಹಿಸಿರಲಿಲ್ಲ. ಬದಲಾಗಿ, 'ಶಾಂತಿ ಕ್ರಾಂತಿ' ಚಿತ್ರದಲ್ಲಿದ್ದ ಸ್ಕೂಲ್ ಮಕ್ಕಳ ಗುಂಪಿನಲ್ಲಿದ್ದರು ಅಷ್ಟೆ.

ಪುಟ್ಟ ಪಾತ್ರವಾಗಿದ್ದರೂ, ಆಡಿಷನ್ ಮೂಲಕವೇ ಸೆಲೆಕ್ಟ್ ಆಗಿದ್ದರಂತೆ ಬಾಲಕ ಪ್ರಕಾಶ್. ಈ ಬಗ್ಗೆ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬುಲೆಟ್ ಪ್ರಕಾಶ್ ಮಾತನಾಡಿದ್ದು ಹೀಗೆ...
''ಶಾಂತಿ ಕ್ರಾಂತಿ' ಸಿನಿಮಾಗಾಗಿ ಆಡಿಷನ್ ಮಾಡುತ್ತಿದ್ದರು. ರಾಜಾಜಿನಗರ 6ನೇ ಹಂತದ ಸೇಂಟ್ ಆನ್ಸ್ ಸ್ಕೂಲ್ ನಲ್ಲಿ ನಾನು ಓದುತ್ತಿದ್ದೆ. ನಮ್ಮ ಸ್ಕೂಲ್ ನಿಂದ ನಾನು ಮತ್ತು ಅನು ಪ್ರಭಾಕರ್ ಸೆಲೆಕ್ಟ್ ಆಗಿದ್ವಿ. ಅನೇಕ ಸ್ಕೂಲ್ ಹುಡುಗರನ್ನ ಕರ್ಕೊಂಡು ಹೋಗಿದ್ದರು. ಆದ್ರೆ, ನಮ್ಮನ್ನ ಮಾತ್ರ ಮೊದಲ ಲೈನ್ ನಲ್ಲಿ ನಿಲ್ಲಿಸಿದ್ದರು''
''ನನ್ನನ್ನ ನೋಡಿದ ಕೂಡಲೆ ರವಿಚಂದ್ರನ್ ಸರ್ 'ದಡಿಯ' ಎಂದರು. ಅವತ್ತು ನಾನು ರಜನಿಕಾಂತ್, ನಾಗಾರ್ಜುನ, ಅನಂತ್ ನಾಗ್, ಜೂಹಿ ಚಾವ್ಲಾ, ಖುಷ್ಬು ರವರನ್ನ ನೋಡಿದ್ದೆ'' ಎಂದು ತಮ್ಮ ಮೊದಲ ಚಿತ್ರೀಕರಣದ ಅನುಭವವನ್ನ ಬುಲೆಟ್ ಪ್ರಕಾಶ್ ಹೊರ ಹಾಕಿದರು.


Click it and Unblock the Notifications











