ಪ್ರೇಮ್ ಗಿನ್ನೂ ರೂಪಾ ಅಯ್ಯರ್ ಮೇಲಿನ ಬೇಸರ ಕಮ್ಮಿ ಆಗಿಲ್ಲ.! ಸಾಕ್ಷಿ ಇಲ್ಲಿದೆ..
Recommended Video

ಅದು 2013, ಜೂನ್ ತಿಂಗಳು... 'ಚಂದ್ರ' ಚಿತ್ರದ ಬಿಡುಗಡೆ ಸಮಯ... ಆಗ ಒಳ್ಳೆಯ ವಿಚಾರಕ್ಕೆ 'ಚಂದ್ರ' ಸಿನಿಮಾ ಸದ್ದು ಮಾಡಿದ್ದಕ್ಕಿಂತ 'ವಿವಾದ'ದಿಂದಲೇ ಸೌಂಡ್ ಮಾಡಿದ್ದು ಹೆಚ್ಚು.
'ಚಂದ್ರ' ಬಿಡುಗಡೆಗೂ ಮುನ್ನ ಪ್ರತಿಕಾಗೋಷ್ಠಿ ಕರೆಯಲಾಗಿತ್ತು. ಪ್ರೆಸ್ ಮೀಟ್ ನಲ್ಲಿ ಚಿತ್ರತಂಡದ ಎಲ್ಲರೂ ಹಾಜರಿದ್ದರು. ಆದ್ರೆ ನಾಯಕ ನಟ ಪ್ರೇಮ್ ಮಾತ್ರ ನಾಪತ್ತೆಯಾಗಿದ್ದರು. ''ಯಾಕ್ಹೀಗೆ.?'' ಅಂತ ಪತ್ರಕರ್ತರು ಪ್ರಶ್ನೆ ಮಾಡಿದಾಗ, ''ಮೂರು ದಿನಗಳ ಹಿಂದೆಯೇ ಆಹ್ವಾನ ನೀಡಿದ್ದೆವು. ಆದರೂ ಅವರು ಬಂದಿಲ್ಲ. ಯಾಕೆ ಬರಲಿಲ್ಲವೋ ನಮಗೆ ಗೊತ್ತಿಲ್ಲ'' ಅಂತ 'ಚಂದ್ರ' ಚಿತ್ರ ನಿರ್ದೇಶಕಿ ರೂಪಾ ಅಯ್ಯರ್ ಹೇಳಿದ್ದರು.
ರೂಪಾ ಅಯ್ಯರ್ ಹಾಗೂ ಪ್ರೇಮ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ, ಚಿತ್ರದ ಪ್ರಚಾರದಿಂದ ಪ್ರೇಮ್ ದೂರ ಉಳಿದಿದ್ದರು. ಈ ನಡುವೆ 'ಚಂದ್ರ' ಚಿತ್ರದ ಪೋಸ್ಟರ್ ಗಳಲ್ಲಿ ಯಶ್ ಅವರನ್ನ ಹೈಲೈಟ್ ಮಾಡಿರುವುದು, ಸಿನಿಮಾದಲ್ಲಿ ನಾಯಕಿ ಶ್ರಿಯಾ ಸರಣ್ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವುದು ಪ್ರೇಮ್ ಗೆ ಬೇಸರ ತಂದಿದೆ ಎಂದೆಲ್ಲ ಗುಸು ಗುಸು ಹಬ್ಬಿತ್ತು. ಆದ್ರೆ, ಇದೆಲ್ಲ ನಿಜವೇ.?
'ಚಂದ್ರ' ಚಿತ್ರದ ವಿವಾದಕ್ಕೆ ಕಾರಣವಾದ ಅಂಶಗಳ ಬಗ್ಗೆ ನಟ ಲವ್ಲಿ ಸ್ಟಾರ್ ಪ್ರೇಮ್ ಈಗ ಬಾಯ್ಬಿಟ್ಟಿದ್ದಾರೆ. ಈಗಲೂ ನಿರ್ದೇಶಕಿ ರೂಪಾ ಅಯ್ಯರ್ ಮೇಲೆ ಪ್ರೇಮ್ ಗೆ ಬೇಸರ ಕಮ್ಮಿ ಆಗಿಲ್ಲ ಎನ್ನುವುದು ಅವರ ಮಾತುಗಳಲ್ಲೇ ಸ್ಪಷ್ಟವಾಗಿದೆ.
ಅಷ್ಟಕ್ಕೂ, 'ಚಂದ್ರ' ವಿವಾದದ ಬಗ್ಗೆ ಪ್ರೇಮ್ ಏನಂತ ಹೇಳಿದರು.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರೇಮ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರೇಮ್ ಹಾಗೂ ರವಿಶಂಕರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೂರನೇ ಸೆಗ್ಮೆಂಟ್ (Rapid ಫೈಯರ್) ನಲ್ಲಿ ಶಿವಣ್ಣ ಒಂದು ಪ್ರಶ್ನೆ ಕೇಳಿದರು.

ಶಿವಣ್ಣ ಕೇಳಿದ ಪ್ರಶ್ನೆ ಏನು.?
''ನಾನು ಕೆಲವು ನಿರ್ದೇಶಕರ ಹೆಸರು ಹೇಳುತ್ತೇನೆ. ಅವರುಗಳಿಗೆ 10 ರಲ್ಲಿ ಎಷ್ಟು ಪಾಯಿಂಟ್ಸ್ ಕೊಡ್ತೀರಾ.?'' ಎನ್ನುತ್ತ ''ರತ್ನಜ, ದಿನಕರ್, ತರುಣ್ ಹಾಗೂ ರೂಪಾ ಅಯ್ಯರ್'' ಹೆಸರುಗಳನ್ನ ಪ್ರೇಮ್ ಮುಂದಿಟ್ಟರು ಶಿವಣ್ಣ.

ರೂಪಾ ಅಯ್ಯರ್ ಗೆ ಪ್ರೇಮ್ ಕೊಟ್ಟ ಪಾಯಿಂಟ್ಸ್ ಎಷ್ಟು.?
ರತ್ನಜಗೆ 10, ದಿನಕರ್ ಗೆ 9, ಹಾಗೂ ತರುಣ್ ಗೆ 8 ಪಾಯಿಂಟ್ಸ್ ಕೊಟ್ಟ ನಟ ಪ್ರೇಮ್, ರೂಪಾ ಅಯ್ಯರ್ ಹೆಸರು ಕೇಳುತ್ತಿದ್ದಂತೆಯೇ ಮಾತನ್ನೇ ನಿಲ್ಲಿಸಿಬಿಟ್ಟರು. ''ರೂಪಾ ಅಯ್ಯರ್ ಅಂದ ಕೂಡಲೆ ಸ್ಟಾಪ್ ಯಾಕೆ ಮಾಡಿದ್ರಿ.?'' ಅಂತ ಶಿವಣ್ಣ ಕೇಳಿದಾಗ, ಆಕೆಗೆ ಪ್ರೇಮ್ 3 ಪಾಯಿಂಟ್ ಕೊಟ್ಟರು.

ಅಂದು ಆಗಿದ್ದ ವಿವಾದ ಏನು.?
''ಚಂದ್ರ' ಸಿನಿಮಾ ಬಂದಾಗ ತುಂಬಾ ವಿವಾದ ಆಯ್ತು. ಅಷ್ಟಕ್ಕೂ, ಆಗ ನಡೆದದ್ದು ಏನು.?'' ಎಂದು ಪ್ರೇಮ್ ಗೆ ಶಿವಣ್ಣ ಪ್ರಶ್ನಿಸಿದ್ದರು.

ನಟ ಪ್ರೇಮ್ ಹೇಳಿದ್ದೇನು.?
''ನನಗೆ ಹೇಳಿದ ಹಾಗೆ ಸಿನಿಮಾ ಮಾಡಲಿಲ್ಲ. ಫ್ರೆಂಡ್ ಶಿಪ್ ನಲ್ಲಿ ನಾನು ಅವರ ಮೇಲೆ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳಲಿಲ್ಲ. ಅಷ್ಟು ಬಿಟ್ಟರೆ ಟ್ರೀಟ್ಮೆಂಟ್, ಸಂಭಾವನೆ ಹಾಗೂ ಸಿನಿಮಾ ಸೆಟ್ ಫೆಂಟ್ಯಾಸ್ಟಿಕ್ ಆಗಿತ್ತು. ಆದ್ರೆ, ವೈಯುಕ್ತಿಕವಾಗಿ ಕೆಲವೊಂದು ವಿಷಯಗಳು ನನಗೆ ಬೇಸರ ಆಯ್ತು. ಅದು ನನಗೆ ಇಷ್ಟ ಆಗಲಿಲ್ಲ'' ಎಂದರು ಪ್ರೇಮ್.

ರೂಪಾ ಅಯ್ಯರ್ ಮೇಲೆ ಇನ್ನೂ ಬೇಸರ ಕಮ್ಮಿ ಆಗಿಲ್ಲ
'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರೇಮ್ ಆಡಿದ ಮಾತುಗಳನ್ನು ಕೇಳಿದ್ರೆ, ಅವರಿಗೆ ರೂಪಾ ಅಯ್ಯರ್ ಮೇಲೆ ಇನ್ನೂ ಬೇಸರ ಕಮ್ಮಿ ಆಗಿಲ್ಲ ಅನ್ನೋದಂತೂ ಸ್ಪಷ್ಟ.


Click it and Unblock the Notifications











