ಡೈವೋರ್ಸಿ ಗಂಡನ ನೆನೆದು ಕಣ್ಣೀರಿಟ್ಟ ತಾರೆ ಚಂದ್ರಿಕಾ
ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ 18ನೇ ದಿನಕ್ಕೆ ಕಾಲಿಟ್ಟಿದೆ. ಈ ಬಾರಿ ಬಿಗ್ ಬಾಸ್ ಕೊಟ್ಟ ಟಾಸ್ಕ್ ಮನೆಯ ಸದಸ್ಯರಿಗೆ ಅಷ್ಟಾಗಿ ರುಚಿಸಿಲ್ಲ. ಅವರೆಲ್ಲಾ ನಿರಾಸಕ್ತಿ ತೋರಿಸಿದರು. ಬಿಗ್ ಬಾಸ್ ಸಹ ಮನೆಯವರಿಗೆ ಈ ಟಾಸ್ಕ್ ನಿಂದ ಮುಕ್ತಿ ಕಲ್ಪಿಸಿದರು.
ಮನೆಯಲ್ಲಿ ಇಬ್ಬರು ಸ್ವಾಮೀಜಿಗಳ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಒಂದು ಕಡೆ, ಕಾಳಿಕಾ ಮಠದ ಋಷಿಕುಮಾರ ಸ್ವಾಮಿ ಮತ್ತೊಂದು ಕಡೆ. ತಾನು ಗ್ರೇಟ್ ಅಂತ ಒಬ್ಬ ಸ್ವಾಮಿ. ಇಲ್ಲ ನಾನೇ ಗ್ರೇಟ್ ಎಂದು ಇನ್ನೊಬ್ಬ ಸ್ವಾಮಿ ಭಾವಿಸಿರುವಂತಿದೆ.
ಇದನ್ನೇ ಪ್ರಸ್ತಾಪಿಸುತ್ತಾ ನರೇಂದ್ರ ಬಾಬು ಶರ್ಮಾ ಅವರು, ಬ್ರಹ್ಮಾಂಡ ಗುರೂಜಿ ಅಂದ್ರೆ ಯಾರು ಎಂಬುದು ಇನ್ನೂ ಋಷಿಕುಮಾರನಿಗೆ ಗೊತ್ತಗಿಲ್ಲ. ನನ್ನನ್ನು ಆರ್ಡಿನರಿ ಮನುಷ್ಯ ಅಂದುಕೊಂಡಿದ್ದಾನೆ. ನಾನೇನು ಎಂಬುದನ್ನು ತೋರಿಸ್ತೀನಿ ಎಂದು ಹೆಂಗೆಳೆಯರ ಮುಂದೆ ಬ್ರಹ್ಮಾಂಡ ಜಂಬ ಕೊಚ್ಚಿಕೊಂಡರು.

ಕುಂತರೆ ಕಾಳಿ, ನಿಂತರೆ ಮಹಾಕಾಳಿ
ಇನ್ನು ಋಷಿಕುಮಾರನೂ ಅಷ್ಟೇ. ಈ ಹಿಂದಿನ ಸಂಚಿಕೆಯಲ್ಲಿ ಕುಂತರೆ ಕಾಳಿ, ನಿಂತರೆ ಮಹಾಕಾಳಿ, ಕೆರಳಿದರೆ ಭದ್ರ ಕಾಳಿ ಎಂದು ಹೇಳಿ ಮನೆಯ ಸದಸ್ಯರಲ್ಲಿ ಭಯಹುಟ್ಟಿಸುವ ಪ್ರಯತ್ನ ಮಾಡಿದರು. ಒಟ್ಟಿನಲ್ಲಿ ವೀಕ್ಷಕರ ಪಾಲಿಗೆ ಇವರಿಬ್ಬರು ಕಾಮಿಡಿ ಸ್ವಾಮಿಗಳಾಗಿದ್ದಾರೆ.

ಬಿಗ್ ಬಾಸ್ ಬಳಿ ದುಃಖ ತೋಡಿಕೊಂಡ ರಾಘು
ಇದೇ ಸಂದರ್ಭದಲ್ಲಿ ವಿಜಯ ರಾಘವೇಂದ್ರ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದರು. ಅಲ್ಲಿ ಬಿಗ್ ಬಾಸ್ ಕೇಳಿದ ಒಂದು ಪ್ರಶ್ನೆ ಎಂದರೆ, ನಿಮ್ಮ ಪತ್ನಿಯನ್ನು ತುಂಬಾ ಪ್ರೀತಿಸುತ್ತೀರಾ? ಇದಕ್ಕೆ ವಿಜಯ ರಾಘವೇಂದ್ರ ಉತ್ತರ ಕಣ್ಣೀರ ಕೋಡಿಯಾಗಿ ಹರಿಯಿತು.

ಪತ್ನಿ ಪುತ್ರನ ನೆನೆದು ಕಣ್ಣೀರಾದ ವಿಜಯ ರಾಘವೇಂದ್ರ
ನಮ್ಮ ತಂದೆ ತಾಯಿ, ಪತ್ನಿ, ಮಗ, ಅಕ್ಕ ಎಲ್ಲರೂ ನೆನಪಾಗುತ್ತಾರೆ. ಪ್ರತಿನಿತ್ಯ ಅವರ ಜೊತೆ ಮಾತನಾಡಬೇಕು ಅನ್ನಿಸುತ್ತದೆ ಎಂದರು. ಮನಸ್ಸು ಹಗುರ ಮಾಡಿಕೊಳ್ಳಿ ಎಲ್ಲವೂ ಶುಭವಾಗುತ್ತದೆ ಎಂದು ಬಿಗ್ ಬಾಸ್ ಸಮಾಧಾನಪಡಿಸಿದರು.

ಪ್ರಾಮಾಣಿಕತೆ ತೋರಿದ ಬ್ರಹ್ಮಾಂಡ ಗುರೂಜಿ
ಬಿಗ್ ಬಾಸ್ ಕೊಟ್ಟ ಟಾಸ್ಕ್ ದೇವತೆಗಳು ಹಾಗೂ ರಾಕ್ಷಸರು ಪಾತ್ರವನ್ನು ಮಾಡುವಲ್ಲಿ ಯಾರು ವಿಫರಾದರು ಎಂಬುದನ್ನು ತಿಳಿಸಬೇಕಿತ್ತು. ಇದಕ್ಕೆ ಶರ್ಮಾ ಅವರು ತಾವು ಉಲ್ಲಂಘಿಸಿದ್ದಾಗಿ ಪ್ರಾಮಾಣಿಕವಾಗಿ ಒಪ್ಪಿಕೊಂಡರು. ನಿದ್ದೆ ಮಾಡಿದ್ದಾಗಿ ಹೇಳಿದರು. ಆದರೆ ಋಷಿಕುಮಾರ ಪ್ರಾಮಾಣಿಕತನ ತೋರಲಿಲ್ಲ.

ನಿಖಿತಾ ಎಂಜಲು ತಟ್ಟೆ ನಾನು ಕ್ಲೀನ್ ಮಾಡಲ್ಲ
ಇನ್ನೊಂದು ಕಡೆ ಚಂದ್ರಿಕಾ ಹಾಗೂ ಶ್ವೇತಾ ಪಂಡಿತ್ ಮಾತನಾಡಿಕೊಳ್ಳುತ್ತಾ, ನಿಖಿತಾ ತಿಂದು ಬಿಟ್ಟ ಎಂಜಲು ತಟ್ಟೆ ಕ್ಲೀನ್ ಮಾಡು ಎಂದರೆ ನಾನು ಯಾವುದೇ ಕಾರಣಕ್ಕೂ ಮಾಡಲ್ಲ. ನಿನ್ನ ತಟ್ಟೆ ಬೇಕಿದ್ರೆ ಕ್ಲೀನ್ ಮಾಡುತ್ತೇನೆ ಎಂದು ಹೇಳಿದರು. ನಿಖಿತಾ ಮತ್ತು ಚಂದ್ರಿಕಾ ನಡುವೆ ಹಸಿ ಹುಲ್ಲು ಹಾಕಿದರೂ ಧಗ್ಗನೆ ಹೊತ್ತಿ ಉರಿಯುವಂತಿದೆ.

ಡೈವೋರ್ಸಿ ಗಂಡನ ನೆನೆದು ಕಣ್ಣೀರಿಟ್ಟ ಚಂದ್ರಿಕಾ
ಇನ್ನೊಂದು ಕಡೆ ಚಂದ್ರಿಕಾ ಅವರು ತಮ್ಮ ಡೈವೋರ್ಸಿ ಪತಿಯನ್ನು ನೆನೆದು ಕಣ್ಣೀರಿಟ್ಟರು. ಅರುಣ್ ಸಾಗರ್ ಜೊತೆ ಮಾತನಾಡುತ್ತಾ ತಮ್ಮ ಹಳೆ ನೆನಪುಗಳಲ್ಲಿ ಕಣ್ಣೀರಾದರು. ತನ್ನ ಮಗುವನ್ನು ಎತ್ತಿಕೊಂಡು ತಿಂಗಳುಗಟ್ಟಲೆ ಅಳುತ್ತೇನೆ. ನನಗಿಂತಲೂ ಅವರಿಗೆ ಗರ್ಲ್ ಫ್ರೆಂಡ್ ಜಾಸ್ತಿ ಆದಳು ಎಂದರು.

ಫಾಸ್ಟ್ ಈಸ್ ಫಾಸ್ಟ್, ಕಥೆಗೆ ಫುಲ್ ಸ್ಟಾಪ್
ಇದೇ ಸಂದರ್ಭದಲ್ಲಿ ಹೆಚ್ಚಿನ ವಿವರಗಳನ್ನು ಕೇಳಲು ಹೋದ ಶ್ವೇತಾ ಪಂಡಿತ್ ಅವರಿಗೆ ಫಾಸ್ಟ್ ಈಸ್ ಫಾಸ್ಟ್ ಎಂದು ಹೇಳಿ ಫುಲ್ ಸ್ಟಾಪ್ ಇಟ್ಟರು. ಚಂದ್ರಿಕಾ ಅವರ ಕಣ್ಣೀರನ್ನೂ ಒರೆಸಿ ಶ್ವೇತಾ ಸಮಾಧಾನ ಪಡಿಸಿದರು. ಅರುಣ್ ಸಾಗರ್ ಸಹ ಚಂದ್ರಿಕಾ ಅವರಿಂದ ಒಂದಷ್ಟು ಮಾಹಿತಿ ಹೊರಹಾಕಿಸುವ ಪ್ರಯತ್ನ ಮಾಡಿದ. ಸಾಧ್ಯವಾಗಲಿಲ್ಲ.

ಮನೆಯಲ್ಲಿ ರಕ್ತ, ಅಯ್ಯೋ ರಾಮ ರಾಮ
ಕಾಳಿ ಶ್ರೀಗಳು ಮನೆಗೆ ಅಡಿಯಿಟ್ಟಾಗಿನಿಂದ ಪರಿಸ್ಥಿತಿ ನೆಟ್ಟಗಿಲ್ಲ. ಜಗಳಗಳು ಜಾಸ್ತಿಯಾಗಿವೆ. ಒಬ್ಬರಿಗೊಬ್ಬರು ಪರಚಿಕೊಂಡು ರಕ್ತ ಬಂದಿದೆ. ಕಾಳಿ ಬಯಸುವುದು ಅದನ್ನೇ ಅಲ್ಲವೆ. ಆಕೆಗೆ ರಕ್ತ ಬೇಕು. ಇನ್ನೂ ಏನೇನು ಕಾದಿಯೋ ರಾಮ ರಾಮ ಎಂದರು ಬ್ರಹ್ಮಾಂಡ ಗುರೂಜಿ.

ಜಲಕ್ರೀಡೆಯಲ್ಲಿ ಮೈಮರೆತ ಸ್ವಾಮೀಜಿಗಳು
ಏತನ್ಮಧ್ಯೆ ಬ್ರಹ್ಮಾಂಡ ಗುರೂಜಿಗಳು ಈಜುಕೊಳಕ್ಕೂ ಧುಮುಕಿದರು. ಜಲಕ್ರೀಡೆಯಲ್ಲಿ ಮೈಮರೆತರು. ಮೂರು ಬಾರಿ ಡೈವ್ ಹೊಡೆದು ಎಲ್ಲರನ್ನೂ ಚಕಿತಗೊಳಿಸಿದರು. ತಾವೇನು ಕಮ್ಮಿ ಇಲ್ಲ ಎಂದು ಋಷಿಕುಮಾರ ಸ್ವಾಮಿಯೂ ಕೊಳಕ್ಕೆ ಕಪ್ಪೆಯಂತೆ ಜಿಗಿದ.

ಕಣ್ಣೀರಧಾರೆ ಹರಿಸಿದ ವಿನಾಯಕ ಜೋಶಿ
ಇನ್ನೊಂದು ಕಡೆ ಪ್ರತಿ ಯುಗಾದಿ ಹಬ್ಬಕ್ಕೂ ನಾನು ಮನೆಯಲ್ಲಿರುತ್ತಿದ್ದೆ. ಅಮ್ಮನ ಜೊತೆ ಸಂಭ್ರಮ ಹಂಚಿಕೊಳ್ಳುತ್ತಿದ್ದೆ. ಆದರೆ ಈ ಬಾರಿ ಬಿಗ್ ಬಾಸ್ ಮನೆಯಲಿ ಲಾಕ್ ಆಗಿರುವುದನ್ನು ನೆನೆಸಿಕೊಂಡು ವಿನಾಯಕ ಜೋಶಿ ಕಣ್ಣೀರಾದ. ಒಂದು ಹಂತದಲ್ಲಿ ಅರುಣ್ ಸಾಗರ್ ಕಣ್ಣಲ್ಲೂ ಅಶ್ರುಧಾರೆ ಹರಿಯಿತು.

ಬಿಗ್ ಬಾಸ್ ಮನೆಯಲ್ಲಿ ಹೆಣ್ಮಕ್ಳೇ ಸ್ಟ್ರಾಂಗು ಗುರು
ಬಿಗ್ ಬಾಸ್ ಮನೆಯಲ್ಲಿನ ವಾತಾವರಣ ನೋಡುತ್ತಿದ್ದರೆ ಪುರುಷ ಅಭ್ಯರ್ಥಿಗಳೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕಣ್ಣೀರಾಕುತ್ತಲೇ ಇದ್ದಾರೆ. ಆದರೆ ಮಹಿಳಾ ಸ್ಪರ್ಧಿಗಳು ಅಷ್ಟಾಗಿ ಕಂಬನಿ ಹರಿಸುತ್ತಿಲ್ಲ. ಇಲ್ಲೂ ಅಷ್ಟೇ ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂಬಂತಾಗಿದೆ.


Click it and Unblock the Notifications










