ಹೊಸತನದೊಂದಿಗೆ ಬರಲಿದೆ ಕಸ್ತೂರಿ ವಾಹಿನಿ
ಕರ್ನಾಟಕದ ಐದು ಖಾಸಗಿ ಮನೋರಂಜನಾ ಚಾನೆಲ್ಗಳಲ್ಲಿ ಒಂದಾಗಿರುವ ಕಸ್ತೂರಿ ಚಾನೆಲ್ ಇದೀಗ ಹೊಸತನದೊಂದಿಗೆ ಕನ್ನಡಿಗರ ಮನಸೂರೆಗೊಳ್ಳಲು ಸಜ್ಜಾಗಿದೆ. 2007 ರಲ್ಲಿ 60% ರಷ್ಟು ಮನೋರಂಜನೆ, 40% ರಷ್ಟು ಸುದ್ದಿಗಳನ್ನು ಬಿತ್ತರಿಸುವುದರೊಂದಿಗೆ ಆರಂಭಗೊಂಡ ಚಾನೆಲ್ನ ಇದೀಗ ಪಿ.ಕೈಲಾಸಂ ನೇತೃತ್ವದ ವೈಟ್ ಹಾರ್ಸ್ ನೆಟ್ ವರ್ಕ್, ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಮುಂದಿನ ಐದು ವರ್ಷಗಳ ಕಾಲ ಕಸ್ತೂರಿ ಟಿವಿಯ ಆಡಳಿತ ವೈಟ್ ಹಾರ್ಸ್ ನೆಟ್ ವರ್ಕ್ ನವರದ್ದು ! ಹೀಗಾಗಿ, ಚಾನೆಲ್ಗೆ ಹೊಸರೂಪ, ಹೊಸ ವಿನ್ಯಾಸ, ಹೊಸ ಕಳೆ ನೀಡಲು ವೈಟ್ ಹಾರ್ಸ್ ಸಂಸ್ಥೆ ಮುಂದಾಗಿದೆ.
ಈಗಾಗಲೇ ತನ್ನದೇ ಆದ ವೀಕ್ಷಕ ಬಳಗ ಹೊಂದಿರುವ ಕಸ್ತೂರಿ ಚಾನೆಲ್ ಇನ್ನು ಮುಂದೆ ಹೊಸತನದೊಂದಿಗೆ, ನವನವೀನ ಕಾರ್ಯಕ್ರಮಗಳ ಮೂಲಕ ಎಲ್ಲರ ಮನೆಮಾತಾಗಲಿದೆ.

ಸಾಮಾಜಿಕ ಮತ್ತು ರಾಜಕೀಯ ವಿಷಯಗಳಲ್ಲಿ ಜನರ ಭಾವನೆಗಳನ್ನು ಬಿಂಬಿಸುವಂತಹ ''ಮಾತಂದ್ರೆ ಮಾತು'' ಕಾರ್ಯಕ್ರಮವನ್ನ ಖ್ಯಾತ ತಾರೆ ಮುರುಳಿ ನಡೆಸಿಕೊಡಲಿದ್ದಾರೆ.
ಹಾಗೆಯೇ ''ಪದಕ್ಕೊಂದು ಸವಾಲ್'' ಕಾರ್ಯಕ್ರಮದಲ್ಲಿ ವೀಕ್ಷಕರು ನೇರವಾಗಿ ಪ್ರಶ್ನೋತ್ತರದಲ್ಲಿ ಪಾಲ್ಗೊಂಡು ಹಲವು ಬಹುಮಾನಗಳನ್ನು ಗೆಲ್ಲಿಸುವ ಸುವರ್ಣಾವಕಾಶವನ್ನ ಕಸ್ತೂರಿ ವಾಹಿನಿ ಕಲ್ಪಿಸಿದೆ.
ಕಳೆದ ಸೋಮವಾರದಿಂದ ಆರಂಭವಾಗಿರುವ ಮತ್ತೊಂದು ವಿಶೇಷ ಕಾರ್ಯಕ್ರಮ ''ಸಖತ್ ಅತ್ತೆ ಸೂಪರ್ ಸೊಸೆ''ಯಲ್ಲಿ ಸುಷ್ಮಾ ರಾವ್ ಅತ್ತೆ ಸೊಸೆಯರನ್ನು ಒಂದೇ ವೇದಿಯಲ್ಲಿ ಸೇರಿಸುವ ವಿಶಿಷ್ಟ ಪ್ರಯತ್ನ ಮಾಡುತ್ತಿದ್ದಾರೆ.
''ಆರದಿರಲಿ ಬೆಳಕು'' ಕಾರ್ಯಕ್ರಮವನ್ನು ಖ್ಯಾತ ತಾರೆ ಮಾಳವಿಕಾ ಅವಿನಾಶ್ ನಡೆಸಿಕೊಡಲಿದ್ದು, ಸಾಮಾನ್ಯ ಜನರು ಎದುರಿಸುತ್ತಿರುವ ಸಾಮಾಜಿಕ ಸವಾಲುಗಳ ಮೇಲೆ ಬೆಳಕು ಚೆಲ್ಲಲಿದೆ.
ಖ್ಯಾತ ನಟ-ನಟಿಯರು, ರಾಜಕಾರಣಿಗಳು, ಕ್ರೀಡಾಪಟುಗಳೊಂದಿಗೆ ಹರಟೆ ನಡೆಸುವ ''ನನ್ನ ಲೈಫ್ ನಲ್ಲಿ ಒಂದು ದಿನ''.. ಕಾರ್ಯಕ್ರಮ ಪ್ರತಿ ಭಾನುವಾರ ಸಂಜೆ 7.30 ರಿಂದ 8.30 ರವರೆಗೆ ಪ್ರಸಾರವಾಗಲಿದೆ.
ಅಪರಾಧ ಜಗತ್ತಿನ ಕರಾಳ ಅಧ್ಯಾಯವನ್ನು ಬಿಚ್ಚಿಡಲಿರುವ ವೀಕೆಂಡ್ ಸ್ಪೆಷಲ್ ''ಕ್ರೈಮ್ ಅಲರ್ಟ್''. ಅಲ್ಪಾವಧಿ ನೆನಪು ಹೊಂದಿರುವ ವ್ಯಕ್ತಿಯೊಬ್ಬನನ್ನು ಬಿಂಬಿಸುವುದರೊಂದಿಗೆ ವೀಕ್ಷಕರ ಮನತಣಿಸುವ ಮತ್ತೊಂದು ಕಾಮಿಡಿ ಶೋ ''ಗುಗ್ಗು ನನ್ನ ಮಕ್ಳು'' ಮೂಡಿಬರಲಿದೆ.
ಹೀಗೆ ಎಲ್ಲಾ ವೀಕ್ಷಕರ ಮೆಚ್ಚುಗೆ ಗಳಿಸಲು ಹಲವಾರು ಕಾರ್ಯಕ್ರಮಗಳ ಜೊತೆಗೆ ಸೂಪರ್ ಹಿಟ್ ಸಿನಿಮಾಗಳೂ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











