ಡಿಸೆಂಬರ್ 15 ರಂದು ಕಿರುತೆರೆಯಲ್ಲಿ 'ಕುರುಕ್ಷೇತ್ರ' ದರ್ಶನ
2018ರ ಸೂಪರ್ ಹಿಟ್ ಚಿತ್ರಗಳ ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ' ಬಹಳ ವಿಶೇಷವಾದದು. ಮಹಾಭಾರತದ ಕಥಾಹಂದರ ಹೊಂದಿದ್ದ ಈ ಚಿತ್ರದಲ್ಲಿ ಬಹುದೊಡ್ಡ ತಾರಬಳಗ ಹಾಗೂ ದೊಡ್ಡ ಬಜೆಟ್ನಲ್ಲಿ ತಯಾರಾಗಿತ್ತು.
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡಿದ್ದ ಕುರುಕ್ಷೇತ್ರ ಡಿ ಬಾಸ್ ವೃತ್ತಿ ಜೀವನದಲ್ಲಿ ಹಾಗೂ ನಿರ್ಮಾಪಕ ಮುನಿರತ್ನ ಕೆರಿಯರ್ ನಲ್ಲಿ ಮೈಲಿಗಲ್ಲು ಎಂದು ಹೇಳಬಹುದು.
ಇಂತಹ ಅತ್ಯದ್ಭುತ ದೃಶ್ಯಕಾವ್ಯ ಈಗ ಕಿರುತೆರೆಗೆ ಪ್ರವೇಶ ಮಾಡುತ್ತಿದೆ. ಇದೇ ಭಾನುವಾರ ಡಿಸೆಂಬರ್ 15, ಸಂಜೆ 6:30 ಕ್ಕೆ ಜೀ ಕನ್ನಡ ವಾಹಿನಿ 'ಕುರುಕ್ಷೇತ್ರ'ದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಪ್ರಸಾರ ಮಾಡಲಿದೆ.
ನಿರ್ದೇಶಕ ನಾಗಣ್ಣರವರ 'ಕುರುಕ್ಷೇತ್ರ' ಚಲನಚಿತ್ರ ಸುಂದರವಾಗಿ ಕೆತ್ತಲಾಗಿದ್ದು ದುರ್ಯೋಧನನ ದೃಷ್ಟಿಕೋನದ ಮೂಲಕ ಮಹಾಭಾರತದ ಮೌಲ್ಯಗಳನ್ನು ನಿರೂಪಿಸಲಾಗಿದೆ. ಕನ್ನಡದ ಈ 3ಡಿ ಐತಿಹಾಸಿಕ ಚಲನಚಿತ್ರ ದುರ್ಯೋಧನನ ಮತ್ತೊಂದು ಭಾಗವನ್ನು ತೆರೆದಿಟ್ಟಿದ್ದು, ಇದು 'ಡಿಬಾಸ್' ದರ್ಶನ್ ರವರ ಐವತ್ತನೆಯ ಸಿನಿಮಾ ಎನ್ನುವ ಹೆಗ್ಗಳಿಕೆ ಹೊಂದಿದೆ.

ದುರ್ಯೋಧನನಾಗಿ ದರ್ಶನ್ ಅಭಿನಯ ಕಣ್ಣಿಗೆ ಕಟ್ಟುವಂತಿದ್ದು ವೈಭವೋಪೇತವಾಗಿ ಮೂಡಿಬಂದಿದೆ. ಈ ಬಹುತಾರಾಗಣದ ಚಿತ್ರದಲ್ಲಿ ದ್ರೌಪದಿಯಾಗಿ ಸ್ನೇಹಾ, ಅರ್ಜುನನಾಗಿ ಸೋನು ಸೂದ್, ಭೀಷ್ಮನಾಗಿ ದಿವಂಗತ 'ರೆಬೆಲ್ ಸ್ಟಾರ್' ಅಂಬರೀಶ್, ದುರ್ಯೋಧನನಾಗಿ ದರ್ಶನ್, ಕರ್ಣನಾಗಿ ಅರ್ಜುನ್ ಸರ್ಜಾ, ಭೀಮನಾಗಿ ದಾನಿಶ್ ಅಖ್ತರ್, ಶ್ರೀಕೃಷ್ಣನಾಗಿ ವಿ. ರವಿಚಂದ್ರನ್, ಮೇಘನಾರಾಜ್, ಹರಿಪ್ರಿಯರಂತಹ ಅದ್ಭುತ ನಟನಟಿಯರಿದ್ದು, ಪ್ರತಿಯೊಬ್ಬರ ಪಾತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ದರ್ಶನ್ ರವರ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ. ಇದು ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ರವರ ಕೊನೆಯ ಚಿತ್ರವಾಗಿದೆ. ಶ್ರೀಮಂತಿಕೆಯ ಸಿನಿಮಾ ನಿರ್ಮಾಣಕ್ಕೆ ಹೆಸರಾದ ಮುನಿರತ್ನ ನಾಯ್ಡು ರವರ ಈ ಚಿತ್ರವನ್ನು ನಿರ್ಮಿಸಿದ್ದರು.
ದುರ್ಗಾಪ್ರಸಾದ್ ಕೇತ ಮತ್ತು ಜೀಮನ್ ಪುಲ್ಲೆಲಿ ರವರ ದೃಶ್ಯ ಪರಿಣಾಮಗಳನ್ನು ಅತ್ಯುತ್ತಮವಾಗಿ ತೋರಿಸುತ್ತದೆ ಮತ್ತು ಹರಿಕೃಷ್ಣರವರ ಮಧುರ ಗೀತೆಗಳು ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದು ಚಿತ್ರದ ಅಗತ್ಯವನ್ನು ಪೂರ್ಣಗೊಳಿಸಿದೆ. ಕಾರಣಾಂತರಗಳಿಂದ ಚಿತ್ರಮಂದಿರದಲ್ಲಿ ಈ ಅದ್ಭುತ ದೃಶ್ಯಕಾವ್ಯವನ್ನು ವೀಕ್ಷಿಸಲು ಅಸಾಧ್ಯವಾದ ಪ್ರೇಕ್ಷಕರಿಗಾಗಿ ಜೀ ವಾಹಿನಿ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ.


Click it and Unblock the Notifications











