ಕನ್ನಡ ಹೋರಾಟಗಾರರ ಪ್ರತಿಭಟನೆ: ಅಳುತ್ತಾ ಕ್ಷಮೆ ಕೇಳಿದ ಪ್ರಶಾಂತ್ ಸಂಬರ್ಗಿ
ಬಿಗ್ಬಾಸ್ ಕನ್ನಡ ಸೀಸನ್ 9 ಸ್ಪರ್ಧಿ ಪ್ರಶಾಂತ್ ಸಂಬರ್ಗಿ, ಕನ್ನಡ ಪರ ಹೋರಾಟಗಾರರ ಬಗ್ಗೆ ಆಡಿದ ಮಾತಿಗೆ ಪ್ರತಿಯಾಗಿ ಕ್ಷಮಾಪಣೆ ಕೇಳಿದ್ದಾರೆ.
ಬಿಗ್ಬಾಸ್ ಮನೆಯ ಮತ್ತೊಬ್ಬ ಸ್ಪರ್ಧಿ ರೂಪೇಶ್ ರಾಜಣ್ಣ ವಿರುದ್ಧ ಜಗಳವಾಡಿದ್ದ ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್ ಗುರೂಜಿ ಬಳಿ ಮಾತನಾಡುತ್ತಾ, ಕನ್ನಡ ಪರ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇದರ ವಿರುದ್ಧ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ, ಪ್ರಶಾಂತ್ ಸಂಬರ್ಗಿ ಹಾಗೂ ಕಲರ್ಸ್ ವಾಹಿನಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಪ್ರಶಾಂತ್ ಸಂಬರ್ಗಿಯನ್ನು ಬಿಗ್ಬಾಸ್ ಮನೆಯಿಂದ ಹೊರಗಟ್ಟುವಂತೆ ಒತ್ತಾಯ ಮಾಡಿದ್ದರು.
ಆದರೆ ಇದೀಗ, ಬಿಗ್ಬಾಸ್ ಮನೆಯೊಳಗಿರುವ ಪ್ರಶಾಂತ್ ಸಂಬರ್ಗಿ, ತಮ್ಮ ಹೇಳಿಕೆಯ ಕುರಿತು ಕ್ಷಮೆ ಕೇಳಿದ್ದಾರೆ. ಆ ವಿಡಿಯೋವನ್ನು ವಾಹಿನಿಯು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ, ಪ್ರಶಾಂತ್ ಸಂಬರ್ಗಿ, ಕನ್ನಡ ಪರ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಿದ್ದ ಎಪಿಸೋಡ್ನ ವಿಡಿಯೋವನ್ನು ವೂಟ್ನಿಂದ ಹಿಂತೆಗೆದಿದೆ.

ನಿಮ್ಮ ಮಾತು ಅನೇಕರಿಗೆ ನೋವುಂಟುಮಾಡಿದೆ: ಬಿಗ್ಬಾಸ್
ಬಿಗ್ಬಾಸ್ ಮನೆಯಲ್ಲಿ ಕನ್ಫೆಷನ್ ರೂಂಗೆ ಪ್ರಶಾಂತ್ ಸಂಬರ್ಗಿಯನ್ನು ಆಹ್ವಾನಿಸಿದ ಬಿಗ್ಬಾಸ್, ''ಮಂಗಳವಾರ ರಾತ್ರಿ, ನೀವೂ-ರೂಪೇಶ್ ರಾಜಣ್ಣ ಮಾತನಾಡುವಾಗ ಕನ್ನಡ ಹೋರಾಟಗಾರರ ಬಗ್ಗೆ ನೀವು ಆಡಿದ ಮಾತು, ಮತ್ತು ಅದರ ಧಾಟಿ, ಭಾಷೆಯನ್ನು ಪ್ರೀತಿಸುವ ಅನೇಕರಿಗೆ ನೋವನ್ನುಂಟು ಮಾಡಿದೆ. ಭಾಷೆಯ ಪರವಾಗಿ ನಿಲ್ಲುವ ಅನೇಕ ಪ್ರಾಮಾಣಿಕ ಕನ್ನಡಿಗರು ನಮ್ಮ ನಡುವೆ ಇದ್ದಾರೆ ಎಂಬುದು ನಿಮ್ಮ ಅರಿವಿನಲ್ಲಿದೆ ಎಂದು ಬಿಗ್ಬಾಸ್ ಭಾವಿಸುತ್ತಾರೆ'' ಎಂದು ಬಿಗ್ಬಾಸ್ ಹೇಳಿದ್ದಾರೆ.

ಕ್ಷಮೆ ಇರಲಿ, ಕ್ಷಮೆ ಇರಲಿ, ಕ್ಷಮೆ ಇರಲಿ: ಪ್ರಶಾಂತ್ ಸಂಬರ್ಗಿ
ಆಗ ಪ್ರಶಾಂತ್ ಸಂಬರ್ಗಿ, ''ಆಟದ ರಭಸದಲ್ಲಿ ನಾನು ಹಾಗೆ ಹೇಳಿದ್ದೇನೆ. ನನ್ನ ಮಾತಿನಿಂದ ಕನ್ನಡ ಹೋರಾಟಗಾರರು, ಕನ್ನಡವನ್ನು ಪ್ರೀತಿ ಮಾಡುವ ಕನ್ನಡಿಗರು, ಅವರಿಗೇನಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಕರ್ನಾಟಕದ ಜನತೆಗೂ ನನ್ನ ಮಾತು, ಒಬ್ಬ ವ್ಯಕ್ತಿಯ ವಿರುದ್ಧವೇ ಹೊರತು, ಇಡೀ ಕನ್ನಡ ಹೋರಾಟಗಾರರ ವಿರುದ್ಧ ಆಗಿರಲಿಲ್ಲ. ದಯವಿಟ್ಟು ಕ್ಷಮೆ ಇರಲಿ, ಕ್ಷಮೆ ಇರಲಿ, ಕ್ಷಮೆ ಇರಲಿ'' ಎಂದು ಕೇಳಿದ್ದಾರೆ.

ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ
''ರಾಜಣ್ಣ ಅವರನ್ನು ಮಾನಸಿಕವಾಗಿ ಕುಗ್ಗಿಸಿ ಮೇಲುಗೈ ಸಾಧಿಸಬೇಕು. ಆದರೆ ನನ್ನ ಮಾತು ಈ ಪರಿಣಾಮ ಬೀರುತ್ತದೆ ಎಂಬುದು ಗೊತ್ತಿರಲಿಲ್ಲ. ಕ್ಷಮಿಸಿ, ನನಗೆ ನನ್ನ ಮಾತಿನ ಬಗ್ಗೆ ಪಶ್ಚಾತಾಪ ಇದೆ. ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಮಾತಿನ ಭರದಲ್ಲಿ ಸಹಜವಾಗಿ ಬಂತು. ನಾನು ಮೇಲೋ, ಅವರು ಮೇಲೋ ಎಂಬ ಭರದಲ್ಲಿ ಮಾತುಕತೆ ನಡೆಯುತ್ತಿತ್ತು, ಆ ಭರದಲ್ಲಿ ಬಂದ ಮಾತುಗಳು ಅವು. ನನ್ನಿಂದ ತಪ್ಪಂದೂ ಆಗಿದೆ. ಅದಕ್ಕೆ ಕ್ಷಮೆ ಕೇಳುತ್ತಿದ್ದೇನೆ'' ಎಂದು ಕಣ್ಣೀರು ಹಾಕಿದರು ಪ್ರಶಾಂತ್ ಸಂಬರ್ಗಿ.

ಮುಂದುವರೆದ ಪ್ರತಿಭಟನೆ
'ಕನ್ನಡ ಹೋರಾಟಗಾರರಿಗೆ ಚೆನ್ನಾಗಿ ನೀರು ಕುಡಿಸಿದ್ದೇನೆ, ಒಬ್ಬನನ್ನೂ ಬಿಟ್ಟಿಲ್ಲ' ಎಂದು ಪ್ರಶಾಂತ್ ಸಂಬರ್ಗಿ ಬಿಗ್ಬಾಸ್ ಮನೆಯಲ್ಲಿ ಹೇಳಿದ್ದರು, ಈ ಮಾತಿನ ವಿರುದ್ಧ ಕನ್ನಡಪರ ಹೋರಾಟಗಾರರು ಪ್ರತಿಭಟಿಸುತ್ತಿದ್ದಾರೆ. ಬಿಡದಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣವಾಗುತ್ತಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಮುಂದೆ ಸುಮಾರ 15 ಹೆಚ್ಚು ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು ಪ್ರಶಾಂತ್ ಸಂಬರ್ಗಿ ಯನ್ನೂ ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಹೊರಹಾಕುವಂತೆ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಗುರುವಾರ ಪ್ರಾರಂಭವಾಗಿರುವ ಧರಣಿ, ಶುಕ್ರವಾರವೂ ಮುಂದುವರೆದಿದೆ.


Click it and Unblock the Notifications











