ಕೌಟುಂಬಿಕ ಕೋರ್ಟ್ ನಲ್ಲಿ ಮಾಳವಿಕಾ ಅವಿನಾಶ್!
ಇದು ಅಚ್ಚರಿ ಅನ್ನಿಸಿದರೂ ನಿಜ. ಕರ್ನಾಟಕದ ಟಿವಿ ನೋಡುವ ಸಾಕಷ್ಟು ಹೆಣ್ಣುಮಕ್ಕಳು ಮಾಳವಿಕಾ ಅವಿನಾಶ್ ಅವರನ್ನು ಇಷ್ಟಪಡುತ್ತಾರೆ. 'ಮಾಯಾಮೃಗ' ಸೀರಿಯಲ್ಲು ಅವರಿಗೆ ತುಂಬಾ ಹೆಸರು ಕೊಟ್ಟಿದ್ದು ಗೊತ್ತೇ ಇದೆ. ಈಗ ಮತ್ತೊಮ್ಮೆ ಮಾಳವಿಕಾ ಕಿರುತೆರೆ ಅಂಗಳಕ್ಕೆ ಅಡಿ ಇಡುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಅಪಾರ ಜನಪ್ರಿಯತೆಗಳಿಸಿಕೊಂಡಿದ್ದ 'ಬದುಕು ಜಟಕಾಬಂಡಿ' ರಿಯಾಲಿಟಿ ಶೋ ಇದೀಗ ಪುನಃ ಪ್ರಾರಂಭವಾಗುತ್ತಿದೆ. ಈ ಬಾರಿಯೂ ಮಾಳವಿಕಾ ನಿರೂಪಕರು. 'ಬದುಕು ಜಟಕಾ ಬಂಡಿ' ಕಾರ್ಯಕ್ರಮ ಒಂಥರಾ ಕೌಟುಂಬಿಕ ಕೋರ್ಟ್ ಇದ್ದಂತೆ. ಕ್ಯಾಮೆರಾ ಎದುರೇ ಪಂಚಾಯ್ತಿ. ಅಲ್ಲೇ ಪರಿಹರಿಸುವ ಕಾರ್ಯಕ್ರಮವಿದು. ಅಂದರೆ ಫ್ಯಾಮಿಲಿ ಕೋರ್ಟ್ ನಲ್ಲಿ ಮಾಳವಿಕಾ ಇದ್ದಂತೆ ತಾನೆ!

ಸಮಸ್ಯೆ, ಸಂಘರ್ಷ, ದುಃಖಗಳ ಬೆಟ್ಟ ಅಗೆದು ಬದುಕಿನ ಸತ್ಯ ಏನಿರುತ್ತದೆ ನೋಡೋಣ. ಬರಗಟ್ಟಿದ ಬದುಕಿಗೆ ಸಮಾಧಾನದ ಮಳೆ ಸುರಿಸೋಣ. ಬನ್ನಿ ಹೊಸ ಬದುಕಿನ ಜಟಕಾ ಬಂಡಿ ಎಳೆಯೋಣ ಎಂದು ಮಾಳವಿಕಾ ಅವಿನಾಶ್ ಅವರು ಸ್ಫುಟವಾಗಿ ಈ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ.
ಎರಡು ವರ್ಷಗಳ ಬಳಿಕ ಮತ್ತೆ ಈ ಜನಪ್ರಿಯ ಶೋ ಆರಂಭವಾಗುತ್ತಿದೆ. ಇದೇ ಆಗಸ್ಟ್ 24ರಿಂದ ರಾತ್ರಿ 8 ಗಂಟೆಗೆ ಪ್ರತೀ ಶನಿವಾರ ಮತ್ತು ಭಾನುವಾರ. ಸಾಮಾಜಿಕ ಕಳಕಳಿಯ ಆಶಯ ಈ ಕಾರ್ಯಕ್ರಮದ್ದು. ಈ ಹಿಂದೆ ಸಾಕಷ್ಟು ಸಲ ಕಾರ್ಯಕ್ರಮದಲ್ಲಿ ನಾವು ಯಶಸ್ಸು ಗಳಿಸಿದ್ದೇವೆ. ಈ ಬಾರಿಯೂ ಅದೇ ಸಾಮಾಜಿಕ ಕಾಳಜಿಯೊಂದಿಗೆ ಬರುತ್ತಿದ್ದೇವೆ ಎನ್ನುತ್ತವೆ ಚಾನಲ್ ಮೂಲಗಳು.
ನೂರಾರು ಒಡೆದ ಸಂಸಾರಗಳನ್ನು ಒಂದುಗೂಡಿಸುವಲ್ಲಿ ಈ ಕಾರ್ಯಕ್ರಮ ಪ್ರಮುಖ ಪಾತ್ರವಹಿಸಿತ್ತು. ಪ್ರಚಲಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೊಸ ಟ್ರೆಂಡ್ ಶುರು ಮಾಡಿದ್ದ 'ಬದುಕು ಜಟಕಾಬಂಡಿ' ರಾಜ್ಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಟ್ಟಿತ್ತು. ಈ ಬಾರಿಯೂ ಆ ರೀತಿಯ ವಿಶೇಷಗಳನ್ನು ನಿರೀಕ್ಷಿಸಬಹುದು. (ಒನ್ಇಂಡಿಯಾ ಕನ್ನಡ)


Click it and Unblock the Notifications











