ಸುವರ್ಣ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಲಿಮ್ಕಾ ದಾಖಲೆ
ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮ ಕಳೆದೆರಡು ತಿಂಗಳಿಂದ ಭರ್ಜರಿಯಾಗಿ ಮೂಡಿಬರುತ್ತಿದೆ. ಸಿಟಿ ಲೈಫ್ ನೋಡಿದ್ದ ಹುಡ್ಗೀರು ಹಟಕ್ಕೆ ಬಿದ್ದವರಂತೆ ಹಳ್ಳಿ ಜೀವನಕ್ಕೆ ಒಗ್ಗಿಕೊಂಡಿದ್ದಾರೆ.
ಆರಂಭದಲ್ಲಿ ಕಷ್ಟ ಅನ್ನಿಸಿದರೂ ಬರುಬರುತ್ತಾ ಅವರು ಹಳ್ಳಿ ಜೀವನವನ್ನು ಸವಿಯುತ್ತಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಫ್, ಮೊಬೈಲ್ ಇಲ್ಲದೆ ಜೀವನ ಕಳೆಯುತ್ತಾ ಹೊಸ ಜೀವನ ರೂಪಿಸಿಕೊಂಡಿದ್ದಾರೆ. ಅಂದಹಾಗೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಮೂರನೇ ಸೀಸನ್ ನಡೆಯುತ್ತಿರುವುದು ಕೆ.ಆರ್. ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ. [ಪ್ಯಾಟೆ ಹುಡ್ಗೀರ್ ಜೊತೆ ಪ್ಯಾಟೆ ಅಮ್ಮಂದಿರ ಹಳ್ಳಿ ಲೈಫು]

ಹತ್ತು ಮಂದಿ ಸ್ಪರ್ಧಿಗಳಲ್ಲಿ ವಾರಕ್ಕೊಬ್ಬರಂತೆ ಎಲಿಮಿನೇಟ್ ಆಗಿ ಈಗ ಉಳಿದುಕೊಂಡಿರುವುದು ಕೇವಲ ನಾಲ್ಕು ಮಂದಿ ಮಾತ್ರ. ಬೆಂಗಳೂರಿನಲ್ಲಾಗಿದ್ದರೆ ಗಂಟೆಗೊಮ್ಮೆ, ಅರ್ಧಗಂಟೆಗೊಮ್ಮೆ ಮೇಕಪ್ ಮಾಡಿಕೊಳ್ಳುತ್ತಿದ್ದರೋ ಏನೋ. ರಾಯಸಮುದ್ರದಲ್ಲಿ ಮೇಕಪ್ ಗೆ ಪ್ಯಾಕಪ್ ಹೇಳಿ ಥೇಟ್ ಹಳ್ಳಿ ಹುಡುಗೀರ್ ಆಗಿದ್ದಾರೆ.
"ಇಲ್ಲಿಗೆ ಬರಬೇಕಾದರೆ ಇವರು ತಂದಿದ್ದ ಲಗೇಜ್ ನಲ್ಲಿ ಮೇಕಪ್ ಕಿಟ್ ಗಳು, ಚಾಕೋಲೇಟ್ ಗಳು, ಮೊಬೈಲ್ ಎಲ್ಲ ಸರಕು ಸರಂಜಾಮು ಇದ್ದವು. ಅವೆಲ್ಲವನ್ನೂ ಪಾರ್ಸಲ್ ಮಾಡಿ ಮನೆಗೆ ಕಳುಹಿಸಿದ್ದೇವೆ. ಇವರು ಬರಬೇಕೆಂದರೇನೇ ನಾಗಮಂಗಲದಲ್ಲೇ ಇಳಿಸಿಬಿಟ್ಟೆವು. ರಾಯಸಮುದ್ರ ಊರನ್ನು ನೀವೇ ಹುಡುಕಿಕೊಂಡು ಬನ್ನಿ ಎಂಬುದೇ ಇವರಿಗೆ ಮೊದಲ ಸವಾಲಾಗಿತ್ತು" ಎಂದು ವಿವರ ನೀಡಿದರು ಶೋನ ನಿರೂಪಕ ಸಂತೋಷ್.
ಈಗಾಗಲೆ ಇವರೆಲ್ಲಾ ಸಾಕಷ್ಟು ಟಾಸ್ಕ್ ಗಳನ್ನು ಪೂರೈಸಿದ್ದಾರೆ. ಹೊಸದಾಗಿ ಏನಾದರೂ ಮಾಡಬೇಕು ಎಂದು ಹೊರಟಾಗ ಇವರಿಗೆ ಹೊಳೆದದ್ದೇ ಕರ್ನಾಟಕದ ಜನಾನುರಾಗಿ ರಾಗಿಮುದ್ದೆ. ಇನ್ನೇಕೆ ತಡ ಎಂದು ರಾಗಶ್ರೀ, ರವಿಕಾ, ಅಕ್ಷಿತಾ ಹಾಗೂ ದೀಪ್ತಿ ತೀರ್ಮಾನಿಸಿದರು.

ರಾಗಿಮುದ್ದೆಯನ್ನು ದಾಖಲೆ ಪ್ರಮಾಣದಲ್ಲೇ ಮಾಡೋಣ ಅನ್ನಿಸಿ ಇದಕ್ಕಾಗಿ ಊರಿನ ಮನೆಮನೆಗೆ ಅಲೆದು ರಾಗಿಯನ್ನು ಸಂಗ್ರಹಿಸಿದರು. ರಾಮಸಮುದ್ರದ ಜನ ನೀವು ಕೇಳೋದು ಹೆಚ್ಚಾ ನಾವು ಕೊಡೋದು ಹೆಚ್ಚಾ ಎಂದು ಮಣಗಟ್ಟಲೆ ರಾಗಿಯನ್ನು ಇವರ ಜೋಳಿಗೆಗೆ ಸುರಿದರು.
ಇವರೆಲ್ಲಾ 1000 ಕೆ.ಜಿ ಸಂಗ್ರಹಿಸೋಣ ಎಂದು ಗುರಿ ಇಟ್ಟುಕೊಂಡಿದ್ದರು. ಆದರೆ ಹಳ್ಳಿ ಜನರ ಉದಾರ ಮನೋಭಾವದಿಂದ ಕೊಟ್ಟ ರಾಗಿಯನ್ನು ತಕ್ಕಡಿಗೆ ಹಾಕಿದಾಗ ತೂಗಿದ್ದು ಬರೋಬ್ಬರಿ 1,500 ಕೆ.ಜಿ. (15 ಕ್ವಿಂಟಾಲ್). ರಾಗಿಯೇನೋ ಸಂಗ್ರಹವಾಯಿತು. ರಾಗಿಗೆ ನಾಟಿಕೋಳಿ ಸಾರು ಸೂಪರ್ ಅನ್ನಿಸಿತು.
ಆದರೆ ಅಷ್ಟೊಂದು ಕೋಳಿಗಳು ಊರಲ್ಲಿ ಎಲ್ಲಿರುತ್ತವೆ. ಅದು ಕಷ್ಟಸಾಧ್ಯ ಅನ್ನಿಸಿ ನಾಟಿಕೋಳಿ ಸಾರನ್ನು ಕೈಬಿಟ್ಟರು. ಆ ಊರಿನ ಬಡಪಾಯಿ ಕೋಳಿಗಳೂ ಬಚಾವಾದವೆನ್ನಿ. ಕಡೆಗೆ ಬೇಳೆ ಬೇಯಿಸಿ ಸಾರು ಮಾಡಿದರು.
ಸಂಗ್ರಹಿಸಿದ ರಾಗಿಯಿಂದ ಮುದ್ದೆ ಕಾರ್ಯ ಶುರುವಾಯಿತು. ಹದಿಮೂರು ಮಂದಿ ನುರಿತ ಬಾಣಸಿಗರ ಸಹಾಯದಿಂದ ಈ ನಾಲ್ಕು ಮಂದಿ ಪ್ಯಾಟೆ ಹುಡ್ಗೀರ್ ಮುದ್ದೆ ತೊಳೆಸುವ ಕಾರ್ಯದಲ್ಲಿ ತೊಡಗಿಕೊಂಡರು. ಇವರ ರಾಗಿಮುದ್ದೆಗಳು 8 ಅಡಿ ಎತ್ತರ 6 ಅಡಿ ಅಗಲಕ್ಕೆ ತಯಾರಾದವು.

ಇದುವರೆಗೂ ಇಷ್ಟು ದೊಡ್ಡ ಮಟ್ಟದಲ್ಲಿ ಯಾರೂ ಮುದ್ದೆ ಮಾಡಿಲ್ಲ. ಹಾಗಾಗಿ ಇದನ್ನು ಲಿಮ್ಕಾ ದಾಖಲೆಗೆ ಕಳುಹಿಸಲಾಗಿದೆ. ರಾಗಿ ಎನ್ನುವುದು ಅದೊಂದು ಆಹಾರ ಧಾನ್ಯ ಎಂಬುದಕ್ಕಿಂತಲೂ ಅದು ಕರ್ನಾಟಕದ ಸಂಸ್ಕೃತಿ. ನಗರ ಪ್ರದೇಶಗಳಲ್ಲಿ ಇದರ ಬಗ್ಗೆ ಕೀಳರಿಮೆ ಇದೆ. ಅದನ್ನು ದೂರ ಮಾಡಬೇಕು ಎಲ್ಲರೂ ರಾಗಿಯನ್ನು ಬಳಸುವಂತಾಗಬೇಕು. ಪಿಜ್ಜಾ, ಬರ್ಗರ್ ನಷ್ಟೇ ರಾಗಿಯ ಬಳಕೆಯನ್ನು ಜನಪ್ರಿಯಗೊಳಿಸಬೇಕು ಎಂಬುದು ನಮ್ಮ ಒತ್ತಾಸೆ ಎಂದರು ಸುವರ್ಣ ವಾಹಿನಿಯ ಪ್ರೊಗ್ರಾಮಿಂಗ್ ಹೆಡ್ ಸುಧೀಂದ್ರ ಭಾರದ್ವಾಜ್.
ಅದೆಲ್ಲಾ ಸರಿ ಈ ಬೃಹತ್ ರಾಗಿಮುದ್ದೆಯನ್ನು ಏನು ಮಾಡ್ತೀರಿ ಎಂದು ಕೇಳಿದಾಗ, ಮೊದಲು ನಾವೂ ರಾಗಿ ರುಚಿ ಸವಿಯುತ್ತೇವೆ. ಬಳಿಕ ರಾಗಿಮುದ್ದೆಗಳನ್ನು ಸುತ್ತಮುತ್ತಲಿನ ಹಳ್ಳಿಗಳಿಗೆ ವಿತರಣೆ ಮಾಡುತ್ತಿದ್ದೇವೆ ಎಂದು ವಿವರ ನೀಡಿದರು ವಾಹಿನಿಯ ನಾನ್ಫಿಕ್ಷನ್ ಹೆಡ್ ತ್ಯಾಗರಾಜ್ ರವಿಚಂದ್ರ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











