ರಿಯಾಲಿಟಿ ಶೋಗಳ ಬಂಡವಾಳ ಬಯಲು ಮಾಡಿದ ಮಾಜಿ ಸ್ಪರ್ಧಿ
ರಿಯಾಲಿಟಿ ಶೋಗಳಿಗೂ ಧಾರಾವಾಹಿಗಳಿಗೂ ಹೆಚ್ಚಿನ ವ್ಯತ್ಯಾಸ ಉಳಿದಿಲ್ಲ. ಅತೀವ ಸೆಂಟಿಮೆಂಟ್, ಬಡತನದ ವೈಭವೀಕರಣ, ನಿರೂಪಕರ, ಜಡ್ಜ್ಗಳ ಅತಿರೇಕದ ವರ್ತನೆಗಳು, ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನಗಳು, ಸ್ಪರ್ಧಿಗಳ ನಡುವೆ ನಕಲಿ ಪ್ರೇಮಕತೆ ಹುಟ್ಟುಹಾಕುವುದು, ಹಾಡು, ಕುಣಿತಕ್ಕಿಂತಲೂ ಕಣ್ಣೀರು ಹೆಚ್ಚು ಹರಿಸುವುದು ಇವೆಲ್ಲವೂ ಬಹುತೇಕ ರಿಯಾಲಿಟಿ ಶೋಗಳ ಸಾಮಾನ್ಯ ಅಂಶಗಳು.
ಇದೀಗ ಮಾಜಿ ರಿಯಾಲಿಟಿ ಶೋ ವಿನ್ನರ್ ಒಬ್ಬರು ರಿಯಾಲಿಟಿ ಶೋಗಳ ಮೇಲೆ ಹರಿಹಾಯ್ದಿದ್ದಾರೆ. ರಿಯಾಲಿಟಿ ಶೋಗಳ ಬಂಡವಾಳ ಬಯಲು ಮಾಡಿದ್ದಾರೆ.
'ಇಂಡಿಯನ್ ಐಡಲ್' ಹಿಂದಿಯ ಹಳೆಯ ಮತ್ತು ಜನಪ್ರಿಯ ರಿಯಾಲಿಟಿ ಶೋ. ಅತ್ಯುತ್ತಮ ಹಾಡುಗಾರರು ಈ ಶೋನಲ್ಲಿ ಸ್ಪರ್ಧಿಗಳಾಗಿದ್ದಾರೆ, ಗೆದ್ದ ಸ್ಪರ್ಧಿಗಳು ಇಂದು ಬಹು ಜನಪ್ರಿಯ ಹಾಡುಗಾರರಾಗಿದ್ದಾರೆ. 2004 ರಲ್ಲಿ ಇಂಡಿಯನ್ ಐಡಲ್ನ ಮೊದಲ ಸೀಸನ್ ಪ್ರಸಾರವಾಗಿದ್ದಾಗ ಶೋನ ವಿನ್ನರ್ ಆಗಿದ್ದ ಅಭಿಜಿತ್ ಸಾವಂತ್ ಇದೀಗ ರಿಯಾಲಿಟಿ ಶೋನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ರಿಯಾಲಿಟಿ ಶೋಗಳು ಲವ್ ಸ್ಟೋರಿಗಳು, ಬಡತನದ ವೈಭವೀಕರಣ ಇವನ್ನಷ್ಟೆ ನೆಚ್ಚಿಕೊಂಡಿವೆ. ನಿಜವಾದ ಪ್ರತಿಭೆ ಅವರಿಗೆ ಬೇಕಿಲ್ಲ' ಎಂದಿದ್ದಾರೆ.
'ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳಿಗೆ ಪ್ರತಿಭೆಗಿಂತಲೂ ಹೆಚ್ಚಾಗಿ ಕರುಳು ಹಿಂಡುವ ಕತೆ ಬೇಕಾಗಿದೆ ಅಷ್ಟೆ. ಬಡವರು, ಅನಾಥರು, ಕಷ್ಟದಲ್ಲಿರುವವರು ಇಂಥಹವರನ್ನು ಹುಡುಕಿ ಕರೆತರುತ್ತಿದ್ದಾರೆ ಅವರಿಗೆ ಪ್ರತಿಭೆ ಬೇಕಿಲ್ಲ' ಎಂದಿದ್ದಾರೆ ಅಭಿಜಿತ್.

'ಪ್ರಾದೇಶಿಕ ಭಾಷೆ ಶೋಗಳಲ್ಲಿ ಈ ಪರಿಸ್ಥಿತಿ ಇಲ್ಲ'
'ಪ್ರಾದೇಶಿಕ ಭಾಷೆಗಳಲ್ಲಿ ಇಂಥಹಾ ಪರಿಸ್ಥಿತಿ ಇಲ್ಲ. ಅಲ್ಲಿ ಪ್ರೇಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿಯ ಹಿನ್ನೆಲೆಗೆ ಬದಲು ಅವರ ನಿಜವಾದ ಪ್ರತಿಭೆಯನ್ನು ಮೆಚ್ಚಿ ಕಾರ್ಯಕ್ರಮ ವೀಕ್ಷಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ಆದರೆ ಹಿಂದಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯ ಹಿನ್ನೆಲೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ' ಎಂದಿದ್ದಾರೆ ಅಭಿಜಿತ್ ಸಾವಂತ್.

ತಮ್ಮದೇ ಉದಾಹರಣೆ ನೀಡಿದ ಅಭಿಜಿತ್ ಸಾವಂತ್
ಅವರು ಸ್ಪರ್ಧಿಯಾಗಿದ್ದಾಗಿನ ಉದಾಹರಣೆ ನೀಡಿದ ಅಭಿಜಿತ್, 'ನಾನು ಸ್ಪರ್ಧಿಯಾಗಿದ್ದಾಗ ನನ್ನ ಪ್ರದರ್ಶನ ನೋಡಿ ಜಡ್ಜ್ಗಳೇ ಚರ್ಚಿಸಿ ನನಗೆ ಇನ್ನೊಂದು ಅವಕಾಶ ಕೊಟ್ಟಿದ್ದರು. ಅದೇ ಈಗಿನ ಸಮಯದಲ್ಲಾಗಿದ್ದಿದ್ದರೆ ಅದನ್ನು ಹಲವು ಕೋನಗಳಲ್ಲಿ 'ಡ್ರಾಮಟೈಸ್' ಮಾಡಿ ತೋರಿಸಿ ಎಪಿಸೋಡ್ ಪೂರ್ತಿ ಎಳೆದಿರುತ್ತಿದ್ದರು. ರಿಯಾಲಿಟಿ ಶೋಗಳು ಹೀಗೆ ಆಗಿರುವುದಕ್ಕೆ ಪ್ರೇಕ್ಷಕರೂ ಕಾರಣ ಎಂದಿರುವ ಅಭಿಜಿತ್, 'ಹಿಂದಿ ಪ್ರೇಕ್ಷಕರಿಗೆ ಮಸಾಲೆ ಅಂಶಗಳು ಹೆಚ್ಚು ಬೇಕು ಹಾಗಾಗಿ ರಿಯಾಲಿಟಿ ಶೋಗಳು ಅದನ್ನೇ ಮುಖ್ಯವಾಗಿಟ್ಟುಕೊಂಡು ಶೋ ಮಾಡುತ್ತಿವೆ' ಎಂದಿದ್ದಾರೆ.

ಕಿಶೋರ್ ಕುಮಾರ್ ಮಗ ಅಮಿತ್ ಅತಿಥಿಯಾಗಿದ್ದರು
ಇತ್ತೀಚೆಗೆ ಇಂಡಿಯನ್ ಐಡಲ್ನಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಸ್ಮರಣಾರ್ಥ ವಿಶೇಷ ಎಪಿಸೋಡ್ ಮಾಡಲಾಗಿತ್ತು. ಎಪಿಸೋಡ್ಗೆ ಕಿಶೋರ್ ಕುಮಾರ್ ಪುತ್ರ ಅಮಿತ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಆ ಎಪಿಸೋಡ್ ಚೆನ್ನಾಗಿ ಮೂಡಿಬರಲಿಲ್ಲ. ಇದಕ್ಕೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲರನ್ನೂ ಹೊಗಳುವಂತೆ ಆಯೋಜಕರು ಹೇಳಿದ್ದರು: ಅಮಿತ್
ಶೋನ ನಂತರ ಮಾಧ್ಯಮದೊಟ್ಟಿಗೆ ಮಾತನಾಡಿದ್ದ ಅಮಿತ್ ಕುಮಾರ್, 'ನನಗೆ ಆ ಶೋ ಸ್ವಲ್ಪವೂ ಇಷ್ಟವಾಗಲಿಲ್ಲ. ಅಲ್ಲಿಗೆ ಹೋದಮೇಲೆ ಅವರು ಹೇಳಿದಂತೆ ನಾನು ಮಾಡಿದೆ ಅಷ್ಟೆ. ಸ್ಪರ್ಧಿಗಳು ಹೇಗೇ ಹಾಡಲಿ ಅವರನ್ನು ಹೊಗಳಬೇಕು ಎಂದು ಆಯೋಜಕರು ಮೊದಲೇ ಹೇಳಿಬಿಟ್ಟಿದ್ದರು ನಾನು ಹಾಗೆಯೇ ಮಾಡಿದೆ' ಎಂದಿದ್ದಾರೆ ಅಮಿತ್ ಕುಮಾರ್.

ಮಧ್ಯದಲ್ಲಿಯೇ ನಿಲ್ಲಿಸಿಬಿಡೋಣ ಎಂದುಕೊಂಡಿದ್ದೆ: ಅಮಿತ್
'ಕಾರ್ಯಕ್ರಮ ಆರಂಭವಾಗುವುದಕ್ಕೆ ಮೊದಲೇ ನಾನು ಸ್ಕ್ರಿಪ್ಟ್ ಇದ್ದರೆ ಕೊಟ್ಟುಬಿಡಿ ಎಂದು ವ್ಯಂಗ್ಯವಾಗಿ ಕೇಳಿದ್ದೆ. ನನಗಂತೂ ಎಪಿಸೋಡ್ ಅನ್ನು ಅರ್ಧಕ್ಕೆ ನಿಲ್ಲಿಸಿಬಿಡೋಣ ಎನ್ನಿಸಿತ್ತು. ಮುಂದಿನ ಬಾರಿ ಅವರು ಕಿಶೋರ್ ಕುಮಾರ್ ಸ್ಮರಣಾರ್ಥ ಕಾರ್ಯಕ್ರಮ ಮಾಡಿದಾದಲ್ಲಿ ಈ ಬಾರಿ ಮಾಡಿದಂತೆ ಕೆಟ್ಟದಾಗಿ ಮಾಡುವುದು ಬೇಡ' ಎಂದಿದ್ದಾರೆ.


Click it and Unblock the Notifications











