ಸತ್ಯಗೆ ಧೈರ್ಯ ತುಂಬಿದ ಜಾನಕಿ: ಮಾಳವಿಕಾ ಸಿಕ್ಕಿ ಹಾಕಿಕೊಳ್ಳುತ್ತಾಳಾ..?
'ಸತ್ಯ' ಧಾರಾವಾಹಿಯಲ್ಲಿ ಕಾರ್ತಿಕ್ ಬಂದಿರುವ ಸಂಕಷ್ಟದಿಂದ ಪಾರಾಗಲು ದಾರಿ ಹುಡುಕುತ್ತಿದ್ದಾನೆ. ಆದರೆ ಅವನಿಗೆ ದಾರಿಯೇ ಕಾಣುತ್ತಿಲ್ಲ. ಮಾಳವಿಕಾಗೆ ಕೊಡಲು 25 ಲಕ್ಷ ರೂ. ಮಾತ್ರವೇ ಅರೇಂಜ್ ಆಗಿದೆ. ಉಳಿದ ಹಣಕ್ಕಾಗಿ ಪರದಾಡುತ್ತಿದ್ದಾನೆ.
ಈ ವಿಚಾರವನ್ನು ತಿಳಿದ ಕೀರ್ತನಾ ಮತ್ತು ಸುಹಾಸ್ ಪ್ಲ್ಯಾನ್ ಮಾಡಿದ್ದಾರೆ. ಕಾರ್ತಿಕ್ ಮೇಲೆ ಮತ್ತಷ್ಟು ಅಪವಾದ ಬರಲಿ ಎಂದು ಉಳಿದ 25 ಲಕ್ಷ ಹಣವನ್ನು ಮನೆಯಲ್ಲಿ ತಂದಿಟ್ಟಿದ್ದಾರೆ. ಅದೂ ಕೂಡ ಲಕ್ಷ್ಮಣ ಚಿಕ್ಕಪ್ಪನ ರೂಮಿನಲ್ಲಿ ಹಣವಿಟ್ಟಿದ್ದಾರೆ.
ಈ ವಿಚಾರವನ್ನು ಬೇಕೆಂದೇ ಕಾರ್ತಿಕ್ ಇರುವ ಕಡೆಗೆ ಬಂದು ಜೋರಾಗಿ ಮಾತನಾಡಿದ್ದಾರೆ. ಕಬೋರ್ಡ್ನಲ್ಲಿ ಹಣ ವಿಟ್ಟಿರುವ ಬಗ್ಗೆ ಕೀರ್ತನಾ ಹಾಗೂ ಸುಹಾಸ್ ಮಾತನಾಡುವುದನ್ನು ಕಾರ್ತಿಕ್ ಕೇಳಿಸಿಕೊಳ್ಳುತ್ತಾನೆ.

ಹಣ ಕದ್ದ ಕಾರ್ತಿಕ್
ರಾತ್ರಿ ಎಲ್ಲರೂ ಮಲಗಿದ ಮೇಲೆ ಕಾರ್ತಿಕ್ ಹಣ ಕದಿಯಲು ಮುಂದಾಗುತ್ತಾನೆ. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಕೀರ್ತನಾ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಾಳೆ. ಕಾರ್ತಿಕ್, ಲಕ್ಷ್ಮಣನ ರೂಮಿಗೆ ಹೋಗಿ ಹಣವನ್ನು ಕದ್ದು ತರುತ್ತಾನೆ. ಇದನ್ನೆಲ್ಲಾ ಸಂಪೂರ್ಣವಾಗಿ ರೆಕಾರ್ಡ್ ಮಾಡಿಕೊಂಡ ಕೀರ್ತನಾ, ತಮ್ಮನ ಮೇಲೆ ಆರೋಪ ತರಲು ಮುಂದಾಗಿದ್ದಾಳೆ. ಆಫೀಸ್ ವಿಚಾರದಲ್ಲಿ ಎಲ್ಲರೂ ಸುಹಾಸ್ ಹಾಗೂ ಕೀರ್ತನಾಗೆ ಬೈದಿದ್ದಕ್ಕೆ ಈಗ ಕೀರ್ತನಾ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಸತ್ಯ, ಕಾರ್ತಿಕ್ನನ್ನು ಎಲ್ಲದರಿಂದಲೂ ಬಚಾವ್ ಮಾಡುತ್ತಾಳಾ ಎಂಬುದು ಗೊತ್ತಿಲ್ಲ.

ಸತ್ಯಳಿಂದ ದೂರ ಉಳಿದ ಕಾರ್ತಿಕ್
ಕಾರ್ತಿಕ್ ಸದ್ಯ ಸತ್ಯಳಿಂದ ದೂರ ಉಳಿದಿದ್ದಾನೆ. ಸತ್ಯ ಏನನ್ನೇ ಕೇಳಿದರೂ, ಕೋಪ ಮಾಡಿಕೊಳ್ಳುತ್ತಿದ್ದಾನೆ. ತಾನು ಸ್ವಂತ ಬ್ಯುಸಿನೆಸ್ ಮಾಡಲು ಒದ್ದಾಡುತ್ತಿರುವುದಾಗಿ ಸುಳ್ಳು ಹೇಳುತ್ತಾನೆ. ಆದರೆ ಸತ್ಯಗೆ ಮಾಳವಿಕಾ ಬ್ಲ್ಯಾಕ್ ಮೇಲ್ ಮಾಡುತ್ತಿರುವ ವಿಚಾರ ಗೊತ್ತಿರುತ್ತದೆ. ಸತ್ಯ ಎಷ್ಟು ಕೇಳಿದರೂ ಕಾರ್ತಿಕ್ ಮಾತ್ರ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಕಾರ್ತಿಕ್ ಹಣವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಮಾಳವಿಕಾ ಹೇಳಿದ ಜಾಗಕ್ಕೆ ಹೊರಡುತ್ತಾನೆ. ಅಲ್ಲಿಗೆ ಮಾಳವಿಕಾ ಕೂಡ ಬರುತ್ತಾಳೆ. ಆದರೆ, ಕಾರ್ತಿಕ್ನನ್ನು ಈಗಲಾದರೂ ಸತ್ಯ ಬಚಾವ್ ಮಾಡುತ್ತಾಳಾ ಎಂಬುದೇ ಕುತೂಹಲವಾಗಿದೆ.

ಅಮ್ಮನ ಮಾತುಗಳಿಂದ ಧೈರ್ಯ
ಅಮ್ಮನ ಜೊತೆಗೆ ಮಾತನಾಡಿದ ಸತ್ಯ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾಳೆ. ಜಾನಕಿ, ಸತ್ಯಗೆ ಸಮಾಧಾನ ಮಾಡುತ್ತಾಳೆ. ನಿನ್ನ ಗಂಡನ ಮೇಲೆ ನಿನಗೆ ನಂಬಿಕೆ ಇದ್ದರೆ ಸಾಕು. ಯಾರ ಮಾತಿಗೂ ಬೆಲೆ ಕೊಡಬೇಡ. ಕಾರ್ತಿಕ್ಗೆ ನೀನು ಧೈರ್ಯ ಕೊಡು. ಮನೆಯವರಿಗೆ ಸತ್ಯವನ್ನು ಅರ್ಥ ಮಾಡಿಸು. ನಿನ್ನ ಕೈನಲ್ಲಿ ಇದೆಲ್ಲವೂ ಸಾಧ್ಯ ಎಂದು ಜಾನಕಿ ಸಮಾಧಾನವಾಗಿ ಹೇಳುತ್ತಾಳೆ. ಸತ್ಯಗೆ ತನ್ನ ತಾಯಿಯ ಮಾತುಗಳನ್ನು ಕೇಳಿ ಧೈರ್ಯ ಬರುತ್ತದೆ. ನಾನೇ ಎಲ್ಲವನ್ನೂ ಮ್ಯಾನೇಜ್ ಮಾಡುತ್ತೇನೆ ಎಂದು ಹೇಳುತ್ತಾಳೆ. ಆದರೆ, ಸತ್ಯ ಹಾಗೂ ರಾಕಿ, ಮಾಳವಿಕಾಳನ್ನು ಹಿಡಿಯುವಲ್ಲಿ ಸಕ್ಸಸ್ ಆಗುತ್ತಾರಾ ಗೊತ್ತಿಲ್ಲ.

ಎರಡು ಲಕ್ಷಕ್ಕೆ ಟೋಪಿ ಬೀಳುತ್ತಾ..?
ಇತ್ತ ಜಗನ್ನಾಥ, ಬಾಲ ಕೊಟ್ಟ ಫೇಕ್ ಚೆಕ್ ಅನ್ನು ಹಿಡಿದು ಊರೆಲ್ಲಾ ತಿರುಗಾಡುತ್ತಿದ್ದಾನೆ. ಅದರಲ್ಲಿನ ಹಣವನ್ನು ಡ್ರಾ ಮಾಡಲು ಬಾಲ ಹೇಳಿದಂತೆ ಗೋವಿಂದ ಎಂಬುವರನ್ನು ಭೇಟಿ ಮಾಡಿದ್ದಾನೆ. ಅವರು ಹೇಳಿದಂತೆ ಎರಡು ಲಕ್ಷ ಹಣವನ್ನು ರೆಡಿ ಮಾಡಿಕೊಂಡಿದ್ದಾನೆ. ಇನ್ನೂರು ಕೋಟಿ ಪಡೆಯುವ ಆಸೆಯಲ್ಲಿ, ತನ್ನ ಎರಡು ಲಕ್ಷ ಹಣವನ್ನೂ ಕಳೆದುಕೊಳ್ಳುತ್ತಾನಾ ಎಂಬುದೇ ಮುಂದಿನ ಕುತೂಹಲ.


Click it and Unblock the Notifications











