ಡಿಸೆಂಬರ್ 10 ರಂದು ಸೀರಿಯಲ್ ಹಬ್ಬ: ಉದಯ ಟಿವಿಯಲ್ಲಿ ಮಸ್ತ್ ಮನರಂಜನೆ
ಹಲವು ವರ್ಷಗಳಿಂದ ಕನ್ನಡಿಗರಿಗೆ ನಾನ್ ಸ್ಟಾಪ್ ಮನರಂಜನೆ ನೀಡುತ್ತಿರುವ ವಾಹಿನಿ ಉದಯ ಟಿವಿ. ಚಲನಚಿತ್ರ, ಧಾರಾವಾಹಿ, ರಿಯಾಲಿಟಿ ಶೋ... ಹೀಗೆ ಪ್ರತಿಯೊಂದು ಮನರಂಜನಾ ಆಯಾಮಗಳಲ್ಲೂ ಉದಯ ಟಿವಿ ತನ್ನ ಹೆಗ್ಗುರುತು ಮೂಡಿಸಿದೆ. ಈ ಎಲ್ಲವುಗಳ ಸಾಲಿಗೆ ಹೊಸ ಸೇರ್ಪಡೆ 'ಸೀರಿಯಲ್ ಹಬ್ಬ'.
ದೀಪಾವಳಿಯ ಸಂದರ್ಭದಲ್ಲಿ ಧಾರವಾಡದಲ್ಲಿ ನಡೆಸಿದ 'ಸೀರಿಯಲ್ ಹಬ್ಬ'ದ ಯಶಸ್ಸಿನ ಬೆನ್ನಲ್ಲೇ ದಾವಣಗೆರೆಯಲ್ಲೂ ಹಬ್ಬದ ಸಂಭ್ರಮವನ್ನಾಚರಿಸಿದೆ. ಈ 'ಸೀರಿಯಲ್ ಹಬ್ಬ' ಡಿಸೆಂಬರ್ 10 (ಭಾನುವಾರ) ರಂದು ಮಧ್ಯಾಹ್ನ 3 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈ ಸಲ ಮುಖ್ಯವಾಗಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡವರು 'ಕಾವೇರಿ' ಮತ್ತು 'ದೊಡ್ಮನೆ ಸೊಸೆ' ಧಾರಾವಾಹಿಯ ತಾರೆಯರು ಮತ್ತು ತಂತ್ರಜ್ಞರು. ಬೆಣ್ಣೆ ದೋಸೆಗೆ ಹೆಸರಾದ ದಾವಣಗೆರೆಯಲ್ಲಿ ವೀಕ್ಷಕರೊಂದಿಗೆ ಬೆರೆತು ಹಾಡಿ, ಕುಣಿದು ನಲಿದಾಡಿದರು. ಮುಂದೆ ಓದಿರಿ...

'ದೊಡ್ಮನೆ ಸೊಸೆ' ಜೊತೆ 'ಕಾವೇರಿ'
'ಕಾವೇರಿ' ಹಾಗೂ 'ದೊಡ್ಮನೆ ಸೊಸೆ'... ಎರಡೂ ಧಾರಾವಾಹಿಗಳು ಕೌಟುಂಬಿಕ ಜೀವನದ ಕನ್ನಡಿಯ ಬಿಂಬಗಳಾಗಿದ್ದು, ಸಂಬಂಧಗಳ ಸಂಕೀರ್ಣಗಳು ಹಾಗೂ ಮೌಲ್ಯವನ್ನು ಸಾರುತ್ತಿವೆ. 'ಕಾವೇರಿ'... ತ್ಯಾಗಮಯಿ ಹುಡುಗಿಯೊಬ್ಬಳ ಕಥೆಯಾಗಿದ್ದು, ಅವಳ ಆ ಸ್ವಭಾವದಿಂದಲೇ ಸಂಕಷ್ಟಕ್ಕೆ ಸಿಲುಕಿದರೂ, ತನ್ನ ಮೂಲ ಸ್ವಭಾವವನ್ನು ಬಿಡದೇ, ಎಲ್ಲ ತೊಂದರೆ, ತೊಡಕುಗಳನ್ನೂ ಮೀರಿ, ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತಾಳೆ ಎಂಬುದು ಕಥಾಹಂದರ. ಇನ್ನು 'ದೊಡ್ಮನೆ ಸೊಸೆ'... ದೊಡ್ಮನೆ ಹೆಸರೇ ಹೇಳುವಂತೆ ಸಂಪತ್ತಿನಲ್ಲೂ, ಶಾಸ್ತ್ರ ಸಂಪ್ರದಾಯದಲ್ಲೂ ನಿಜಕ್ಕೂ ದೊಡ್ಮನೆಯೇ. ಹೆಣ್ಣುಮಗು ಹುಟ್ಟಿದರೆ, ಅವಳಿಗೆ ಸನ್ಯಾಸ ದೀಕ್ಷೆ ಕೊಡುವ ಸಂಪ್ರದಾಯವನ್ನು ತಲತಲಾಂತರಗಳಿಂದ ಪಾಲಿಸಿಕೊಂಡು ಬಂದಿರುತ್ತಾರೆ. ಹೀಗಿರುವಾಗ, ಹುಟ್ಟಿದ ಹೆಣ್ಣುಮಗುವೊಂದನ್ನು ಗುಟ್ಟಾಗಿ ಮನೆಯಿಂದ ಹೊರಗೆ ಬಿಡಲಾಗುತ್ತದೆ. ಬೇರೆಯವರ ಆಶ್ರಯದಲ್ಲಿ ಬೆಳೆದ ಆ ಮಗು ವಿವಿಧ ಘಟನೆಗಳ ತರುವಾಯ ಇದೇ ಮನೆಗೆ ಸೊಸೆಯಾಗಿ ಬರುತ್ತಾಳೆ. ಹುಟ್ಟಿದ ಮನೆಗೇ ಸೊಸೆಯಾಗಿ ಬರುವ ವಿನೂತನ ಕಥೆ ವೀಕ್ಷಕರಿಗೆ ಇಷ್ಟವಾಗಿದೆ.

ಶಾಲಿನಿ-ನಿರಂಜನ್ ನಿರೂಪಣೆ
ಖ್ಯಾತ ನಿರೂಪಕರಾದ ಶಾಲಿನಿ ಹಾಗೂ ನಿರಂಜನ್ ದೇಶಪಾಂಡೆ ದಾವಣಗೆರೆಯ ವೀಕ್ಷಕ ಪ್ರಭುಗಳಿಗೆ ಸ್ವಾಗತ ಕೋರುತ್ತಿದ್ದಂತೆ ಮುಗಿಲು ಮುಟ್ಟುವ ಚಪ್ಪಾಳೆ ಸಪ್ಪಳ. ಸೀರಿಯಲ್ ಹಬ್ಬ ಬರೇ ಹಾಡು ಕುಣಿತಕ್ಕಷ್ಟೆ ಸೀಮಿತವಾಗಿಲ್ಲ. ವೀಕ್ಷಕರು ತಮ್ಮ ಸಂದೇಹಗಳ ಬಗ್ಗೆ ಕಲಾವಿದರು, ತಂತ್ರಜ್ಞರ ಜತೆ ಸಂವಾದವನ್ನೂ ನಡೆಸಿದರು. ಧಾರಾವಾಹಿಯ ಕಥೆಯ ಬಗ್ಗೆ ತಮ್ಮ ಕುತೂಹಲವನ್ನು ಹಂಚಿಕೊಂಡರು. 'ಕಾವೇರಿ' ಧಾರಾವಾಹಿಯ ಹೊಸ ನಾಯಕಿಯನ್ನು ಇದೇ ವೇದಿಕೆ ಮೂಲಕ ವೀಕ್ಷಕರಿಗೆ ಪರಿಚಯಿಸಲಾಯಿತು. ಹೊಸಾ ನಾಯಕಿ ಶೋಭಾ ಪರ್ಫಾರ್ಮೆನ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕಲಾವಿದರ ದಂಡೇ ನೆರೆದಿತ್ತು
ಬರೀ ಧಾರಾವಾಹಿ ಕಲಾವಿದರಷ್ಟೇ ಅಲ್ಲ... ಉದಯ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ, 'ಕಿಲಾಡಿ ಕಿಡ್ಸ್' ನ ವಿಜೇತ ತಂಡದವರು ಪ್ರಸ್ತುತ ಪಡಿಸಿದ ನೃತ್ಯ ವೀಕ್ಷಕರ ಮನಸೂರೆಗೊಂಡಿತು. ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಈ ಎರಡು ಧಾರಾವಾಹಿಗಳು ಅತೀ ದೊಡ್ಡ ತಾರಾಬಳಗವನ್ನೇ ಹೊಂದಿದೆ. ಅಶ್ವಿನಿ ಗೌಡ, ಸುರೇಶ್ ರೈ, ಸಂಗೀತಾ ಭಟ್, ವಿನಯ್ ರಾಮ್ ಪ್ರಸಾದ್, ಶ್ರೀಧರ್ ಸೇರಿದಂತೆ ಇನ್ನೂ ಅನೇಕ ಹೆಸರಾಂತ ಕಲಾವಿದರ ದಂಡೇ ದಾವಣಗೆರೆಯಲ್ಲಿ ನೆರೆದಿತ್ತು.

ಕಾರ್ಯಕ್ರಮ ಪ್ರಸಾರ ಯಾವಾಗ.?
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೌರವವನ್ನೂ ಸಲ್ಲಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಶಾಸಕ, ಶಾಮನೂರು ಶಿವಶಂಕರಪ್ಪ ಹಾಗೂ ಖ್ಯಾತ ಜ್ಯೋತಿಷಿ ರವಿಶಂಕರ್ ಗುರೂಜಿ ಅವರಿಗೆ 'ಉದಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ವಿನುತಾ.ಆರ್ ಗೆ ವಿದ್ಯಾರ್ಥಿವೇತನ ನೀಡಲಾಯಿತು. `ಸೀರಿಯಲ್ ಹಬ್ಬ' ಡಿಸೆಂಬರ್ 10 (ಭಾನುವಾರ) ಮಧ್ಯಾಹ್ನ 3 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











